ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಆರೋಪಿಗೆ ಹೈಕೋರ್ಟ್ ನಿಂದ ಜಾಮೀನು
Update: 2023-05-02 14:55 GMT
ಬೆಂಗಳೂರು, ಮೇ 2: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದಲ್ಲಿ ಭದ್ರತೆ ಒದಗಿಸದೇ 105 ಕೋಟಿ ರೂ.ಸಾಲ ಪಡೆದ ಆರೋಪ ಎದುರಿಸುತ್ತಿದ್ದ ಜಿ.ರಘುನಾಥ್ ಎಂಬುವರಿಗೆ ಹೈಕೋರ್ಟ್ ಅನಾರೋಗ್ಯವನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.
ಹಣ ದುರ್ಬಳಕೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಹೂಡಿದ್ದ ಪ್ರಕರಣದಲ್ಲಿ ರಘುನಾಥ್ ನ್ಯಾಯಾಂಗ ಬಂಧನದಲ್ಲಿದ್ದರು. ಇವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿ 10 ತಿಂಗಳಿಂದ ಜೈಲಿನಲ್ಲಿದ್ದಾನೆ. ಸದ್ಯ ಅವರು ಸರ್ವಿಕಲ್ ಸ್ಪಾಂಡಿಲೈಸಿಸ್, ಇರಿಟಬಲ್ ಬೊವೆಲ್ ಡಿಸಾರ್ಡರ್, ಲಿವರ್ ತೊಂದರೆ, ಅಧಿಕ ರಕ್ತದೊತ್ತಡ, ಮಾನಸಿಕ ಖಿನ್ನತೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದು, ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಧಾರದಲ್ಲಿ ಜಾಮೀನು ನೀಡಬೇಕೆಂದು ನ್ಯಾಯಪೀಠವನ್ನು ಕೋರಿದ್ದರು.