'ಕಮಿಷನ್ ಹೋಯ್ತು, ಗ್ಯಾರಂಟಿ ಬಂತು': ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನ ಸಮಾರಂಭದಲ್ಲಿ ಅಭಿಮಾನಿಗಳ ಘೋಷಣೆ

Update: 2023-05-20 16:39 GMT

ಬೆಂಗಳೂರು, ಮೇ 20: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರುಗಳ ಪ್ರಮಾಣ ವಚನ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದುಬಂದಿತ್ತು.

ಶನಿವಾರದ ಮಧ್ಯಾಹ್ನ 12:30ಕ್ಕೆ ನಿಗದಿಯಾಗಿದ್ದ ಪದಗ್ರಹಣ ಸಮಾರಂಭಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಜನರು ಶುಕ್ರವಾರ ರಾತ್ರಿಯೇ ಬೆಂಗಳೂರಿಗೆ ಬಂದು ಸೇರಿದ್ದರು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ರಾಯಚೂರು, ಬೀದರ್, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಕಲಬುರಗಿ, ಚಾಮರಾಜನಗರ, ವಿಜಯಪುರ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ಕಂಡುಬಂತು. ಇನ್ನು ಹಲವು ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಕಮಿಷನ್ ಹೋಯ್ತು, ಗ್ಯಾರಂಟಿ ಬಂತು: ಸಮಾರಂಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಕಂಠೀರವ ಕ್ರೀಡಾಂಗಣದ ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ‘ಸಿದ್ದು, ಡಿಕೆ..’ ಎಂದು ಕೂಗತೊಡಗಿದರು. ಮತ್ತೊಂದೆಡೆ ‘ಕಮಿಷನ್ ಹೋಯ್ತು, ಗ್ಯಾರಂಟಿ ಬಂತು’ ಎನ್ನುವ ಘೋಷಣೆಗಳ ಮೂಲಕ ನೇರವಾಗಿ ಬಿಜೆಪಿಗೆ ತಿರುಗೇಟು ನೀಡಿದರು. 

ಟಗರು ಟ್ಯಾಟು: ಅಭಿಮಾನಿಯೋರ್ವ ‘ಟಗರು’ ಎಂದು ಬರೆದು ಸಿದ್ದರಾಮಯ್ಯ ಚಿತ್ರವನ್ನು ಕೈಯಲ್ಲಿ ಅಚ್ಚೆ(ಟ್ಯಾಟೂ) ಹಾಕಿಸಿಕೊಂಡ ವ್ಯಕ್ತಿ ವಿಶೇಷವಾಗಿ ಗಮನ ಸೆಳೆದರು. ಅಲ್ಲದೆ ವಿಶೇಷಚೇತನರೂ ಕೂಡಾ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಣ್ತುಂಬಿಕೊಳ್ಳಲು ಶುಕ್ರವಾರವೇ ಬೆಂಗಳೂರಿಗೆ ಆಗಮಿಸಿದ್ದಾಗಿ ತಿಳಿಸಿದರು.

ಸಿದ್ದರಾಮಯ್ಯ ಟೀ ಶರ್ಟ್‍ಗೆ ಬೇಡಿಕೆ: ಕ್ರೀಡಾಂಗಣಕ್ಕೆ ಬಂದಿದ್ದ ಸಿದ್ದರಾಮಯ್ಯ ಅಭಿಮಾನಿಗಳು ಅವರ ಭಾವಚಿತ್ರವಿರುವ ಟೀ ಶರ್ಟ್ ಧರಿಸಿದ್ದರು. ಮೈಸೂರಿನ ಬಹುತೇಕ ಮಂದಿ ಸಿದ್ದರಾಮಯ್ಯ ಚಿತ್ರವಿರುವ ಹಳದಿ ಬಣ್ಣದ ಬಾವುಟ ಹಾರಿಸಿ ಅಭಿಮಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತ್ರಿವರ್ಣ ರಂಗ, ಕಾಂಗ್ರೆಸ್ ಬಾವುಟಗಳು ಹಾಗೂ ಟೋಪಿಗಳು ಎಲ್ಲೆಡೆ ರಾರಾಜಿಸಿದರು. ಕ್ರೀಡಾಂಗಣದೊಳಗೆ ಜನರು ಕಿಕ್ಕಿರಿದು ತುಂಬಿದ್ದರಿಂದ ಹೊರಗಡೆಯೂ ಜನಸಂದಣಿಯ ಕೂಗು ಜೋರಾಗಿತ್ತು.

ಸಮಾರಂಭಕ್ಕೆ ಆಗಮಿಸಿದ್ದ ದೊಡ್ಡ ಸಂಖ್ಯೆಯ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು. ಗೇಟ್‍ಗಳಲ್ಲಿ ಅಭಿಮಾನಿಗಳ ನೂಕುನುಗ್ಗಲು ಹೆಚ್ಚಾಗಿ ಲಘು ಲಾಠಿ ಪ್ರಹಾರವು ನಡೆಯಿತು. ಇನ್ನು ಬಿಸಿಲಿ ಝಳ ತಾಳಲಾರದೆ ಕೆಲವರು ಪ್ರತಿಜ್ಞಾವಿಧಿ ಮುಗಿಯುತ್ತಿದ್ದಂತೆ ಪೆವಿಲಿಯನ್‍ನಿಂದ ಹೊರ ನಡೆದರು. ಒಟ್ಟಾರೆ ಬಹುತೇಕ ಬೆಂಗಳೂರು ನೂರಾರು ಫ್ಲೆಕ್ಸ್, ಬಾವುಟಗಳಿಂದ, ಜನಸಾಗರದಿಂದ ಕೂಡಿತ್ತು. 

ಕಂಬಳಿ ಹೊತ್ತು ತಂದ ಅಭಿಮಾನಿ: ‘ಸಿದ್ದರಾಮಯ್ಯರ ಮೈಸೂರಿನ ಅಭಿಮಾನಿಯೊಬ್ಬ ಕರಿಕಂಬಳಿ ಸೇರಿದಂತೆ ಕುರಿ ಉಣ್ಣೆಯಿಂದ ತಯಾರಾದ ವಿವಿಧ ಬಗೆಯ ಬಟ್ಟೆಗಳನ್ನು ತಂದು ಮಾರಾಟಕ್ಕಿಳಿದಿದ್ದರು. ಸಿದ್ದರಾಮಯ್ಯ ಎರಡನೆ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆನ್ನುವ ಖುಷಿಯಲ್ಲಿ ಅವರ ಭಾವಚಿತ್ರದ ಮುಖವಾಡವನ್ನು ಧರಿಸಿ ಎಂದಿಗಿಂತ ಕಡಿಮೆ ಬೆಲೆಗೆ ಕಂಬಳಿಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದರು.

ಸಾಕ್ಷಿಯಾದ ಸಿನಿ ತಾರೆಯರು: ಕಾರ್ಯಕ್ರಮದಲ್ಲಿ ಅಭಿಮಾನಿಗಳ ಕೂಗನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದ್ದು, ಸಿನಿಮಾ ತಾರೆಯರ ಆಗಮನ. ಕಾಂಗ್ರೆಸ್ ಪಕ್ಷಕ್ಕೆ ಅನೇಕ ಸಿನಿ ತಾರೆಯರು ಬೆಂಬಲ ನೀಡಿ ಚುನಾವಣಾ ಪ್ರಚಾರದಿಂದಲೂ ಸುದ್ದಿಯಾಗಿದ್ದರು. ಇನ್ನು ಅವರೆಲ್ಲರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ನಟ ಕಮಲ್ ಹಾಸನ್, ಶಿವರಾಜ್ ಕುಮಾರ್, ದುನಿಯಾ ವಿಜಯ್, ಸಾಧು ಕೋಕಿಲ, ಝೈಯಿದ್ ಖಾನ್, ನಟಿ ರಮ್ಯಾ, ಉಮಾಶ್ರೀ, ನಿರ್ಮಾಪಕಿ ಗೀತಾ ಶಿವರಾಜ್‍ಕುಮಾರ್, ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಸಾ.ರಾ.ಗೋವಿಂದು ಸೇರಿ ಚಿತ್ರರಂಗದ ಹಲವರು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮೆರುಗು ತಂದ ಕಲಾತಂಡ: ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದ್ಯ, ಭಜರಂಗಿ ವೇಷಾಧಾರಿಗಳ ಕುಣಿತ ಸೇರಿದಂತೆ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಲಾ ತಂಡಗಳು ಮೆರಗು ತಂದವು. ಈ ವೇಳೆಯಲ್ಲಿ ಅಭಿಮಾನಿಗಳ ಕಲಾತಂಡದೊಂದಿಗೆ ಹೆಜ್ಜೆ ಹಾಕುತ್ತಾ ಹಬ್ಬದಂತೆ ಸಂಭ್ರಮಿಸಿದರು.

‘ಸಿದ್ದರಾಮೋತ್ಸವ, ಭಾರತ್ ಜೋಡೊ ನಂತರ ಇದೊಂದು ಐತಿಹಾಸಿಕ ಯಶಸ್ಸಿನ ಕಾರ್ಯಕ್ರಮ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಖುಷಿ ತಂದಿದೆ. ಮುಳುಗುತ್ತಿದ್ದ ಜನಸಾಮಾನ್ಯರ ಬದುಕು ಮತ್ತೆ ಉಸಿರಾಟಕ್ಕೆ ತಿರುಗಿದೆ. ಬಿಜೆಪಿಯ ಭ್ರಷ್ಟತನವನ್ನು ಜನರು ಬುಡಮೇಲು ಮಾಡಿದ್ದಾರೆ. ಇನ್ನು ಕೇಂದ್ರದಲ್ಲಿ ಮೋದಿಯಂತಹ ದೇಶ ಮಾರಾಟ ಮಾಡುವ ಸರ್ವಾಧಿಕಾರಿ ಹೋಗಬೇಕು. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮಾತ್ರ ಸಾಮಾನ್ಯನೊಬ್ಬ ಸದೃಢ ಬದುಕನ್ನು ನಡೆಸಲು ಸಾಧ್ಯ’

-ನಾಗವೇಣಿ, ಆನೇಕಲ್.

‘ರಾಜ್ಯದ ಜನರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಕೊಟ್ಟ ಭಾಗ್ಯವಿದಾತ ಸಿದ್ದರಾಮಯ್ಯ ಬಂದಿರುವುದು ನಮ್ಮೆಲ್ಲರ ಹೆಮ್ಮೆ. ಸರ್ವರ ನಾಯಕ, ಅಹಿಂದ ನಾಯಕ ಸಿದ್ದರಾಮಯ್ಯ ರಾಜ್ಯದ ಚುಕ್ಕಾಣಿ ಹಿಡಿಯುವುದನ್ನು ನಾವು ಐದು ವರ್ಷದಿಂದ ಕಾತುರದಿಂದ ಕಾದಿದ್ದೆವು. ಈಗ ಅದು ಸಾಕಾರವಾಗಿದೆ’ 

-ಶಿವಲಿಂಗಮೂರ್ತಿ, ಶಿರಾ. 

Similar News