ನನ್ನ ಮನೆ ಮೇಲೆ ದಾಳಿ ನಡೆಸಿದ IT ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ
''ಸದಾನಂದ ಗೌಡರು ನನಗೆ ಯಾವತ್ತೂ ಆಪ್ತಮಿತ್ರ''
ಪುತ್ತೂರು; ನಾನು ಓರ್ವ ತೆರಿಗೆಪಾವತಿದಾರ ಉದ್ಯಮಿ. ವರ್ಷಕ್ಕೆ ಕೋಟ್ಯಂತರ ರೂ. ತೆರಿಗೆ ಕಟ್ಟುತ್ತಿದ್ದೇನೆ. ಬಿಜೆಪಿ ಸೋಲಿನ ಹತಾಶೆಯಿಂದ ಬೆಂಗಳೂರಿನ ನನ್ನ ಮನೆಗೆ ಐಟಿ ದಾಳಿ ನಡೆಸಿದೆ. ಆದರೆ ಅಲ್ಲಿ ಅವರಿಗೆ ಏನೂ ಸಿಕ್ಕಿಲ್ಲ. ಬರಿಗೈಲಿ ಹಿಂತಿರುಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸ್ಪಷ್ಟನೆ ನೀಡಿದ್ದಾರೆ.
ಅವರು ಬುಧವಾರ ಪುತ್ತೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪ್ರಸ್ತುತ ಪುತ್ತೂರಿನ ಜನತೆ ಅಶೋಕ್ ರೈ ಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ಕಂಡು ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಬೇರೆ ಆಯುಧಗಳಿಲ್ಲದೆ ಇದೀಗ ಇನ್ನೊಂದು ಅಸ್ತ್ರವಾಗಿ ಐಟಿ ದಾಳಿ ಮಾಡಿಸಿದ್ದಾರೆ. ಈ ವಿಷಯದಲ್ಲಿಯೂ ಬಿಜೆಪಿ ಸಂಪೂರ್ಣವಾಗಿ ಸೋಲು ಕಂಡಿದೆ ಎಂದರು.
ಮೈಸೂರಿನಲ್ಲಿ ನನ್ನ ಸಹೋದರನ ಮನೆಗೆ ಐಟಿ ದಾಳಿ ನಡೆದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಆವರ ವ್ಯವಹಾರವೇ ಬೇರೆ. ನನ್ನ ವ್ಯವಹಾರವೇ ಬೇರೆ. ಅವರೂ ಓರ್ವ ತೆರಿಗೆ ಪಾವತಿದಾರ. ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯ ಸಹೋದರನ ಮನೆ ಮೇಲೆ ಐಟಿ ದಾಳಿ: ಅಲಂಕಾರಿಕ ಗಿಡದಲ್ಲಿತ್ತು 1 ಕೋಟಿ ರೂ.!
ಬಿಜೆಪಿ 5 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅದನ್ನು ಪ್ರಶ್ನೆ ಮಾಡಿರುವ ನನ್ನ ಭಾಷಣವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ನನ್ನ ತೇಜೋವಧೆಗೆ ಶ್ರಮಿಸುತ್ತಿದ್ದಾರೆ. ಯಾರಿಗೂ ಬುದ್ಧಿಕಲಿಸುತ್ತೇನೆ ಎಂದು ಹೇಳಿಲ್ಲ. ಬಡವರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಯಾರೊಂದಿಗೂ ನನ್ನದು ರಾಜೀ ಇಲ್ಲ. ನಾನು ಓರ್ವ ಹಿಂದೂ ಆಗಿ ಹಿಂದುತ್ವವನ್ನು ಒಪ್ಪಿಕೊಂಡವ. ಆದರೆ ನನ್ನ ಹಿಂದುತ್ವವು ನನ್ನ ಧರ್ಮವನ್ನು ಪ್ರೀತಿಸಿ ಇನ್ನೊಂದು ಧರ್ಮವನ್ನು ಗೌರವಿಸುವುದು ಎಂದರು.
''ಡೀವಿ’ ನನಗೆ ಯಾವತ್ತೂ ‘ಆಪ್ತಮಿತ್ರ .....''
ರಾಜಕೀಯದಲ್ಲಿ ನಾನೊಬ್ಬ ಸಣ್ಣ ವ್ಯಕ್ತಿ. ಡಿವಿ ಸದಾನಂದ ಗೌಡರು ಬಹಳಷ್ಟು ವರ್ಷಗಳಿಂದ ರಾಜಕೀಯದಲ್ಲಿ ಪಳಗಿದವರು. ರಾಜ್ಯದ ಮುಖ್ಯಮಂತ್ರಿ, ಕೇಂದ್ರದ ಸಚಿವರಾಗಿ ದೇಶದ ರಾಜ್ಯದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರು ನನ್ನ ಬಗ್ಗೆ ಹೆಚ್ಚು ಮಾತಾಡಿಲ್ಲ. ಆದರೆ ನಾನು ಮಿತ್ರನಲ್ಲ ಶತ್ರು ಎಂದಿದ್ದಾರೆ. ಡಿವಿ ಸದಾನಂದ ಗೌಡರು ನನಗೆ ಯಾವತ್ತೂ ಶತ್ರು ಅಲ್ಲ. ಆಪ್ತಮಿತ್ರರು. ನನಗೆ ಯಾರೂ ಶತ್ರುಗಳಿಲ್ಲ. ಎಲ್ಲರೂ ನನ್ನ ಮಿತ್ರರೇ ಎಂದು ಹೇಳಿದರು.