ಉಡುಪಿ: ಮತಗಟ್ಟೆಗೇ ಬಂದು ಮತ ಚಲಾಯಿಸಲು ಉತ್ಸಾಹ ತೋರಿದ ಹಿರಿಯ ನಾಗರಿಕರು, ವಿಕಲಚೇತನರು...

Update: 2023-04-24 15:42 GMT

ಉಡುಪಿ, ಎ.24: ರಾಜ್ಯದಲ್ಲಿ ಮೇ 10ರಂದು ನಡೆಯುವ ವಿಧಾನಸಭಾ  ಸಾರ್ವತ್ರಿಕ ಚುನಾವಣೆಗೆ ಸಂಬಂಧಿ ಸಿದಂತೆ, ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ವಿಕಲಚೇತನರಿಗೆ ಮತ್ತು  80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನಾನುಕೂಲವಾದಲ್ಲಿ, ಮನೆಯಿಂದಲೇ ಮತ ಚಲಾಯಿ ಸಲು ವಿಶೇಷ ಸೌಲಭ್ಯವನ್ನು ಒದಗಿಸಿದೆ.

ಆದರೆ ಉಡುಪಿ ಜಿಲ್ಲೆಯ ಬಹುತೇಕ ವಿಕಲಚೇತನರು ಮತ್ತು ಹಿರಿಯ ನಾಗರಿಕರು ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಬಳಸಿಕೊಳ್ಳದೇ, ಮತದಾನದ ದಿನದಂದು ಮತಗಟ್ಟೆಗೆ ಖುದ್ದು ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಉತ್ಸಾಹ ತೋರಿದ್ದಾರೆ.

ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟಂತೆ ಒಟ್ಟು 31,254 ಮಂದಿ  ಹಿರಿಯ ನಾಗರಿಕರಿದ್ದಾರೆ. ಇವರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ 5864 ಹಿರಿಯ ನಾಗರಿಕರಲ್ಲಿ 4878 ಮಂದಿ 12ಡಿ ಫಾರಂನ್ನು ಪಡೆದಿದ್ದಾರೆ. ಕುಂದಾಪುರದಲ್ಲಿ 6207 ಮಂದಿಯಲ್ಲಿ 4581, ಉಡುಪಿಯ 7823ರಲ್ಲಿ 5189, ಕಾಪುವಿನ 5776ರಲ್ಲಿ 4945 ಮತ್ತು ಕಾರ್ಕಳದ 5587 ಮಂದಿಯಲ್ಲಿ  6021 ಮಂದಿ ಸೇರಿದಂತೆ ಒಟ್ಟು 31,254 ಹಿರಿಯ ನಾಗರಿಕರಲ್ಲಿ 25,614 ಮಂದಿಗೆ ತಮ್ಮ ಆಯ್ಕೆಯ ಬಗ್ಗೆ ತಿಳಿಸುವಂತೆ ಸೂಚಿಸಲಾಗಿತ್ತು. ಇದರೊಂದಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ 2989 ವಿಕಲಚೇತನರಲ್ಲಿ 2632 ಮಂದಿಗೆ, ಕುಂದಾಪರದ 2524ರಲ್ಲಿ 2042, ಉಡುಪಿಯ 1797 ರಲ್ಲಿ 2169, ಕಾಪುವಿನ 2229 ರಲ್ಲಿ 2229 ಮತ್ತು ಕಾರ್ಕಳದ 2141 ರಲ್ಲಿ 1719 ಮಂದಿ ಸೇರಿದಂತೆ ಒಟ್ಟು 11,680 ವಿಕಲಚೇತನರಲ್ಲಿ 10,791 ಮಂದಿಯನ್ನು ಗುರುತಿಸಿ ಅವರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಬಳಸಿಕೊಳ್ಳುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀರಣ ಇಲಾಖೆ ಅಧಿಕಾರಿಗಳ ಮೂಲಕ ಎಲ್ಲಾ ಅರ್ಹ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಮನೆಗಳಿಗೆ ತೆರಳಿ ಅರ್ಜಿಯನ್ನು ವಿತರಿಸಲಾಗಿತ್ತು.

ಇವರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ 927, ಕುಂದಾಪುರ 903, ಉಡುಪಿ 494, ಕಾಪು 856 ಮತ್ತು ಕಾರ್ಕಳದಲ್ಲಿ 796 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 3976 ಮಂದಿ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 140, ಕುಂದಾಪುರ 202, ಉಡುಪಿ 105, ಕಾಪು 152 ಮತ್ತು ಕಾರ್ಕಳದಲ್ಲಿ 31 ಸೇರಿದಂತೆ ಒಟ್ಟು 630 ವಿಕಲಚೇತನರು ಮಾತ್ರ ಇದುವರೆಗೆ ಈ ಸೌಲಭ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಮೂಲಕ ಹಿರಿಯ ನಾಗರಿಕರು ಹಾಗೂ ವಿಕಲಚೇತನ ಮತದಾರರು ಅಧಿಕಾಂಶ ಮಂದಿ ಮತದಾನ ದಿನದಂದು ಮತಗಟ್ಟೆಗೆ ಬಂದು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ಬಳಸಿಕೊಳ್ಳುವ ಸಂಭ್ರಮವನ್ನು ಆಚರಿಸಲು ಉತ್ಸಾಹ ತೋರಿಸಿದ್ದಾರೆ.

ಮನೆಯಲ್ಲೇ ಮತದಾನ ಮಾಡುವ ಸೌಲಭ್ಯವನ್ನು ನಿಭಾಯಿಸುವ ಜೊತೆಗೆ ತೀರಾ ಅವಶ್ಯಕತೆ ಇರುವ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸಲು ಸಹ ಜಿಲ್ಲಾಡಳಿತ ಈಗಾಗಲೇ ಯೋಜನೆಯನ್ನು ರೂಪಿಸಿದೆ.

ಇದರೊಂದಿಗೆ ಕೋವಿಡ್ ಸೋಂಕು ಬಾಧಿತರಿಗೂ ಮನೆಯಲ್ಲಿ ಮತದಾನದ ಸೌಲಭ್ಯವನ್ನು ಒದಗಿಸಿದ್ದರೂ, ಜಿಲ್ಲೆಯಲ್ಲಿ ಯಾರೂ ಇದನ್ನು ಸ್ವೀಕರಿಸಲು ಮುಂದೆ ಬಂದಿಲ್ಲ. ಜಿಲ್ಲೆಯಲ್ಲಿ 4-5 ಮಂದಿ ಸೋಂಕಿತರು ಮಾತ್ರ ಚಿಕಿತೆಯಲ್ಲಿರುವುದು ಇದಕ್ಕೆ ಕಾರಣವೆನ್ನಬಹುದು.

"ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಅಚರಿಸುವಂತೆ ಚುನಾವಣಾ ಆಯೋಗ ತಿಳಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತ ಚುನಾವಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಬಹುತೇಕ ಹಿರಿಯ ನಾಗರಿಕರು ಮತ್ತು ವಿಕಲಚೇತನರು ತಮಗೆ ಚುನಾವಣಾ ಆಯೋಗ ಮನೆ ಯಿಂದಲೇ ಮತದಾನ ಮಾಡಲು ನೀಡಿರುವ ಸೌಲಭ್ಯದ ಬದಲು ಮತಗಟ್ಟೆಗೆ ಬಂದು ಮತ ಚಲಾಯಿಸಲು ಹೆಚ್ಚಿನ ಉತ್ಸಾಹ ತೋರಿರುವುದು ಇತರೇ ಮತದಾರರಿಗೂ ಪ್ರೇರಣೆಯಾಗಲಿದೆ".
-ಕೂರ್ಮರಾವ್ ಎಂ. ಜಿಲ್ಲಾಧಿಕಾರಿ, ಉಡುಪಿ.

Similar News