ಮಂಗಳೂರು: ಬ್ಯಾಂಕ್‌ಗೆ ವಂಚನೆ ಆರೋಪ; ಸೆನ್ ಠಾಣೆಗೆ ದೂರು

Update: 2023-03-30 16:22 GMT

ಮಂಗಳೂರು, ಮಾ.30: ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯೊಂದರ ಪ್ರಮುಖರು 88.22 ಕೋ.ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬ್ಯಾಂಕ್‌ ವೊಂದರ ವಿಜಿಲೆನ್ಸ್ ಆಫೀಸರ್ ಪಿ.ಎಸ್. ಪದ್ಮಾವತಿ ನಗರದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರದ ಎಂ.ಜಿ.ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್‌ವೊಂದರ ಶಾಖೆಗೆ ಫುಡ್ ಆ್ಯಂಡ್ ಎಕ್ಸ್‌ಪೋರ್ಟ್ಸ್ ಕಂಪೆನಿಯೊಂದರ ಆಡಳಿತ ನಿರ್ದೇಶಕ ಶ್ರೀನಿವಾಸ ಭಟ್, ನಿರ್ದೇಶಕರಾದ ವೀಣಾ ಎಸ್.ಭಟ್, ಯು.ಎನ್.ಜೆ.ನಂಬೂರಿ ಹಾಗೂ ಇತರರು 2015ರ ಅ.10ರಂದು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕಂಪೆನಿಯ ದಾಖಲಾತಿ ಹಾಗೂ ಭದ್ರತಾ ಪತ್ರವನ್ನು ಬ್ಯಾಂಕಿಗೆ ನೀಡಿದ್ದು, ಅದನ್ನು ಪರಿಶೀಲನೆ ನಡೆಸಿ ಅ.20ರಂದು 194.83 ಕೋ.ರೂ. ಸಾಲ ಮಂಜೂರು ಮಾಡಲಾಗಿತ್ತು.

ಕಂಪೆನಿಯವರು ಪ್ರತಿ ವರ್ಷ ಸಾಲವನ್ನು ರಿನಿವಲ್ ಮಾಡಿಕೊಂಡು ಸಾಲ ಮರುಪಾವತಿಸಿಕೊಂಡು ಬಂದಿದ್ದಾರೆ. 2021ರ ಜುಲೈ ತಿಂಗಳಲ್ಲಿ ಅಡಿಟ್ ಮಾಡುವ ಸಮಯ ಕಂಪೆನಿಯವರು ಬ್ಯಾಂಕ್ ಹಾಗೂ ಸಂಬಂಧಿಸಿದ ಪ್ರಾಧಿಕಾರಕ್ಕೆ ತಿಳಿಸದೆ ಅನುಮತಿಯನ್ನೂ ಪಡೆಯದೆ ಆರೋಪಿಗಳ ವಶದಲ್ಲಿದ್ದ ಬ್ಯಾಂಕಿಗೆ ಅಡಮಾನ ಇರಿಸಿದ್ದ ಸ್ಟಾಕನ್ನು ಬ್ಯಾಂಕಿಗೆ ವಂಚಿಸಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ ನಾಶ ಮಾಡಿದ್ದಾರೆ. 2019ರ ಡಿ.1ರಿಂದ 2020ರ ಜ.31ರ ನಡುವೆ ಈ ಕೃತ್ಯ ಎಸಗಿದ್ದು, ಇದರಿಂದ ಬ್ಯಾಂಕಿಗೆ 88.22 ಕೋ. ರೂ.ನಷ್ಟವಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸೆನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News