'ಆಪರೇಷನ್‌ ಕಮಲ'ದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ರಣತಂತ್ರ: ಗೆಲ್ಲುವ ಅಭ್ಯರ್ಥಿಗಳಿಗೆ ಬೆಂಗಳೂರಿಗೆ ಬುಲಾವ್

Update: 2023-05-12 15:33 GMT

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯಲ್ಲಿ ಅತಂತ್ರ ಸರಕಾರದ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆಪರೇಷನ್‌ ಕಮಲದಿಂದ ತನ್ನ ಶಾಸಕರನ್ನು ರಕ್ಷಿಸಲು ತಂತ್ರಗಾರಿಕೆ ಮಾಡಿದೆ. ಬೆಂಗಳೂರಿನ ನಿರ್ದಿಷ್ಟ ಸ್ಥಳವೊಂದರಲ್ಲಿ ವಾಸ್ತವ್ಯ ಹೂಡುವಂತೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳಿಗೆ ಈಗಾಗಲೇ ಸೂಚನೆ ನೀಡಿದೆ ಎಂದು ಮೂಲಗಳನ್ನುಲ್ಲೇಖಿಸಿ ವರದಿಯಾಗಿದೆ. 

ಮತ ಎಣಿಕೆ ವೇಳೆ ಮುನ್ನಡೆ ಸಾಧಿಸಿದರೆ ಹಾಗೂ ಗೆಲುವಿನ ಸಾಧ್ಯತೆ ಕಂಡುಬಂದರೆ ಬೆಂಗಳೂರಿಗೆ ತಲುಪುವಂತೆ ಈಗಾಗಲೇ ಅಭ್ಯರ್ಥಿಗಲಿಗೆ ಸಂದೇಶ ಹೋಗಿದೆ ಎಂದು ವರದಿಯಾಗಿದೆ. 

ಕಾಂಗ್ರೆಸ್‌, ಹಾಗೂ ಬಿಜೆಪಿ ಈಗಾಗಲೇ ತಮಗೆ ಬಹುಮತ ಬರುವ ಭರವಸೆಯನ್ನು ವ್ಯಕ್ತಪಡಿಸಿದೆಯಾದರೂ, ಶಾಸಕರ ಖರೀದಿಗೆ ಎರಡೂ ಪಕ್ಷಗಳು ಸಜ್ಜಾಗಿದೆ ಎಂದು ಮೂಲಗಳನ್ನುಲ್ಲೇಖಿಸಿ ThenNewsMinute.in ವರದಿ ಮಾಡಿದೆ. 

 ಆಪರೇಷನ್‌ ಕಮಲ ಮಾಡಲು ಬಿಜೆಪಿ ಹೇಗೂ ಸಜ್ಜಾಗಿದ್ದು, ರಿವರ್ಸ್‌ ಆಪರೇಷನ್‌ ಮಾಡಲು ಕಾಂಗ್ರೆಸ್‌ ಕೂಡಾ ತಯಾರಿ ನಡೆಸಿದೆ. ಅದಕ್ಕಾಗಿ ತಂತ್ರಗಾರಿಕೆ ನಡೆಸಿದ್ದು, ಬಿಜೆಪಿಯ ಯಾವುದೇ ಆಮಿಷಕ್ಕೂ ಒಳಗಾಗಬಾರದೆಂಬ ಸ್ಪಷ್ಟ ಸಂದೇಶವನ್ನು ಪಕ್ಷ ತನ್ನ ಅಬ್ಯರ್ಥಿಗಳಿಗೆ ನೀಡಿದೆ. 

ಗುರುವಾರ ರಾತ್ರಿ ಡಿಕೆ ಶಿವಕುಮಾರ್‌, ರಣದೀಪ್‌ ಸುರ್ಜೇವಾಲಾ ಹಾಗೂ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳೊಂದಿಗೆ ವರ್ಚ್ಯುಯಲ್‌ ಸಭೆ ನಡೆಸಿದ್ದು, ಆಪರೇಷನ್‌ ಕಮಲದಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿವರವಾದ ಚರ್ಚೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಈ ಬಾರಿ ಕಾಂಗ್ರೆಸ್‌ ಹೇಗಾದರೂ ಸರ್ಕಾರ ರಚನೆ ಮಾಡಲಿದ್ದು, ಬಿಜೆಪಿಯ ಆಮಿಷಗಳಿಗೆ ಬಲಿಯಾಗಬಾರದು. ಗೆಲ್ಲುವ ಸಾಧ್ಯತೆ ಕಂಡುಬಂದರೆ ಹಾಗೂ ಮುನ್ನಡೆಯಲ್ಲಿದ್ದರೆ ಅಭ್ಯರ್ಥಿಗಳು ಬೆಂಗಳೂರಿಗೆ ಬರುವಂತೆ ಸೂಚಿಸಲಾಗಿದೆ. ಸರ್ಕಾರ ರಚನೆ ಆಗುವವರೆಗೆ ಬೆಂಗಳೂರಿನ ನಿರ್ದಿಷ್ಟ ಸ್ಥಳವೊಂದರಲ್ಲಿ ವಾಸ್ತವ್ಯ ಹೂಡುವಂತೆ ಸೂಚನೆ ನೀಡಲಾಗಿದೆ ಎಂದು ವರದಿ ಹೇಳಿದೆ.

Similar News