ಬಿಎಸ್ ವೈ ಭೇಟಿಯಾದ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ್

Update: 2023-04-13 06:53 GMT

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಗುರುವಾರ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾದ ಕಾಂತೇಶ್, ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. 

ಇನ್ನು ಮಾಧ್ಯಮಗಳೊಂದಗೆ ಮಾತನಾಡಿದ ಕಾಂತೇಶ್, ಬಿಜೆಪಿ, ಆರೆಸ್ಸೆಸ್ ನನ್ನ ತಂದೆ ಮತ್ತು ಕುಟುಂಬವನ್ನು ಸಂಸ್ಕಾರದಿಂದ ಬೆಳೆಸಿದೆ. ನನಗೂ ಒಂದು ಅವಕಾಶ ಸಿಗುವ ನಂಬಿಕೆಯಲ್ಲಿ ನಾನು ಇದ್ದೇನೆ, ಪಕ್ಷ ನಮ್ಮ ಕೈ ಬಿಡಲ್ಲ ಎಂದು ನನಗೆ ಸಂಪೂರ್ಣವಾದ ನಂಬಿಕೆ ಇದೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ' ಎಂದು ಹೇಳಿದರು. 

''ಸಾಯೋವರೆಗೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರ್ತೀನಿ. ಮುಂದಿನ ದಿನಗಳಲ್ಲಿ ಒಳ್ಳೇದಾಗಬಹುದೆಂಬ ನಿರೀಕ್ಷೆ ಇದೆ.  ಆಯನೂರು ಮಂಜುನಾಥ್ ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ, ಅವರು ಬಿಜೆಪಿಯಲ್ಲೇ  ಉಳೀತಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.  

Similar News