ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ JDS ಅಭ್ಯರ್ಥಿ ನಾಮಪತ್ರ ತಿರಸ್ಕೃತ
ಬೆಂಗಳೂರು, ಎ. 23: ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಆಲಿ ಅವರ ನಾಮಪತ್ರವು ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದ ಕಾರಣಕ್ಕಾಗಿ ತಿರಸ್ಕೃತಗೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯದ 224 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಶುಕ್ರವಾರ ಪೂರ್ಣಗೊಳಿಸಲಾಗಿತ್ತು. ಆದರೆ, ತಕರಾರುಗಳಿದ್ದ ಕಾರಣ ಶಿವಾಜಿನಗರ, ಔರಾದ್, ಸವದತ್ತಿ ಯಲ್ಲಮ್ಮ ಹಾಗೂ ಹಾವೇರಿ ಕ್ಷೇತ್ರಗಳ ನಾಮಪತ್ರಗಳ ಕುರಿತು ಶನಿವಾರ ವಿಚಾರಣೆ ನಡೆಸಿ, ತೀರ್ಮಾನ ಪ್ರಕಟಿಸಿದ ಚುನಾವಣಾಧಿಕಾರಿಗಳು, ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಬ್ದುಲ್ ಜಾಫರ್ ಆಲಿ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲ. ಈ ಕಾರಣದಿಂದ ಅವರ ನಾಮಪತ್ರ ತಿರಸ್ಕರಿಸಲಾಗಿದೆ. ಜಾಫರ್ ಆಲಿ ಅವರು ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಪಟ್ಟಿಯಲ್ಲಿ ಹೆಸರು ಸೇರಿರುವುದನ್ನು ಖಚಿತಪಡಿಸಿಕೊಂಡಿರಲಿಲ್ಲ. ಹೀಗಾಗಿ ಅವರ ಉಮೇದುವಾರಿಕೆ ತಿರಸ್ಕøತಗೊಂಡಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಆರ್.ಮಂಜುನಾಥ್ ಎಂಬವರು ಜೆಡಿಎಸ್ ಪಕ್ಷದಿಂದ ಕೊನೆಯ ಕ್ಷಣದಲ್ಲಿ ಶಿವಾಜಿನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದು, ಶಿವಾಜಿನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದಂತೆ ಆಗಿದೆ.
ಇದನ್ನೂ ಓದಿ: ಆಕ್ಷೇಪಣೆಗೊಳಗಾಗಿದ್ದ ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಚುನಾವಣಾಧಿಕಾರಿ