×
Ad

ಪ್ರಜಾಪ್ರಭುತ್ವದಲ್ಲಿ‌ ಜನರೇ ಜನಾರ್ದನರು, ಆಶೀರ್ವಾದ ನೀಡಲು ಮೋದಿ ದೇವರಲ್ಲ, ಜನಪ್ರತಿನಿಧಿ: ಸಿದ್ದರಾಮಯ್ಯ

ಜೆ.ಪಿ.ನಡ್ಡಾ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು

Update: 2023-04-20 09:29 IST

ಬೆಂಗಳೂರು, ಎ.20: 'ರಾಜ್ಯವು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತವಾಗಬಾರದು' ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ‌ ಜನರೇ ಜನಾರ್ದನರು. ಆಶೀರ್ವಾದ ನೀಡಲು ನರೇಂದ್ರ ಮೋದಿ ದೇವರಲ್ಲ, ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿ ಎಂದು ಹೇಳಿದ್ದಾರೆ.

ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು ಎನ್ನುವ ನಿಮ್ಮ ಹೇಳಿಕೆ ಬೆದರಿಕೆ ಎಂದಾದರೆ ಅದಕ್ಕೆ ನನ್ನ ಧಿಕ್ಕಾರ ಇದೆ. ಇದು‌ ನಿಮ್ಮ ಅಜ್ಞಾನ ಎಂದಾದರೆ ನಿಮಗೆ ದೇವರು ಸದ್ಬುದ್ಧಿಯ ಆಶೀರ್ವಾದವನ್ನು ಮಾಡಲಿ ಎಂದು ಹಾರೈಸುತ್ತೇನೆ' ಎಂಬುದಾಗಿ ಜೆ.ಪಿ.ನಡ್ಡಾರನ್ನು ಉದ್ದೇಶಿಸಿ ಟೀಕಿಸಿದ್ದಾರೆ.

'ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸಂವಿಧಾನದತ್ತವಾದ ಸಮಾನ ಸ್ಥಾನಮಾನ, ಗೌರವ ಮತ್ತು ಹಕ್ಕುಗಳನ್ನು ಹೊಂದಿರುತ್ತವೆ ಎಂಬುದು ನೆನಪಿರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ನಿಮ್ಮ‌ ಸರ್ವಾಧಿಕಾರಿ ಧೋರಣೆಗೆ ಅವಕಾಶ ಇಲ್ಲ'  ಜೆ.ಪಿ.ನಡ್ಡಾ ವಿರುದ್ಧ ಕಿಡಿಕಾರಿದ್ದಾರೆ.

Similar News