ಮಂಗಳೂರು: ವಸತಿ ಸಮುಚ್ಚಯದ 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

Update: 2023-03-30 11:59 GMT

ಮಂಗಳೂರು, ಮಾ.30: ಯುವಕನೋರ್ವ ವಸತಿ ಸಮುಚ್ಚಯದ 14ನೇ ಮಹಡಿಯಿಂದ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಇಂದು ಮುಂಜಾನೆ ನಗರದ ಕದ್ರಿಯಿಂದ ವರದಿಯಾಗಿದೆ.

ಮೊಬೈಲ್ ಕೇರ್ ನ ಜಿ.ಅಬ್ದುಲ್ ಸಲೀಂ ಎಂಬವರ ಪುತ್ರ ಮುಹಮ್ಮದ್ ಶಮಾಲ್(21) ಮೃತಪಟ್ಟವರು. ಕದ್ರಿಯ ಕೆಪಿಟಿ ಹಿಂಬದಿಯಲ್ಲಿರುವ ಪ್ಲಾನೆಟ್ ಎಸ್.ಕೆ.ಎಸ್. ವಸತಿ ಸಮುಚ್ಚಯದಲ್ಲಿ ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. 

ರಮಝಾನ್ ಉಪವಾಸದ ಹಿನ್ನೆಲೆಯಲ್ಲಿ ಸಹರಿ ಉಪಾಹಾರ ಸೇವಿಸಿದ ಬಳಿಕ ಫ್ಲ್ಯಾಟ್ ನ ಬಾಲ್ಕನಿಗೆ ಹೋಗಿದ್ದ ಶಮಾಲ್ ನಿದ್ದೆಗಣ್ಣಿನಲ್ಲಿ ಆಯತಪ್ಪಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕದ್ರಿ ಠಾಣಾ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Similar News