ಸಮೀಕ್ಷಾ ವರದಿ ಸುಳ್ಳಾಗಲಿದೆ, ಯಡಿಯೂರಪ್ಪರ ವರದಿ ಸುಳ್ಳಾಗಲ್ಲ ಎಂದ ಶೋಭಾ ಕರಂದ್ಲಾಜೆ

Update: 2023-05-11 12:51 GMT

ಬೆಂಗಳೂರು, ಮೇ 11: ಚುನಾವಣೋತ್ತರ ಸಮೀಕ್ಷಾ ವರದಿ ಸುಳ್ಳಾಗಲಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಸರಕಾರ ರಚಿಸಲಿದೆ’ ಎಂದು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಕ್ಯಾಪಿಟಲ್ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ವರದಿ, ಯಡಿಯೂರಪ್ಪರ ವರದಿ ಸುಳ್ಳಾಗಿಲ್ಲ. ಯಡಿಯೂರಪ್ಪನವರು 120 ಸ್ಥಾನಗಳನ್ನು ದಾಟಲಿದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದು ನಿಜವಾಗಲಿದೆ. ರಾಜ್ಯದ ಜನರು ಅಭಿವೃದ್ಧಿಗಾಗಿ ಬಹುಮತದ ಬಿಜೆಪಿ ಸರಕಾರ ಕೊಡಲಿದ್ದಾರೆ. ಅತಂತ್ರ ಸ್ಥಿತಿ ಖಂಡಿತವಾಗಿ ಬರುವುದಿಲ್ಲ. ಮೇ 13ರ ಫಲಿತಾಂಶದ ವರೆಗೆ ಕಾಯೋಣ’ ಎಂದು ನುಡಿದರು.

‘ನಮ್ಮ ಕಾರ್ಯಕರ್ತರ ಪ್ರಾಥಮಿಕ ವರದಿಯಂತೆ 120-125 ಕಡೆ ನಾವು ಲೀಡ್‍ನಲ್ಲಿದ್ದೇವೆ. ನಾವು ಬಹುಮತದ ಸರಕಾರ ರಚಿಸುತ್ತೇವೆ. ಜೆಡಿಎಸ್ ಭೂಮಿಕೆ ಕುರಿತು ನನಗೆ ಅರಿವಿಲ್ಲ’ ಎಂದ ಅವರು, ‘ಮೈಸೂರು ಭಾಗದಲ್ಲಿ ನಮ್ಮ ಪಕ್ಷದಿಂದ ಸುಶಿಕ್ಷಿತ, ಯುವ ಅಭ್ಯರ್ಥಿಗಳಿದ್ದರು. ಅಲ್ಲಿ ಅತ್ಯುತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ. ಇಂದು ಕಾರ್ಯಕರ್ತರು ಗೆಲುವಿನ ಕುರಿತು ಲೆಕ್ಕಾಚಾರ ಮಾಡಲಿದ್ದಾರೆ ಎಂದು ಹೇಳಿದರು.

‘ಜನರ ಉತ್ಸಾಹದ ಮತದಾನ, ಬೂತ್‍ಗಳಲ್ಲಿ ನಮಗೆ ಕಂಡುಬಂದ ವರದಿಗಳು ಇದಕ್ಕೆ ಕಾರಣ. ನಮ್ಮ ಕಾರ್ಯಕರ್ತರ ಸಮೀಕ್ಷೆ ಆಧಾರದಲ್ಲಿ ನೂರಕ್ಕೆ 100 ಬಿಜೆಪಿ ಬಹುಮತದ ಸರಕಾರವನ್ನು ರಚಿಸುವ ವಿಶ್ವಾಸ ಇದೆ’ ಎಂದು ನುಡಿದರು.

‘ಕೆಲವು ಜಿಲ್ಲೆಗಳಲ್ಲಿ ಶೇ.80ರಿಂದ ಶೇ.83ರಷ್ಟು ಮತ ಚಲಾವಣೆ ಆಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಿದ ಮತದಾರರಿಗೆ ಅಭಿನಂದನೆಗಳು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ. ಒಂದು ಒಳ್ಳೆಯ ಸರಕಾರವನ್ನು ರಾಜ್ಯ-ದೇಶದಲ್ಲಿ ತರಲು ಹಾಗೂ ನಮ್ಮ ಸ್ಥಳೀಯ ಸಂಸ್ಥೆಯಲ್ಲಿ ಒಳ್ಳೆಯ ವ್ಯವಸ್ಥೆಯನ್ನು ತರಲು ಮತದಾನ ಅಗತ್ಯವಾಗಿ ಬೇಕಾಗಿದೆ ಎಂದರು.

ವೃದ್ಧರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರು ಅನೇಕ ಹಿರಿಯರು ಬೂತ್‍ಗೆ ಬಂದು ಸದರಿಯಲ್ಲಿ ನಿಂತು ಮತದಾನ ಮಾಡಿದ್ದಾರೆ. ಅವರಿಗೆ ಮತ್ತು ಪ್ರಚಾರದಲ್ಲಿ ಸಹಕರಿಸಿದ ಮಾಧ್ಯಮಗಳಿಗೂ ಧನ್ಯವಾದಗಳು’ ಎಂದ ಅವರು, ಬೆಂಗಳೂರು ನಗರದಲ್ಲಿ ಚುನಾವಣಾ ಆಯೋಗ, ಪಕ್ಷಗಳ ಪ್ರಯತ್ನದ ಬಳಿಕವೂ ಶೇ.52-53ರಷ್ಟು ಮತದಾನ ಆಗಿದೆ. ಆದರೂ ಕಡಿಮೆ ಮತದಾನ ಆಗಿರುವುದು ಬೇಸರದ ವಿಚಾರ ಎಂದು ಹೇಳಿದರು.

ಬೆಂಗಳೂರು ನಗರದ ನಿವಾಸಿಗಳು ಸಾಕಷ್ಟು ಪ್ರಮಾಣದಲ್ಲಿ ಮತದಾನ ಮಾಡುವುದಿಲ್ಲ ಎಂಬ ಬೇರೆ ಜಿಲ್ಲೆಯವರ ಮಾತು ನಿಜ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನತೆ ಪ್ರಜಾತಂತ್ರದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲಿ. ಇದಕ್ಕಾಗಿ ಇನ್ನಷ್ಟು ಪ್ರಯತ್ನ ಮಾಡುತ್ತೇವೆ’ ಎಂದು ಶೋಭಾ ಕರಂದ್ಲಾಜೆ  ತಿಳಿಸಿದರು.

Similar News