ತುಷಾರ್ ಗಿರಿನಾಥ್ ಅವಧಿಯಲ್ಲಿನ ಅಕ್ರಮಗಳ ಕುರಿತು ವಿಶೇಷ ತನಿಖೆ ನಡೆಯಲಿ: ಮುಖ್ಯ ಕಾರ್ಯದರ್ಶಿಗೆ ರಮೇಶ್‍ಬಾಬು ಮನವಿ

Update: 2023-05-17 15:25 GMT

ಬೆಂಗಳೂರು, ಮೇ 17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ತುಷಾರ್ ಗಿರಿನಾಥ್ ಅವರ ಅವಧಿಯಲ್ಲಿ ಕೇಳಿ ಬಂದಿರುವ ಅಕ್ರಮ ಆರೋಪಗಳ ಮೇಲೆ ವಿಶೇಷ ತನಿಖೆ ನಡೆಸಬೇಕೆಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‍ಬಾಬು ಮನವಿ ನೀಡಿದ್ದಾರೆ

ಬುಧವಾರ ಮನವಿ ಪತ್ರ ಸಲ್ಲಿಸಿರುವ ಅವರು, ತುಷಾರ್ ಗಿರಿನಾಥ್ ತಮ್ಮ ಅಧಿಕಾರದ ಅವಧಿಯಲ್ಲಿ ಕಾಮಗಾರಿಗಳ ಸಹಿತವಾಗಿ ಹಲವಾರು ಅಕ್ರಮಗಳಿಗೆ ಅವಕಾಶ ಕೊಟ್ಟಿರುವ ಆರೋಪವಿದೆ. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯ ಚುನಾವಣಾ ಅಧಿಕಾರಿಯಾಗಿ ಚಿಲುಮೆ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿಯ ಖಾಸಗಿ ವಿವರಗಳನ್ನು ಸಂಗ್ರಹಿಸುವ ಅವಕಾಶ ನೀಡುವುದರ ಮೂಲಕ ಅಕ್ರಮ ಎಸಗಿದ ಆರೋಪ ಅವರ ಮೇಲಿದ್ದು, ಇದೆಲ್ಲವನ್ನೂ ಮುಂದಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ರಮೇಶ್‍ಬಾಬು ಒತ್ತಾಯಿಸಿದರು. ಹೊಸ ಸರಕಾರ ಆಡಳಿತಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಾಲಿಕೆಗೆ ಸಂಬಂಧಪಟ್ಟಂತೆ ಇವರು ಯಾವುದೇ ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳದಂತೆ ನಿರ್ದೇಶನ ನೀಡಿ. ಮತದಾರರ ಪಟ್ಟಿಯ ಅಕ್ರಮಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ವತಿಯಿಂದ ತನಿಖೆ ಕೈಗೊಳ್ಳಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಮೇಶ್‍ಬಾಬು ಆಗ್ರಹಿಸಿದರು.

ಮತದಾರರ ಪಟ್ಟಿಯ ಅಕ್ರಮಗಳಿಗೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಇವರ ಅವಧಿಯ ಎಲ್ಲ ಹಗರಣಗಳ ಆರೋಪಗಳನ್ನು ತನಿಖೆಗೆ ಒಳಪಡಿಸುವುದು ಅವಶ್ಯಕ ಎಂದು ರಮೇಶ್‍ಬಾಬು ತಿಳಿಸಿದರು.

Similar News