ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಿಂದ ಸುಲಿಗೆ ಆರೋಪ: ಮತ್ತಿಬ್ಬರು ಕಾನ್‍ಸ್ಟೆಬಲ್‍ಗಳು​​ ಅಮಾನತು

Update: 2023-04-02 11:58 GMT

ಬೆಂಗಳೂರು, ಎ.2: ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಿಂದ 10 ಲಕ್ಷ ರೂ. ಲಂಚ ಪಡೆದ ಆರೋಪದಡಿ ಇಲ್ಲಿನ ಪುಲಿಕೇಶಿನಗರ ಠಾಣೆಯ ಇಬ್ಬರು ಕಾನ್‍ಸ್ಟೆಬಲ್‍ಗಳನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ನಸ್ರುಲ್ಲಾ, ಸನಾವುಲ್ಲಾ ಎಂಬುವರು ಅಮಾನತುಗೊಂಡಿರುವ ಪೊಲೀಸ್ ಕಾನ್‍ಸ್ಟೆಬಲ್‍ಗಳು ಹೇಳಲಾಗುತ್ತಿದೆ.

ಮಾರ್ಚ್ 20ರಂದು ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿದ್ದ ಪುಲಿಕೇಶಿನಗರ ಠಾಣೆಯ ಪಿಎಸ್ಸೈ ಸೇರಿದಂತೆ ಮೂವರು ಸಿಬ್ಬಂದಿ, ಆತನನ್ನು ಅಕ್ರಮವಾಗಿ ಕೂಡಿ ಹಾಕಿ, ಪ್ರಕರಣ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದರು. ವಶಕ್ಕೆ ಪಡೆದಿದ್ದ ಪಿಎಸ್ಸೈ ರೋಮಾನ್ ಪಾಶಾ ನೇತೃತ್ವದ ಸಿಬ್ಬಂದಿ ತಂಡ, ಠಾಣಾ ಡೈರಿಯಲ್ಲಿ ನಮೂದಿಸಿರಲಿಲ್ಲ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಶಂಕಿತ ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿ ಬಿಟ್ಟು ಕಳಿಸಿದ್ದರು ಎಂದು ದೂರು ದಾಖಲಾಗಿತ್ತು. ಈ ಘಟನೆಯ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಐಜಿಪಿ ಚಂದ್ರಶೇಖರ್ ಅವರಿಗೆ ಆರೋಪಿ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಐಜಿಪಿ ಆಂತರಿಕ ತನಿಖೆ ನಡೆಸುವಂತೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಿಗೆ ಸೂಚಿಸಿದ್ದರು. 

ಪ್ರಾಥಮಿಕ ತನಿಖೆಯಲ್ಲಿ ಸುಲಿಗೆ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಐಜಿಪಿಗೆ ವರದಿ ಸಲ್ಲಿಸಲಾಗಿತ್ತು. ವರದಿಯನ್ನು ಆಧರಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಆರೋಪಿತ ಪಿಎಸ್ಸೈ ಮತ್ತು ಓರ್ವ ಕಾನ್ ಸ್ಟೇಬಲ್ ಅನ್ನು ಅಮಾನತುಗೊಳಿಸಿದ್ದರು. ಇದೀಗ ರವಿವಾರ ಇನ್ನಿಬ್ಬರು ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಿದ್ದಾರೆ.

Similar News