ಯಾರೇ ಬಂದ್ರೂ ಅಟ್ಟಾಡಿಸಿ ಹೊಡೀರಿ:‌ ಸಚಿವ ಮುನಿರತ್ನ ಪ್ರಚೋದನಕಾರಿ ಭಾಷಣ; ವಿಡಿಯೋ ವೈರಲ್‌

Update: 2023-03-31 09:41 GMT

ಬೆಂಗಳೂರು: ಆರ್‌ ಆರ್‌ ನಗರ ಶಾಸಕ, ಸಚಿವ ಮುನಿರತ್ನ ಹಿಂಸೆಗೆ ಬಹಿರಂಗ ಕರೆ ನೀಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮುನಿರತ್ನ, ತಮಿಳು ಭಾಷೆಯಲ್ಲಿ ಮಾಡಿದ ಭಾಷಣದಲ್ಲಿ, ಯಾರಾದರೂ ಬಂದರೆ "ಅಟ್ಟಾಡಿಸಿ ಹೊಡೀರಿ" ಎಂದು  ಹೇಳುತ್ತಿರುವ ವಿಡಿಯೋ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

ಆರ್‌ ಆರ್‌ ನಗರದ ಜಾಲಹಳ್ಳಿ ವಾರ್ಡಿನ ಖಾತಾನಗರದಲ್ಲಿ ಈ ಕಾರ್ಯಕ್ರಮ ನಡೆದಿದೆ ಎನ್ನಲಾಗಿದ್ದು, ಸಭಿಕರಲ್ಲಿ ಯಾರೋ ಇದರ ವಿಡಿಯೋ ಸೆರೆ ಹಿಡಿದಿದ್ದಾರೆ. 

“ಯಾರಾದ್ರೂ ಒಳಗೆ ಬಂದ್ರೆ ಅಟ್ಟಾಡಿಸಿಕೊಂಡು ಹೊಡೀರಿ, ಯಾರೇ ಬಂದ್ರೂ ಹೊಡೀರಿ, ಉಳಿದದ್ದು ನಾನು ನೋಡಿಕೊಳ್ತೀನಿ, ಹೇಗೆ ಹೊಡೀಬೇಕಂದ್ರೆ ಅವರು ತಿರುಗಿ ನೋಡದೆ ಅವರು ಓಡ್ಬೇಕು” ಎಂದು ಮುನಿರತ್ನ ಕರೆ ನೀಡಿದ್ದಾರೆ. ಅಲ್ಲದೆ, ಯಾರ್ಯಾರು ಹೊಡೀತಿರಿ ಕೈ ಎತ್ತಿ ನೋಡೋಣ ಶಪಥ ತೆಗೆದುಕೊಳ್ಳುವುದೂ ವಿಡಿಯೋದಲ್ಲಿ ಸೆರೆಯಾಗಿದೆ.  “ಸಾಕು, ನಾಳೆ ನಮ್ಮದೇ, ನಾಳೆ ನಾವು ಹಾಕುವ ಓಟ್‌ ನಮ್ಮ ನಾಳೆಯನ್ನು ಡಿಸೈಡ್‌ ಮಾಡುತ್ತೆ” ಎಂದು ಬಹಿರಂಗವಾಗಿ ಮುನಿರತ್ನ ಹೇಳುತ್ತಿರುವುದು ವೈರಲ್‌ ವಿಡಿಯೋದಲ್ಲಿ ದಾಖಲಾಗಿದೆ.

“ಜಾಲಹಳ್ಳಿ ವಾರ್ಡಿನ ಖಾತಾನಗರಕ್ಕೆ ಯಾರಾದರೂ ಬಂದರೆ "ಹೊಡೆದು ಕಳಿಸಿರಿ" ಎಂದು ಕ್ಷೇತ್ರದ ಶಾಸಕ ಸಾರ್ವಜನಿಕ ಸಭೆಯಲ್ಲಿ ನಿಂತು ತಮಿಳಿನಲ್ಲಿ ಪ್ರಚೋದಿಸಿ ಚುನಾವಣೆಯ ಸಮಯದಲ್ಲಿ ನೇರವಾಗಿ ಅಶಾಂತಿ ಸೃಷ್ಟಿಸಲೆತ್ನಿಸುತ್ತಾರೆಂದರೆ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಹುಟ್ಟಿಸುತ್ತದೆ..” ಎಂದು ಆರ್‌ಆರ್‌ ನಗರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಟ್ವೀಟ್‌ ಮಾಡಿದ್ದಾರೆ

ಕನ್ನಡ ನೆಲದಲ್ಲಿ ನಿಂತು ತಮಿಳು-ಕನ್ನಡ ಮಾತನಾಡುವವರ ಮಧ್ಯೆ ತಮಿಳಿನಲ್ಲಿ ದ್ವೇಷದ ಕಿಚ್ಚು ಹೊತ್ತಿಸಿ "ಹಿಂಸಿಸಿ, ಮುಂದಿನದು ನಾನು ನೋಡ್ಕೊಂತೀನಿ" ಎಂಬ ಬಹಿರಂಗ ಪ್ರಚೋದನೆಯಿಂದ ಯಾರಿಗಾದರೂ  ಪ್ರಾಣಹಾನಿಯಾದರೆ ಯಾರು ಹೊಣೆ? ತನ್ನ ಬೆಂಬಲಿಗರ ಹಾಗೂ ಸಾಮಾನ್ಯ ಜನರ ಜೀವಕ್ಕೆ ಇವರ ಬಳಿ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿರುವ ಕುಸುಮಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕನಿಂದ ಶ್ರೀರಾಮ ಪ್ರತಿಮೆಗೆ ಅವಮಾನ?

Similar News