×
Ad

ಜಯನಗರ ಕ್ಷೇತ್ರದ ಟಿಕೆಟ್ ಕೈತಪ್ಪಲು ತೇಜಸ್ವಿ ಸೂರ್ಯ, ಅಶೋಕ್ ಕಾರಣ: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪ

Update: 2023-04-12 18:34 IST

ಬೆಂಗಳೂರು, ಎ.12: ಜಯನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಲು ಸಂಸದ ತೇಜಸ್ವಿ ಸೂರ್ಯ ಹಾಗೂ ಸಚಿವ ಆರ್.ಅಶೋಕ್ ಅವರೇ ನೇರ ಕಾರಣ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 18 ವರ್ಷಗಳಿಂದ ಬಿಜೆಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಹಿಂದೆ 2014ರಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ನನಗೆ ಟಿಕೆಟ್ ಸಿಗುವುದು ಕೇಂದ್ರ ಸಚಿವರೊಬ್ಬರು ತಪ್ಪಿಸಿದರು. ಆನಂತರ, ಜಯನಗರ ಕ್ಷೇತ್ರದಲ್ಲಿ ಸಂಘಟನಾ ಕಾರ್ಯ ಮಾಡಿದ್ದು,  ಪ್ರಬಲ ಆಕಾಂಕ್ಷಿ ಕೂಡ ಆಗಿದ್ದೇನೆ.ಆದರೆ, ನನಗೆ ಟಿಕೆಟ್ ತಪ್ಪಿಸಿರುವ ಹಿಂದೆ ಆರ್.ಅಶೋಕ್ ಹಾಗೂ ತೇಜಸ್ವಿ ಸೂರ್ಯ ಪಾತ್ರವಿದೆ ಎಂದು ದೂರಿದರು.

ನನಗೆ ಆಗಿರುವ ಅನ್ಯಾಯದ ಕುರಿತ ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದೇನೆ. ಪಕ್ಷಕ್ಕೆ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ. ಅನೇಕ ಒತ್ತಡಗಳಿದ್ದರೂ, ನಾನು ಪಕ್ಷಕ್ಕಾಗಿ ದುಡಿದ್ದಿದ್ದೇನೆ. ಎ.13ರ ಬೆಳ್ಳಗೆ 11 ಗಂಟೆರವರೆಗೂ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯರಿಗೆ ಗಡುವು ನೀಡಿದ್ದು, ಒಂದು ವೇಳೆ  ಸಮಾಧಾನಕರ ಉತ್ತರ ಬಂದಿಲ್ಲವಾದರೆ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದರು.

ಈಗಾಗಲೇ ಪದ್ಮನಾಭನಗರದ 1,273 ಕಾರ್ಯಕರ್ತರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ ಎಂದ ಅವರು, ಬಿಜೆಪಿಯಿಂದ ಟಿಕೆಟ್ ಸಿಗದೇ ಹೋದರೆ ಅಶೋಕ್ ಅವರ ಪದ್ಮನಾಭನಗರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಅವರು ಪ್ರಕಟಿಸಿದರು.

Similar News