ಚುನಾವಣಾ ಪ್ರಚಾರ: ಮೇ.5ಕ್ಕೆ ಬೆಂಗಳೂರಿಗೆ ಮಾಯಾವತಿ ಆಗಮನ

Update: 2023-04-27 07:33 GMT

ಬೆಂಗಳೂರು, ಎ.27- ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಎಲ್ಲೆಡೆ ರಂಗೇರಿದ್ದು, ಈ ನಡುವೆ ಮೇ.5 ರಂದು ರಾಜಧಾನಿ ಬೆಂಗಳೂರಿಗೆ ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಆಗಮಿಸಲಿದ್ದಾರೆ.

ನಗರದಲ್ಲಿಂದು ಈ ಕುರಿತು ಪ್ರತಿಕ್ರಿಯಿಸಿದ ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಬೆಂಗಳೂರಿನ ತಿಪುರವಾಸಿನಿ ಅರಮನೆ ಮೈದಾನದಲ್ಲಿ ಬೃಹತ್ ಚುನಾವಣಾ ಪ್ರಚಾರಕ್ಕೆ ಮಾಯಾವತಿ ಆಗಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಲು ಮತ್ತು ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ತಡೆಯಲು ಬಹುಜನ ಸಮಾಜ ಪಾರ್ಟಿ ಈ ಬಾರಿ 130 ಕ್ಷೇತ್ರಗಳಲ್ಲಿ ಸ್ಪರ್ದಿಸುತ್ತಿದೆ. ಜೊತೆಗೆ ಭಾರತದ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸಲು ಈ ಬಾರಿ ವಿಧಾನಸಭೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕರು ಆರಿಸಿ ಬರಬೇಕಾಗಿರುವುದು ಹಿಂದೆಂದಿಗಿಂತಲೂ ಈಗ ಅತ್ಯಂತ ಅಗತ್ಯವಾಗಿದೆ ಎಂದು ನುಡಿದರು.

ಕರ್ನಾಟಕದಲ್ಲಿ ಕಳೆದ 40-50 ವರ್ಷಗಳಿಂದ ಬಗೆಹರಿಯದ ಬಗ‌ರ್ ಹುಕುಂ ಸಾಗುವಳಿ ಸಕ್ರಮ,ವಸತಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ರೈತ ವಿದ್ಯಾರ್ಥಿಗಳ ಸಮಸ್ಯೆ ಮತ್ತು ವಿಶೇಷವಾಗಿ ನಿರುದ್ಯೋಗ ಸಮಸ್ಯೆ, ಬೆಲೆಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ಮೂರಾ ಬಟ್ಟೆಯಾಗಿದೆ ಎಂದು .

ಇವುಗಳ ಪರಿಹಾರಕ್ಕಾಗಿ ಕರ್ನಾಟಕ ವಿಧಾನಸಭೆಯಲ್ಲಿ ಬಹುಜನ ಸಮಾಜ ಪಕ್ಷದ ಶಾಸಕರು ಗೆದ್ದು ಬರಬೇಕಾಗಿದೆ. ಆದ್ದರಿಂದ ಕರ್ನಾಟಕದ ಮತಬಾಂಧವರು ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಗಳನ್ನು ಆರಿಸಬೇಕೆಂದು  ಮನವಿ ಮಾಡಿದರು.

ಈಗಾಗಲೇ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವ ಕಾಂಗ್ರೆಸ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಪುಲಕೇಶಿನಗರದ ಅಭ್ಯರ್ಥಿಯಾಗಿ ಕಣಕ್ಕೆ ಇಳಸಲಾಗಿದೆ. ಅದೇ ರೀತಿ,  ಗಾಂಧಿನಗರ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಅವರು ಬಹುಜನ ಸಮಾಜ ಪಾರ್ಟಿ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಿದರು.

Similar News