ದೇಶದ ಗೃಹ ಸಚಿವರಿಗೆ ಸುಪ್ರೀಂ ಕೋರ್ಟ್ ಪಾಠ

Update: 2023-05-11 04:54 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಮಣಿಪುರದಲ್ಲಿ ಮೇಟಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದಿದೆ. ಹಾಗೆಯೇ ಕರ್ನಾಟಕದಲ್ಲಿ ಮುಸ್ಲಿಮ್ ಮೀಸಲಾತಿ ರದ್ದಿಗೆ ಸಂಬಂಧಿಸಿ ರಾಜಕಾರಣಿಗಳ ಹಸ್ತಕ್ಷೇಪಗಳ ಬಗ್ಗೆಯೂ ಅದು ತನ್ನ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ತಳಸ್ತರದಲ್ಲಿರುವ ಜನರನ್ನು ಮೇಲೆತ್ತುವ ಉದ್ದೇಶದಿಂದ ಸಂವಿಧಾನ ನೀಡಿದ ಮೀಸಲಾತಿಯನ್ನು ಹೇಗೆ ರಾಜಕಾರಣಿಗಳು ತಮ್ಮ ಒಡೆದು ಆಳುವ ರಾಜಕಾರಣಕ್ಕೆ ಬಳಸಿ, ಜನರನ್ನು ಇನ್ನಷ್ಟು ಪತನದೆಡೆಗೆ ತಳ್ಳಲು ಪ್ರಯತ್ನಿಸುತ್ತಿರುವುದು ಈ ಎರಡೂ ಪ್ರಕರಣಗಳಲ್ಲಿ ಸ್ಪಷ್ಟವಾಗಿದೆ. ಮಣಿಪುರದಲ್ಲಿ ಮೇಟಿ ಸಮುದಾಯದ ದಲಿತ ಸ್ಥಾನಮಾನದ ಕುರಿತ ಹೈಕೋರ್ಟ್‌ನ ಅವಸರದ ನಿರ್ಧಾರ ನೂರಾರು ಅಮಾಯಕರ ಸಾವಿಗೆ ಕಾರಣವಾಯಿತು. ಹಲವು ಮನೆಗಳು ಸುಟ್ಟು ಹೋದವು. ಸಾವಿರಾರು ಜನರು ನಿರ್ವಸಿತರಾದರು. ಊರೆಲ್ಲ ಸೂರೆ ಹೋದ ಬಳಿಕ, ಇದೀಗ ಸುಪ್ರೀಂಕೋರ್ಟ್ ಮೇಟಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಕುರಿತ ಹೈಕೋರ್ಟ್ ಆದೇಶದ ಬಗ್ಗೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ.

''ಯಾವುದೇ ಸಮುದಾಯಕ್ಕೆ ಪರಿಶಿಷ್ಟ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸುವ ಅಧಿಕಾರವನ್ನು ಹೈಕೋರ್ಟ್ ಹೊಂದಿಲ್ಲ'' ಎಂದು ಸುಪ್ರೀಂಕೋರ್ಟ್ ಹೇಳಿದೆ. ಕಳೆದ ಎಪ್ರಿಲ್ 19ರಂದು ಮಣಿಪುರ ಹೈಕೋರ್ಟ್‌ನ ಹಂಗಾಮಿ ನ್ಯಾಯಾಧೀಶ ಎಂ.ವಿ. ಮುರಳೀಧರನ್ ಅವರು, ರಾಜ್ಯದ ಬಹುಸಂಖ್ಯಾತ ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಶ್ರೇಣಿಗೆ ಸೇರ್ಪಡಿಸುವ ಅರ್ಜಿಗಳ ಕುರಿತಂತೆ ಪರಿಶೀಲಿಸುವಂತೆ ಬಿಜೆಪಿ ಸರಕಾರಕ್ಕೆ ಆದೇಶ ನೀಡಿರುವುದನ್ನು ಆಕ್ಷೇಪಿಸಿ ಸುಪ್ರೀಂಕೋರ್ಟ್ ಈ ತೀರ್ಪನ್ನು ನೀಡಿದೆ. ಹೈಕೋ ರ್ಟ್ ನ ಬೇಜವಾಬ್ದಾರಿಯುತ ತೀರ್ಪಿನ ಪರಿಣಾಮವನ್ನು ಮಣಿಪುರ ಈಗಾಗಲೇ ಉಂಡಿದೆ. ಈ ಆದೇಶ ಇಲ್ಲಿರುವ ಬುಡಕಟ್ಟು ಸಮುದಾಯಕ್ಕೆ ತಪ್ಪು ಸಂದೇಶವನ್ನು ನೀಡಿತು. ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ರಾಜ್ಯ ಸರಕಾರ ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದೇ ಆದರೆ, ಸ್ಥಳೀಯ ಬುಡಕಟ್ಟು ಜನರ ಭೂಮಿಯ ಮೇಲಿನ ಹಕ್ಕು ಸೇರಿದಂತೆ ಹತ್ತು ಹಲವು ಸವಲತ್ತುಗಳನ್ನು ಬಹುಸಂಖ್ಯಾತ ಮೇಟಿ ಸಮುದಾಯ ತನ್ನದಾಗಿಸಿಕೊಳ್ಳುತ್ತದೆ. ಈಗಾಗಲೇ ಆತಂಕದ, ಅಭದ್ರತೆಯ ಬದುಕನ್ನು ನಡೆಸುತ್ತಿರುವ ಕುಕಿ ಬುಡಕಟ್ಟು ಸಮುದಾಯಗಳಿಗೆ ಹೈಕೋರ್ಟ್ ತೀರ್ಪು ರಾಜಕೀಯ ಸಂಚಿನಂತೆ ಕಂಡಿತು.

ಸರಕಾರದ ಪ್ರಾಯೋಜಕತ್ವದಲ್ಲಿ ಮೇಟಿ ಸಮುದಾಯವನ್ನು ಕುಕಿ ಬುಡಕಟ್ಟು ಜನರ ವಿರುದ್ಧ ಹೇರಲಾಗುತ್ತಿದೆ ಎನ್ನುವ ವದಂತಿಗೆ ಅಧಿಕೃತತೆ ಬಂದುದು ಈ ಹೈಕೋರ್ಟ್ ತೀರ್ಪಿನಿಂದ. ಇದರ ವಿರುದ್ಧ ಸ್ಥಳೀಯ ಬುಡಕಟ್ಟುಸಮುದಾಯ ಪ್ರತಿಭಟನೆಯನ್ನು ಹಮ್ಮಿಕೊಂಡದ್ದು, ಅಂತಿಮವಾಗಿ ಹಿಂಸಾಚಾರದ ರೂಪ ಪಡೆಯಲು ಕಾರಣವಾಯಿತು. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬುಡಕಟ್ಟು ಸಮುದಾಯಕ್ಕಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ಹೊಂದಿರುವ ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬಾರದು ಎನ್ನುವುದು ಬುಡಕಟ್ಟು ಜನರ ಆಗ್ರಹವಾಗಿದೆ. ಮೇಟಿ ಸಮುದಾಯಕ್ಕೆ ಸರಕಾರದ ಬೆಂಬಲವಿದೆ ಎನ್ನುವ ಶಂಕೆ ಇವರದು. ಹಿಂದುತ್ವವಾದಿ ಶಕ್ತಿಗಳು ಮೇಟಿ ಸಮುದಾಯದೊಳಗೆ ನುಗ್ಗಿದ್ದು ಮೇಟಿ ಮತ್ತು ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷಗಳನ್ನು 'ಹಿಂದೂ-ಕ್ರೈಸ್ತರ ನಡುವಿನ ಸಂಘರ್ಷ'ವಾಗಿ ಪರಿವರ್ತಿಸುವ ಪ್ರಯತ್ನ ನಡೆಸುತ್ತಿದೆ ಎನ್ನುವುದು ಬುಡಕಟ್ಟು ಸಮುದಾಯಗಳ ಆರೋಪವಾಗಿದೆ. ಹೀಗಿರುವಾಗ ಹೈಕೋರ್ಟ್ ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಬಗ್ಗೆ ಆತುರ ತೋರಿರುವುದರ ಹಿಂದೆ ರಾಜಕೀಯ ಒತ್ತಡಗಳನ್ನು ಕಾಣಬಹುದಾಗಿದೆ.

ಸುಪ್ರೀಂಕೋರ್ಟ್‌ನ ಆಕ್ಷೇಪ ಈ ನಿಟ್ಟಿನಲ್ಲಿ ಪರೋಕ್ಷವಾಗಿ ಮಣಿಪುರ ರಾಜ್ಯ ಸರಕಾರಕ್ಕಾಗಿರುವ ಮುಖಭಂಗವಾಗಿದೆ. ಆದರೆ ಹೈಕೋರ್ಟ್ ತೀರ್ಪಿನ ಪರಿಣಾಮವನ್ನು ಮಣಿಪುರ ಅನುಭವಿಸಿಯಾಗಿದೆ. ಈ ಹಿಂಸಾಚಾರದ ಹೊಣೆಯನ್ನು ಪರೋಕ್ಷವಾಗಿ ಹೈಕೋರ್ಟ್ ಕೂಡ ಹೊತ್ತುಕೊಳ್ಳುವುದು ಅನಿವಾರ್ಯವಾಗಿದೆ. ಇದೇ ಸಂದರ್ಭದಲ್ಲಿ 'ಮುಸ್ಲಿಮ್ ಮೀಸಲಾತಿ ರದ್ದು ನಿರ್ಧಾರ'ದ ಬಗ್ಗೆ ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಮಾಡಿರುವ ಭಾಷಣ ಕೂಡ ಸುಪ್ರೀಂಕೋರ್ಟ್‌ನ ಆಕ್ಷೇಪಕ್ಕೆ ಕಾರಣವಾಗಿದೆ. ಸರಕಾರದ ಮುಸ್ಲಿಮ್ ಮೀಸಲಾತಿ ರದ್ದು ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಸ್ವತಃ ರಾಜ್ಯ ಸರಕಾರವೇ ಸುಪ್ರೀಂಕೋರ್ಟ್‌ನಲ್ಲಿ ತನ್ನ ನಿರ್ಧಾರವನ್ನು ಅಮಾನತಿನಲ್ಲಿಟ್ಟಿದೆ. ವಿಚಾರಣೆ ಮುಗಿಯುವವರೆಗೆ ತನ್ನ ತೀರ್ಮಾನವನ್ನು ಯಾವ ಕಾರಣಕ್ಕೂ ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ಭರವಸೆಯನ್ನು ನೀಡಿದೆ. ಆದರೆ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಮಾತ್ರ 'ಮೀಸಲಾತಿ ರದ್ದು' ನಿರ್ಧಾರದ ಬಗ್ಗೆ ಹಸಿ ಸುಳ್ಳುಗಳನ್ನು ಹೇಳುತ್ತಾ ಓಡಾಡಿರುವುದು ಮಾತ್ರವಲ್ಲ, ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡಲು ಈ ಮೀಸಲಾತಿ ರದ್ದು ನಿರ್ಧಾರವನ್ನು ಬಳಸಿಕೊಂಡರು. ಮೀಸಲಾತಿ ರದ್ದು ಸರಿಯೋ ತಪ್ಪೋ? ಎನ್ನುವುದನ್ನು ಕೋರ್ಟು ವಿಚಾರಣೆ ನಡೆಸುತ್ತಿರುವಾಗಲೇ, 'ಮುಸ್ಲಿಮರಿಗೆ ನೀಡಲಾಗಿರುವ ಸಂವಿಧಾನ ವಿರೋಧಿ ಧರ್ಮಾಧಾರಿತ ಮೀಸಲಾತಿಯನ್ನು ರದ್ದು ಪಡಿಸಿದ್ದೇವೆ' ಎಂಬ ಹೇಳಿಕೆಯನ್ನು ನೀಡಿದರು.

ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಸಂವಿಧಾನ ವಿರೋಧಿಯೇ ಆಗಿದ್ದರೆ, ತನ್ನದೇ ನಿರ್ಧಾರವನ್ನು ಹಿಂದೆಗೆದುಕೊಳ್ಳಲು ರಾಜ್ಯ ಸರಕಾರ ನ್ಯಾಯಾಲಯದ ಮುಂದೆ ಯಾಕೆ ಒಪ್ಪಿಕೊಂಡಿತು? ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಧರ್ಮಾಧಾರಿತವಲ್ಲ ಎನ್ನುವುದು ಸ್ಪಷ್ಟವಿದ್ದರೂ, ಪದೇ ಪದೇ 'ಧರ್ಮಾಧಾರಿತ' ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಾ ಮುಸ್ಲಿಮರ ವಿರುದ್ಧ ಲಿಂಗಾಯತ, ಒಕ್ಕಲಿಗರನ್ನು ಎತ್ತಿಕಟ್ಟಲು ಗರಿಷ್ಠ ಪ್ರಯತ್ನವನ್ನು ನಡೆಸಿದರು. ಮಣಿಪುರದಲ್ಲಿ ಮೀಸಲಾತಿಯನ್ನು ದ್ವೇಷ ರಾಜಕಾರಣಕ್ಕೆ ಬಳಸಲು ಯಶಸ್ವಿಯಾದ ಬಿಜೆಪಿ ರಾಜ್ಯದಲ್ಲಿ ಮಾತ್ರ ವಿಫಲವಾಯಿತು ಎನ್ನುವುದು ಸಮಾಧಾನ ತರುವ ವಿಷಯವಾಗಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ಜಂಟಿಯಾಗಿ ಮೀಸಲಾತಿಯನ್ನು ಹಲವು ದಶಕಗಳಿಂದ ವಿರೋಧಿಸುತ್ತಾ ಬಂದಿವೆ.

ಇದೀಗ ಮೀಸಲಾತಿಯನ್ನು ಇಲ್ಲವಾಗಿಸಲು, ಮೀಸಲಾತಿಯ ಹೆಸರಿನಲ್ಲಿ ತಳಸ್ತರದ ನಡುವೆ ಸಂಘರ್ಷವನ್ನು ಬಿತ್ತುವ ಪ್ರಯತ್ನ ನಡೆಸುತ್ತಿದೆ. ದಲಿತರು, ಹಿಂದುಳಿದ ವರ್ಗಕ್ಕೆ ಸಿಕ್ಕಿದ ಮೀಸಲಾತಿಯಲ್ಲಿ ಪಾಲು ಕೇಳಲು ಮೇಲ್‌ಜಾತಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಪರಿಣಾಮವಾಗಿ ಉತ್ತರ ಭಾರತದಲ್ಲಿ ಮರಾಠರು, ಪಟೇಲರು, ಜಾಟರು ಮೀಸಲಾತಿಗಾಗಿ ಬೀದಿಗಿಳಿದು ಸಂಘರ್ಷದ ವಾತಾವರಣ ನಿರ್ಮಾಣವಾಯಿತು. ಇವುಗಳ ನಡುವೆಯೇ ಮೇಲ್‌ಜಾತಿ ಬಡವರಿಗೆ ಶೇ. 10 ಮೀಸಲಾತಿಯನ್ನು ಜಾರಿಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಈ ಮೂಲಕ ಸಮಾಜವನ್ನು ಒಡೆಯುವುದು ಮಾತ್ರವಲ್ಲ, ಉಳ್ಳವರನ್ನು ಇನ್ನಷ್ಟು ಬಲಿಷ್ಠರಾಗಿಸುವುದು, ಬಡವರನ್ನು, ಶೋಷಿತರನ್ನು ಇನ್ನಷ್ಟು ದುರ್ಬಲರನ್ನಾಗಿಸುವುದು ಅದರ ಗುರಿಯಾಗಿದೆ.

Similar News