ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

Update: 2023-05-18 15:56 GMT

ಬಂಟ್ವಾಳ: ಪಾಣೆಮಂಗಳೂರು ಸೇತುವೆಯ ಮೇಲಿನಿಂದ ನೇತ್ರಾವತಿ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಬಂಟ್ವಾಳ ‌ತಾಲೂಕಿನ‌ ಕಲ್ಲಡ್ಕ ಸಮೀಪದ ನೆಟ್ಲ ನಿವಾಸಿ ಪ್ರವೀಣ್ ಕುಲಾಲ್ ಆತ್ಮಹತ್ಯೆ ‌ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಈತ ಮಾನಸಿಕ ರೋಗದಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಇದೇ ಕಾರಣವಾಗಿರ ಬಹುದು ಎಂದು ಶಂಕಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಗಂಟೆಗಳ ಮುನ್ನ ಈತ ನೆಟ್ಲ ಭಾಗದ ಆತನ ಸ್ನೇಹಿತರ ವ್ಯಾಟ್ಸ್ ಆಪ್ ಗ್ರೂಪ್ ನಲ್ಲಿ ಸಾಯುವ ಬಗ್ಗೆ ಪೋಸ್ಟ್ ಮಾಡಿದ್ದ. ಪೋಸ್ಟ್ ನೋಡಿದ ಈತನ ಸ್ನೇಹಿತರು ಕೂಡಲೇ ಈತನನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಈತ ಯಾರ ಫೋನ್ ಕೂಡ ರಿಸೀವ್ ಮಾಡಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಈತ ಇರುವ ವ್ಯಾಪ್ತಿಯನ್ನು ಗುರುತಿಸಿ ತಿಳಿಸುವಂತೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ಕಾರ್ಯ ಪ್ರವೃತ್ತರಾಗುವ ಮುನ್ನವೇ ಈತ ಸೇತುವೆಯ ಮೇಲಿನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ.

ಬೈಕಿನಲ್ಲಿ ಬಂದ ಈತ ಬೈಕನ್ನು ಹೊಸ ಸೇತುವೆ ಬಳಿ  ರಸ್ತೆಯಲ್ಲಿ ನಿಲ್ಲಿಸಿ ಚಪ್ಪಲಿಯನ್ನು ಅಲ್ಲೆ ಬಿಟ್ಟು ನೇತ್ರಾವತಿ ನದಿಗೆ  ಹಾರಿದ್ದಾನೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಗೂಡಿನಬಳಿಯ ಮುಳುಗು ತಜ್ಞರಾದ ಮೊಹಮ್ಮದ್ ಎಂ.ಕೆ., ಸಮೀರ್ ಚಮ್ಮಿ, ಅಶ್ರಫ್ ಅಕ್ಕರಂಗಡಿ ಅವರು ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಕಾರದೊಂದಿಗೆ ಮೃತದೇಹವನ್ನು ಪತ್ತೆ ಹಚ್ಚಿ ಮೇಲಕ್ಕೆತ್ತಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ  ರಾಮಕೃಷ್ಣ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News