×
Ad

ಮೇ 3ರ ವರೆಗೆ 70,540 ಮತದಾರರಿಂದ ಮನೆಯಲ್ಲೇ ಮತದಾನ: ಮನೋಜ್‍ಕುಮಾರ್ ಮೀನಾ

Update: 2023-05-04 20:54 IST

ಬೆಂಗಳೂರು, ಮೇ 4: ‘ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ 3ರ ವರೆಗೆ 80 ವರ್ಷ ಮೇಲ್ಪಟ್ಟ 80,250 ಮತದಾರರಲ್ಲಿ 70,540(ಶೇ.87.90) ಮತದಾರರು ತಮ್ಮ ಮನೆಯಲ್ಲಿ ಮತ ಚಲಾಯಿಸಿದ್ದಾರೆ. ಅದೇ ರೀತಿ 19,279 ವಿಶೇಷ ಚೇತನ ಮತದಾರರಲ್ಲಿ 16,961(ಶೇ.87.98) ಮತದಾರರು ತಮ್ಮ ಮನೆಯಲ್ಲಿ ಮತ ಚಲಾಯಿಸಿದ್ದಾರೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ‘ಚುನಾವಣಾ ಮಾದರಿ ನೀತಿ ಸಂಹಿತೆ ಘೋಷಣೆಯಾದಾಗಿನಿಂದ ಈವರೆಗೆ 116.79ಕೋಟಿ ರೂ.ನಗದು, 23.57ಕೋಟಿ ರೂ.ಮೌಲ್ಯದ ಉಚಿತ ಕೊಡುಗೆಗಳು, 78.71ಕೋಟಿ ರೂ.ಮೌಲ್ಯದ 21.20ಲಕ್ಷ ಲೀಟರ್ ಮದ್ಯ, 21.85 ಕೋಟಿ ರೂ.ಮೌಲ್ಯದ 1,784 ಕೆಜಿ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

85.53 ಕೋಟಿ ರೂ.ಮೌಲ್ಯದ 167.81 ಕೆಜಿ ಬಂಗಾರ, 4.54 ಕೋಟಿ ರೂ.ಮೌಲ್ಯದ 656.13 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 2602 ಎಫ್‍ಐಆರ್‍ಗಳನ್ನು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 69,854 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದುಪಡಿಸಲಾಗಿದೆ. ಸಿಆರ್‍ಪಿಸಿ ಕಾಯ್ದೆಯಡಿ 5633 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 10,697 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 16,395 ಚಾಮೀನು ರಹಿತ ವಾರೆಂಟ್‍ಗಳನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.

ಅಬಕಾರಿ ಇಲಾಖೆಯು 3306 ಗಂಭೀರ ಪ್ರಕರಣಗಳನ್ನು ಹಾಗೂ 3086 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣಗಳು, 99 ಎನ್‍ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15(ಎ) ಅನ್ವಯ ಒಟ್ಟು 31,183 ಪ್ರಕರಣಗಳನ್ನು ದಾಖಲಿಸಿದೆ ಮತ್ತು 2290 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಅವರು ಹೇಳಿದ್ದಾರೆ.

ವಿಚಕ್ಷಣ ದಳವು ಬೆಂಗಳುರು ಪೂರ್ವ ನಗರ ಜಿಲ್ಲೆಯ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ 40 ಲಕ್ಷ ರೂ.ಮೌಲ್ಯದ 80 ಕೆಜಿ ಗಾಂಜಾ ವಶಪಡಿಸಿಕೊಂಡಿದೆ. ಸ್ಥಿರ ಕಣ್ಗಾವಲು ಪಡೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2.76 ಕೋಟಿ ರೂ.ಮೌಲ್ಯದ 5.548 ಕೆಜಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದೆ ಎಂದು ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

Similar News