ಗ್ಯಾರಂಟಿಗಳ ಜಾರಿಗೆ ಬಿಜೆಪಿಯವರಿಗೆ ಅವಸರ : ಐವನ್ ಡಿ ಸೋಜಾ
ಮಂಗಳೂರು, ಮೇ 22: ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಿದೆ. ಆದೇಶ ಜಾರಿಯಾಗಿದೆ. ಇನ್ನು ಫಲಾನುಭವಿಗಳ ಆಯ್ಕೆ ಮಾಡಬೇಕಿದೆ. ಇದಕ್ಕೆ ಸ್ವಲ್ಪ ದಿನ ಬೇಕಾಗಿದೆ. ಆದರೆ ಬಿಜೆಪಿಯವರು ಮಾತ್ರ ಬಹಳ ಅವಸರದಲ್ಲಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿ ಸೋಜಾ ಹೇಳಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಯನ್ನು ಜನರು ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ಟೀಕಿಸಿದ್ದ ಬಿಜೆಪಿಯ ನಾಯಕರು ಈಗ ಕಾಂಗ್ರೆಸ್ನ ಗ್ಯಾರಂಟಿಯನ್ನು ಷರತ್ತಿಲ್ಲದೆ ಜಾರಿಗೆ ತನ್ನಿ ಎಂದು ಹೇಳುತ್ತಿದ್ದಾರೆ. ಹಾಗೆಲ್ಲ ಕೊಡಲಿಕ್ಕೆ ಆಗುತ್ತದಾ ? ಫಲಾನುಭವಿಗಳನ್ನು ಗುರುತಿಸಬೇಕಲ್ಲವೆ ಎಂದು ಪ್ರಶ್ನಿಸಿದರು.
ನಾವು ಜಾರಿ ಮಾಡ್ತೇವೆ ಅಂದದ್ದು ಜಾರಿ ಆಗಿದೆ. ಆದರೆ ಬಿಜೆಪಿ ಬೊಕ್ಕಸ ಲೂಟಿ ಮಾಡಿದೆ. ಖಜಾನೆ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಅದನ್ನು ತುಂಬಿಸಲು ನೂತನ ಸರಕಾರ ಚಿಂತನೆ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಬೇಕಾಗಿದೆ ಎಂದರು.
ಹಿಂದೆ ಬಿಜೆಪಿ ರೈತರಿಗೆ 2 ಸಾವಿರ ಕೊಟ್ರಲ್ಲ, ಫಲಾನುಭವಿಗಳನ್ನು ಗುರುತಿಸದೆ ಹಾಗೇ ಕೊಟ್ರಾ?, ಗ್ಯಾಸ್ ಸಿಲಿಂಡರ್ ಎಲ್ಲರಿಗೂ ಕೊಟ್ರಾ ? ಹಾಗೆಯೇ ಉಚಿತ ವಿದ್ಯುತ್ ಯಾವ ಮನೆಗೆ ? , ಸಹಾಯಧನ ಪಡೆಯಲು ಮನೆಯೊಡತಿ ಯಾರು ? ಎಂಬ ತೀರ್ಮಾನವಾಗಬೇಕಾಗಿದೆ. ಆದರೆ ಕಾಂಗ್ರೆಸ್ನ ಗ್ಯಾರಂಟಿ ಜಾರಿಗೆ ತರುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ ಬಿಜೆಪಿಯವರು ಅಧಿಕಾರ ಕಳೆದುಕೊಂಡು ಗೊಂದಲದಲ್ಲಿ ಸಿಲುಕಿದ್ದಾರೆ. ಅವರಿಗೆ ಕಾಂಗ್ರೆಸ್ನ ಗ್ಯಾರಂಟಿಯ ಬಗ್ಗೆ ಕೇಳಲು ನೈತಿಕತೆ ಇಲ್ಲ, ನೈತಿಕತೆ ಇದ್ದರೆ ಹಿಂದೆ ಪ್ರಧಾನಿ ಮೋದಿ ಭರವಸೆ ನೀಡಿದ್ದ 15 ಲಕ್ಷ ರೂ. ಪ್ರತಿಯೊಬ್ಬರ ಅಕೌಂಟಿಗೆ ಹಾಕಿಸಲಿ, ರೈತರ ಆದಾಯ ಡಬಲ್ ಮಾಡಲಿ ಎಂದು ಸವಾಲು ಹಾಕಿದರು.
60,000 ಗುಂಡಿಗೆ 7,121 ಕೋಟಿ ರೂ. ಖರ್ಚು : ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರಸ್ತೆಯಲ್ಲಿರುವ 60,000 ಗುಂಡಿ ಮುಚ್ಚಲು 7,121 ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ವರದಿಯನ್ನು ಪತ್ರಿಕೆಗಳಲ್ಲಿ ಓದಿದೆ. ಅಂದರೆ ಒಂದು ಗುಂಡಿ ಮುಚ್ಚಲು 20 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದು ಸರಕಾರದ ದುಂದುವೆಚ್ಚಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕೇಂದ್ರ ಹಣಕಾಸು ಆಯೋಗ ಹೇಳಿದ ರಾಜ್ಯದ ಅನುದಾನ ಪಾಲನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ತಿರ ಕೇಳಿ ತರಲು ಬಿಜೆಪಿ ರಾಜ್ಯದ ಸಂಸದರಿಗೆ ತಾಕತ್ತು ಇಲ್ಲ. ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲುವುದಾಗಿ ಎಂದು ಹೇಳಿದರು.
ಎಂಆರ್ಪಿಎಲ್ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲಿ: ಎಂಆರ್ಪಿಎಲ್ನಲ್ಲಿ ವಿವಿಧ ಹುದ್ದೆಗಳಿಗೆ ನೋಟಿಫಿಕೇಶನ್ ಮಾಡಿದ್ದಾರೆ. ಹುದ್ದೆಗಳೆಲ್ಲ ಡಿಪ್ಲೊಮಾ ಇಂಜಿನಿಯರ್ಗಳ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಬಾರಿ 235ರಲ್ಲಿ ಹುದ್ದೆಗಳಲ್ಲಿ 3ನ್ನು ಮಾತ್ರ ಕನ್ನಡಿಗರಿಗೆ ನೀಡಲಾಗಿತ್ತು. ಆದುದರಿಂದ ಕೂಡಲೆ ಆನ್ ಲೈನ್ ಅರ್ಜಿ ರದ್ದು ಮಾಡಿ. ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಿ. ರಾಜ್ಯದವರಿಗೆ ಅದರಲ್ಲೂ ಜಾಗ ಕಳೆದುಕೊಂಡ ಸ್ಥಳೀಯರಿಗೆ ಉದ್ಯೋಗ ನೀಡಲಿ ಎಂದು ಆಗ್ರಹಿಸಿದರು.
2006ರಲ್ಲಿ ಎಂಎಸ್ಇಝೆಡ್ಗೆ ಭೂಮಿ ಬಿಟ್ಟು ಕೊಟ್ಟ 250 ಕುಟುಂಬಗಳಿಗೆ ಉದ್ಯೋಗ ನೀಡಿಲ್ಲ. ಜೆಬಿಎಫ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ 76 ನಿರ್ವಹಿಸಿತ ಅಭ್ಯರ್ಥಿಗಳಿಗೆ 30 ತಿಂಗಳು ಕಳೆದರೂ ಸಂಬಳ ಸಿಕ್ಕಿಲ್ಲ. ಎಂಆರ್ಪಿಎಲ್ನ ನಾಲ್ಕನೇ ಹಂತದ ಯೋಜನೆಗೆ ಭೂಮಿ ನೀಡಿದ್ದ 450 ಕುಟುಂಬಗಳಿಗೆ 6 ವರ್ಷ ಕಳೆದರೂ ಉದ್ಯೋಗ ಭರವಸೆ ಇನ್ನೂ ಈಡೇರಿಲ್ಲ.2013ರಲ್ಲಿ ಯುಪಿಎ ಸರಕಾರ ಜಾರಿಗೊಳಿಸಿದ್ದ ಭೂಸ್ವಾಧೀನ ಕಾಯ್ದೆಗೆ 2022ರಲ್ಲಿ ಕರ್ನಾಟಕದ ಬಿಜೆಪಿ ಸರಕಾರ ತಿದ್ದುಪಡಿ ಮಾಡಿ , ಕೈಗಾರಿಕೆಯ ಸ್ಥಾಪನೆ ವೇಳೆ ಭೂಮಿ ಕಳೆದು ಕೊಂಡ ನಿರ್ವಹಿಸಿತರಿಗೆ ದೊರಕುವ ಉದ್ಯೋಗ ಮತ್ತು ಪುನರ್ವಸತಿ ನಿವೇಶನದ ಹಕ್ಕನ್ನು ಕಸಿದು ಕೊಳ್ಳಲಾಗಿತ್ತು. ಸ್ಥಳೀಯರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ಗಳಾದ ಶಶಿಧರ ಹೆಗ್ಡೆ ಮತ್ತು ಅಶ್ರಫ್, ಮನಪಾ ವಿಪಕ್ಷ ನಾಯಕ ನವೀನ್ ಡಿ ಸೋಜಾ, ಪಕ್ಷದ ಧುರೀಣರಾದ ಭಾಸ್ಕರ್, ಸುಧೀರ್ ಶೆಟ್ಟಿ, ನಝೀರ್, ಮುಸ್ತಫಾ ಉಪಸ್ಥಿತರಿದ್ದರು.