ನೀತಿ ಸಂಹಿತೆ ಜಾರಿ ಬಳಿಕ ‘ಡಿನೋಟಿಫಿಕೇಷನ್’: ರಮೇಶ್ ಬಾಬು ಆರೋಪ

Update: 2023-04-14 05:06 GMT

ಬೆಂಗಳೂರು, ಎ. 13: ‘ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದ ಮೂಲಕ ದೇಶದಲ್ಲಿ ಕುಖ್ಯಾತಿಗೆ ಪಾತ್ರವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ‘ಪೇ ಸಿಎಂ’ ಬಿರುದನ್ನು ಪದೇ ಪದೆ ನಿರೂಪಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್‍ಬಾಬು ಟೀಕಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸರಕಾರ ಇದೆಲ್ಲದಕ್ಕೂ ಪೂರಕವಾಗಿ ಮಾ.29ರಂದು ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ನಂತರ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ನೀರಾವರಿ ಇಲಾಖೆ ಸಹಿತ ಬಹುತೇಕ ಇಲಾಖೆಗಳು ಅನೇಕ ಅಕ್ರಮಗಳನ್ನು ಎಸಗಲಾಗಿದೆ. ಇದಕ್ಕೆ ತಾಜಾ ಉದಾಹರಣೆ ಕಂದಾಯ ಇಲಾಖೆಯಲ್ಲಿ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನಲ್ಲಿ ಸುಮಾರು 3ಸಾವಿರ ಎಕರೆ ಪ್ರದೇಶವನ್ನು ಅಮೃತ್ ಮಹಲ್ ಕಾವಲ್ ಯೋಜನೆಗೆ ಕಾಯ್ದಿರಿಸಿದ ಜಮೀನನ್ನು ಹಿಂಪಡೆದಿದೆ’ ಎಂದು ದೂರಿದರು.

‘1922-23ರಲ್ಲಿ ಮೈಸೂರು ಸರಕಾರ ರಾಜ್ಯದಲ್ಲಿ ಗೋ ತಳಿಯ ಅಭಿವೃದ್ಧಿಗೆ ತುಮಕೂರು, ಮೈಸೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಮೃತ ಮಹಲ್ ಕಾವಲ್ ಎಂದು ಜಮೀನು ಕಾಯ್ದಿರಿಸಿದ್ದರು. ಸ್ವತಂತ್ರ್ಯ ಪೂರ್ವದ ಪಶುಸಂಗೋಪನಾ ಇಲಾಖೆಯನ್ನು ಅಮೃತಮಹಲ್ ಇಲಾಖೆ ಎಂದು ಇತ್ತು. ಈ ಜಮೀನುಗಳು ಕಂದಾಯ ಇಲಾಖೆಗಿಂತ ಪಶುಸಂಗೋಪನಾ ಇಲಾಖೆಯ ಸುಪರ್ದಿಯಲ್ಲಿತ್ತು. ವಿವಿಧ ಕಾರಣಗಳಿಗೆ ಈ ಯೋಜನೆ ಜಮೀನನ್ನು ಬೇರೆ ಕಾರಣಗಳಿಗೆ ಬಳಸಿಕೊಳ್ಳಲಾಗಿದೆ. ಆದರೆ ಬಿಜೆಪಿ ಸರಕಾರ ಹೊಳಲ್ಕೆರೆಯ ಅಮೃತಮಹಲ್ ಜಮೀನನ್ನು ಖಾಸಗಿ ವ್ಯಕ್ತಿಗಳು ಹಾಗೂ ಕಂಪನಿಗಳಿಗೆ ನೀಡಲು ಡಿನೋಟಿಫಿಕೇಶನ್ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.  

ಈ ಸಂಬಂಧ ಮಾ.29ರಂದು ಆದೇಶ ಹೊರಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಈ ಆದೇಶ ಬಂದಿದೆ. ನೀತಿ ಸಂಹಿತೆ ನಿಯಮಾವಳಿಯಿಂದ ತಪ್ಪಿಸಿಕೊಳ್ಳಲು ಹಳೇಯ ದಿನಾಂಕ ಹಾಕಿ ಕಂದಾಯ ಇಲಾಖೆಯ ಮೂಲಕ ಈ ಆದೇಶ ಹೊರಡಿಸಲಾಗಿದೆ. ಈ ಜಮೀನಿನಲ್ಲಿ ಸಿಎಂ, ಕಂದಾಯ ಸಚಿವರು ಸೇರಿದಂತೆ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಜಮೀನನ್ನು ಖಾಸಗಿಯವರಿಗೆ ನೀಡಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈ ವರದಿ ನೀಡಿದ್ದರೂ ಸಿಎಂ ಈ ವರದಿಯನ್ನು ಧಿಕ್ಕರಿಸಿ, ಈ ಆದೇಶ ಹೊರಡಿಸಿ ಮಂಜೂರು ಮಾಡಿದ್ದಾರೆ’ ಎಂದು ಅವರು ಉಲ್ಲೇಖಿಸಿದರು.

‘ಚುನಾವಣೆ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಜಮೀನು ಡಿನೋಟಿಫಿಕೇಶನ್ ಮಾಡಿರುವುದೇಕೆ? ಯಾರಿಗೆ ಹಂಚಿಕೆ ಮಾಡುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ? ಸಂಘ ಪರಿವಾರಕ್ಕೆ ಸಂಬಂಧಿಸಿದ ಜನಸೇವಾ ಸಂಸ್ಥೆ ಸೇರಿದಂತೆ ನೂರಾರು ಎಕರೆ ಹಂಚಿಕೆ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ಈ ರೀತಿ ಅಧಿಸೂಚನೆ ಮೂಲಕ ಜಮೀನು ಹಂಚಿಕೆ ಮಾಡುವುದರ ಹಿಂದೆ ದೊಡ್ಡ ಮಟ್ಟದ ಹುನ್ನಾರವಿದೆ. ಹೀಗಾಗಿ ಚುನಾವಣಾ ಆಯೋಗ ಮಾ.29ರಂದು ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ತಡೆ ಹಿಡಿಯಬೇಕು. ಇದರ ವ್ಯವಹಾರವನ್ನು ಬಹಿರಂಗಪಡಿಸಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

‘ಸಹಕಾರ ಸಂಘಗಳಿಗೆ ನೀಡಿರುವ ಜಮೀನು ರದ್ದುಗೊಳಿಸಲು ಸಹಕಾರಿ, ಪಶುಸಂಗೋಪನಾ ಹಾಗೂ ಕಂದಾಯ ಇಲಾಖೆ ಅನುಮತಿ ನೀಡಬೇಕು. ಆದರೆ ಯಾವುದೇ ಇಲಾಖೆ ಅನುಮತಿ ಪಡೆದಿಲ್ಲ. ಈ ಪ್ರಕ್ರಿಯೆಯ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಇದರಲ್ಲಿ ಅಧಿಕಾರಿಗಳು ಈ ಜಮೀನು ಹಿಂಪಡೆದು ಖಾಸಗಿಯವರಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರೂ ಸಿಎಂ ಈ ಆದೇಶ ಹೊರಡಿಸಿದ್ದಾರೆ. ಇದರ ಹಿಂದೆ ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರ ನಡೆದಿದೆ’

-ರಮೇಶ್ ಬಾಬು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ

Similar News