ಬಿಜೆಪಿ, ಆರೆಸ್ಸೆಸ್ ನದ್ದು ದಲಿತರನ್ನು ಒಡೆದು ಆಳುವ ದಮನಕಾರಿ ನೀತಿ: ಅಖಿಲ ಭಾರತ ಬಂಜಾರ ಸೇವಾ ಸಮಿತಿ ಆಕ್ರೋಶ

Update: 2023-03-30 12:07 GMT

ಬೆಂಗಳೂರು, ಮಾ. 30: ಒಳ ಮೀಸಲಾತಿ ಮೂಲಕ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡಗಳ ಐಕ್ಯತೆಯನ್ನು ನುಚ್ಚುನೂರು ಮಾಡಿ ಬಿಜೆಪಿ ಮತ್ತು ಆರೆಸ್ಸೆಸ್ , ದಲಿತರನ್ನು ಒಡೆದು ಆಳುವ ದಮನಕಾರಿ ನೀತಿಯನ್ನು ಅನುಸರಿಸುತ್ತಿವೆ ಎಂದು ಅಖಿಲ ಭಾರತ ಬಂಜಾರ ಸೇವಾ ಸಮಿತಿ ಆಪಾದಿಸಿದೆ.

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪರಮೇಶ್ ನಾಯ್ಕ್, ‘ಪರಿಶಿಷ್ಟ ಜಾತಿಯಲ್ಲಿರುವ ಸಮಾನ ಅವಕಾಶ ವಂಚಿತ ಶೋಷಿತ ತಳ ಸಮುದಾಯಗಳನ್ನು ಮರು ವರ್ಗೀಕರಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇರುವುದಿಲ್ಲ, ಆದರೂ, ಸರಕಾರ ಮೀಸಲಾತಿಯ ಮೂಲ ಪರಿಕಲ್ಪನೆಯಾದ ಸಾಮಾಜಿಕ, ಶೈಕ್ಷಣಿಕ ಹಾಗೂ ವೈಜ್ಞಾನಿಕ ಮಾನದಂಡಗಳ ಮೂಲಕ ಅಧ್ಯಯನ ಮಾಡದೆ ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಮರು ವರ್ಗೀಕರಿಸಿ 5 ಗುಂಪುಗಳನ್ನಾಗಿ ಮಾಡುತ್ತಿರುವುದು ಕಾರ್ಯಸಾಧುವಾಗುವುದಿಲ್ಲ’ ಎಂದರು.

ಮೀಸಲಾತಿಗೆ ಹಿಂದುಳುದಿರುವಿಕೆ ಮಾನದಂಡವಾದ ಮೇಲೆ ಒಳಮೀಸಲಾತಿಗೂ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕೆ ಹೊರತು ಜನಸಂಖ್ಯೆಯಲ್ಲ. ಆದ್ದರಿಂದ ಈ ಆಯೋಗದ ವರದಿಯನ್ನು ಖಂಡಿಸುತ್ತೇವೆ. ವರದಿ ಆಧಾರಿತವಾದ ವರ್ಗೀಕರಣ ಅಸಂವಿಧಾನಿಕವಾಗಿದೆ. ಹಾಗೆಯೇ ಸಂವಿಧಾನ ಅನುಚ್ಛೇದ 17ರಲ್ಲಿ ಈಗಾಗಲೇ ದೇಶದಾದ್ಯಂತ ಅಸ್ಪøಶ್ಯತೆ ಆಚರಣೆ ನಿಷಿದ್ಧವಾಗಿದ್ದರೂ ಸಹ ಸರಕಾರ ಸ್ಪøಶ್ಯ ಹಾಗೂ ಅಸ್ಪøಶ್ಯ ಎಂಬ ಪರಿಕಲ್ಪನೆ ಮಾಡಿ ಒಳ ವರ್ಗೀಕರಣ ಮಾಡುತ್ತಿರುವುದು ಸಂವಿಧಾನದ ಸಮಾನತೆಯ ಆಶಯಕ್ಕೆ ವಿರುದ್ಧವಾಗಿದೆ. ಈ ಬೆಳವಣಿಗೆಯು ದೇಶದಾದ್ಯಂತ ಹುನ್ನಾರದ ಭಾಗವಾಗಿದೆ ಎಂದು ಅವರು ಆಪಾದಿಸಿದರು.

ಸಂವಿಧಾನದ ಅನುಚ್ಛೇದ 341(2)ನ್ನು ಉಲ್ಲೇಖ ಮಾಡಿ ಸರಕಾರ ಬಂಜಾರ, ಬೋವಿ, ಕೊರಮ, ಕೊರಚ, ಕೊರವ ಸಮಾಜಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗೆ ತೆಗೆಯುವ ಹುನ್ನಾರವಾಗಿರುತ್ತದೆ. ಇದು ಬಿಜೆಪಿ ಮತ್ತು ಆರ್‍ಎಸ್‍ಎಸ್‍ನ ಗುಪ್ತ ಕಾರ್ಯವಾಗಿರುತ್ತದೆ. ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವ ಸದಾಶಿವ ಆಯೋಗದ ವರದಿಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ಬಿಜೆಪಿಯ ಲಂಬಾಣಿ, ಬೋವಿ ಸಮಾಜದ ಮಂತ್ರಿಗಳು ಹಾಗೂ ಶಾಸಕರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕೆಂದು ಬಂಜಾರ, ಬೋವಿ, ಕೊರಮ, ಕೊರಚ, ಕೊರವ ಮತ್ತು ಇತರೆ ಪರಿಶಿಷ್ಟ ಜಾತಿಯ ಬಾಂಧವರಲ್ಲಿ ಒತ್ತಾಯಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ್ ನಾಯ್ಕ್, ಬಾಬು ರಾವ್ ಚೌಹ್ಹಾಣ್ ಉಪಸ್ಥಿತರಿದ್ದರು.

Similar News