ನೀತಿ ಸಂಹಿತೆ ಉಲ್ಲಂಘನೆ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಚುನಾವಣಾಧಿಕಾರಿಗೆ ಎರಡು ಪ್ರತ್ಯೇಕ ದೂರು

Update: 2023-03-31 15:17 GMT

ಬೆಳ್ತಂಗಡಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ‌ ಸಿಪಿಐಎಂ ಮುಖಂಡ ಶೇಖರ್ ಲಾಯಿಲ ಅವರು ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ಎರಡು ಪ್ರತ್ಯೇಕ ದೂರು ನೀಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪತ್ರಿಕೆಗೆ ಹಣ ಪಾವತಿ ಮಾಡಿ ಮಾ.30ರಂದು ದಿನಪ್ರತಿಕೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೆಸರಿನಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಶಾಸಕರ ಸಾಧನೆಯಂತೆ ಉದಯವಾಣಿಯ ಸುದಿನ ಕೊನೆಯ ಪುಟದಲ್ಲಿ ಪೂರ್ಣ ಪುಟದಲ್ಲಿ ವರದಿ ಪ್ರಕಟಿಸಲಾಗಿದ್ದು, ಇದು ಮತದಾರರ ಮೇಲೆ ಪ್ರಭಾವ ಬೀರುವಂತಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಉದಯವಾಣಿ ಪತ್ರಿಕೆ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಎಡನೇಯದಾಗಿ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನದಲ್ಲಿ ನಡೆದ ಗ್ರಾಮ ವಿಕಾಸ ಹಬ್ಬದ ಹೆಸರಿನಲ್ಲಿ ಮಾ.30 ರಂದು ಸಂಜೆ 7 ಗಂಟೆಯಿಂದ ಬಲಿಂಜೆ ಎಂಬಲ್ಲಿ ರಾತ್ರಿ ಸುಮಾರು 12:25 ರ ವರೆಗೆ ಸಭಾ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಊಟೋಪಾಚಾರವನ್ನು ಮತದಾರರಿಗೆ ಹಂಚಲಾಗಿದ್ದು‌, ಇದರಲ್ಲಿ ಶಾಸಕ ಹರೀಶ್ ಪೂಂಜ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದು, ಕಾರ್ಯಕ್ರಮಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಊಟೋಪಚಾರವನ್ನು ಹಂಚಲಾಗಿದೆ. ರಾತ್ರಿ 10 ಗಂಟೆಗೆ ಧ್ವನಿವರ್ಧಕ ಪರವಾನಿಗೆ ಪಡೆದು ಮಧ್ಯರಾತ್ರಿ 12:25 ರ ತನಕ ಕಾನೂನು ಬಾಹಿರ ಸಭಾ ಕಾರ್ಯಕ್ರಮ ಮಾಡಲಾಗಿದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆ ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಈ ಕಾರ್ಯಕ್ರಮದ ಆಯೋಜಕರು, ಭಾಗವಹಿಸಿದ್ದ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶೇಖರ ಲಾಯಿಲ ಅವರು ಬೆಳ್ತಂಗಡಿಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಎರಡು ಪ್ರತ್ಯೇಕ ದೂರಿನ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಎಫ್.ಐ.ಆರ್ ದಾಖಲಿಸಿಕೊಳ್ಳುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ ಎಂದು ಶೇಖರ್ ಲಾಯಿಲ ಅವರು ಮಾಹಿತಿ ನೀಡಿದ್ದಾರೆ.

Similar News