ಕಣಚೂರು ಮೆಡಿಕಲ್ ಕಾಲೇಜು ಹೆಸರಿನಲ್ಲಿ ವಂಚನೆ: ನೋಯ್ಡಾ ಮೂಲದ ಆರೋಪಿ ಇಫ್ತಿಕಾರ್ ಸೆರೆ

Update: 2023-04-02 12:17 GMT

ಮಂಗಳೂರು: ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಹೆಸರಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದ ಪ್ರಕರಣದಲ್ಲಿ ಆರೋಪಿ ನೋಯ್ಡಾ ಮೂಲದ ಇಫ್ತಿಕಾರ್ ಅಹ್ಮದ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬೀದರ್ ಮೂಲದ ಶಶಿಕಾಂತ್ ದೀಕ್ಷಿತ್ ಎಂಬವರು ತನ್ನಿಂದ 22.5 ಲಕ್ಷ ರೂ. ಪಡೆದು ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ದೊರಕಿಸುವುದಾಗಿ ನಂಬಿಸಿ ಇಫ್ತಿಕಾರ್ ಅಹ್ಮದ್ ಮತ್ತಿತರರು ಸೇರಿ ಮೋಸ ಮಾಡಿದ್ದಾಗಿ ಉಳ್ಳಾಲ ಠಾಣೆಗೆ ದೂರು ನೀಡಿದ್ದರು.

ಮಾರ್ಚ್ 5ರಂದು ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೇ ಸಂದರ್ಭದಲ್ಲಿ ಮುಂಬೈನಲ್ಲಿ ಮೆಡಿಕಲ್ ಸೀಟು ಹೆಸರಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಇಫ್ತಿಕಾರ್ ಅಹ್ಮದ್ ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.

ಇದೀಗ ಉಳ್ಳಾಲ ಪೊಲೀಸರು ಆರೋಪಿ ಇಫ್ತಿಕಾರ್ ಅಹ್ಮದ್ ನನ್ನು ಬಾಡಿ ವಾರೆಂಟ್ ಪಡೆದು ಮುಂಬೈನಿಂದ ಮಂಗಳೂರಿಗೆ ಕರೆ ತಂದಿದ್ದಾರೆ.  ಇಫ್ತಿಕಾರ್ ಅಹ್ಮದ್ ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೆಂದು ಗುರುತಿಸಲಾಗಿದೆ. ಈತ ದೇಶಾದ್ಯಂತ ಮೆಡಿಕಲ್ ಸೀಟು ಲಾಬಿಯ ನೆಪದಲ್ಲಿ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಏಜನ್ಸಿ ಹೆಸರಲ್ಲಿ ಮೋಸ ಮಾಡಿರುವುದು  ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಇಫ್ತಿಕಾರ್ ನನ್ನು ಮುಂಬೈನಿಂದ ಕರೆ ತಂದ ಉಳ್ಳಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕಣಚೂರು ಮೆಡಿಕಲ್ ಕಾಲೇಜು ಹೆಸರಿನಲ್ಲಿ ವಿಶಾಖಪಟ್ಟಣ ಮೂಲದ ಮತ್ತೊಬ್ಬ ವ್ಯಕ್ತಿಗೂ ಇದೇ ರೀತಿ ಮೋಸ ಮಾಡಲಾಗಿತ್ತು. ಮೆಡಿಕಲ್ ಸೀಟು ಕೊಡಿಸುತ್ತೇವೆಂದು 50 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News