ಹಿಂಸೆ ಬೇಡುವ ಸಿಂಹಾಸನದ ನಾಟಕಗಳ ಸುತ್ತ

Update: 2023-05-26 07:18 GMT

"ಯುದ್ಧವಾದರೆ ಯಾರು ಗೆಲ್ತಾರೆ ಅನ್ನುವುದನ್ನು ಯುದ್ಧವೇ ನಿರ್ಧಾರ ಮಾಡುತ್ತೆ. ಯಾರು ಗೆಲ್ತಾರೆ, ಯಾರು ಬದುಕ್ತಾರೆ ಯಾರಿಗೆ ಗೊತ್ತು?" - ಸರ್ಮದ್ (ವಾರಸುದಾರಾ)

"ಯುದ್ಧ ಮಾಡುವುದು ನಮ್ಮ ಕೈಯಲ್ಲಿದೆ. ಯುದ್ಧ ನಿಲ್ಲಿಸುವುದು ನಮ್ಮ ಕೈಯಲ್ಲಿಲ್ಲ."  - ಕೆಂಪೇಗೌಡರು (ಸಿರಿಗೆ ಸೆರೆ)

"ಹಿಂಸೆಯ ಕೊನೆಯ ಘಟ್ಟವೇ ಯುದ್ಧ." - ಸೈನಿಕ (ಚಾವುಂಡರಾಯ)

"ಅಹಿಂಸೆಯನ್ನು ಬಯಸುವ ನನ್ನ ಜಿನಧರ್ಮದ ಜೊತೆಯಲ್ಲಿ ಹಿಂಸೆ ಬೇಡುವ ಸಿಂಹಾಸನದ ಅಗತ್ಯಗಳನ್ನು ಇನ್ನೆಷ್ಟು ದಿನ ಪೂರೈಸಲಿ?... ಹೆಣದ ರಾಶಿಯ ದಾಟಿ ಗಡಿ ಬೆಳೆಸಬಾರದು." - ಚಾವುಂಡರಾಯ (ಚಾವುಂಡರಾಯ)

ಹೀಗೆ ಅಧಿಕಾರ, ಗದ್ದುಗೆ, ಯುದ್ಧದ ಪರಿಣಾಮಗಳ ಕುರಿತ ಮೂರು ನಾಟಕಗಳು ಮೈಸೂರಿನಲ್ಲಿ (ಮೇ ೧೯-೨೧) ಪ್ರದರ್ಶನಗೊಂಡವು. ‘ಸಿರಿಗೆ ಸೆರೆ’, ‘ಚಾವುಂಡರಾಯ’ ಹಾಗೂ ‘ವಾರಸುದಾರಾ’ ಈ ಮೂರೂ ನಾಟಕಗಳ ರಚನೆಕಾರರು ಜಯರಾಮ್ ರಾಯಪುರ. ಈ ನಾಟಕಗಳನ್ನು ಮೈಸೂರಿನ ನಿರಂತರ ಫೌಂಡೇಶನ್ ತಂಡವು ‘ರಂಗ ವಸಂತ’ ಎಂಬ ಹೆಸರಿನ ಉತ್ಸವದಲ್ಲಿ ಪ್ರದರ್ಶಿಸಿತು.

‘ಸಿರಿಗೆ ಸೆರೆ’ ನಾಟಕವನ್ನು ಮಂಡ್ಯದ ಜನದನಿ ತಂಡವು ಅಜಯ್ ನೀನಾಸಂ ನಿರ್ದೇಶನದಲ್ಲಿ ಪ್ರಯೋಗಿಸಿತು. ಇದು ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಕುರಿತ ನಾಟಕ. ವಿಜಯನಗರ ಸಾಮ್ರಾಜ್ಯಕ್ಕೆ ಕೃಷ್ಣದೇವರಾಯನ ಕಾಲದಿಂದಲೂ ಕೆಂಪೇಗೌಡರು ಸಾಮಂತರು. ಇದಕ್ಕಾಗಿ ಪ್ರತೀ ವರ್ಷ ಕಪ್ಪ ಕಾಣಿಕೆ ಸಲ್ಲಿಸಬೇಕಿತ್ತು. ಆದರೆ ನಾಣ್ಯಗಳ ಅಭಾವದ ಕಾರಣಕ್ಕೆ ಕೆಂಪೇಗೌಡರು ನಾಣ್ಯಗಳನ್ನು ಮುದ್ರಿಸಿ ವ್ಯಾಪಾರಕ್ಕೆ ಬಿಡುತ್ತಾರೆ. ಜೊತೆಗೆ ಬೆಂಗಳೂರು ಸುತ್ತ ಕೋಟೆ ಕಟ್ಟಿಸುತ್ತಾರೆ. ಇದು ವಿಜಯನಗರದ ಅರಸರ ಕಣ್ಣುಗಳು ಕೆಂಪಾಗಲು ಕಾರಣವಾಗುತ್ತದೆ. ಅಲ್ಲದೆ ವಿಜಯನಗರದ ಅರಸರು ಶಿವನಸಮುದ್ರದ ಗಂಗರಾಜರ ಮೇಲೆ ಯುದ್ಧ ಮಾಡಿರೆಂದು ಕೆಂಪೇಗೌಡರಿಗೆ ಹೇಳುತ್ತಾರೆ. ಆಗ ಯುದ್ಧ ಮಾಡಿ ಗೆದ್ದ ಪರಿಣಾಮ ಸಾವುನೋವು ಕಂಡು ಕೆಂಪೇಗೌಡರು ನೆಮ್ಮದಿ, ಶಾಂತಿಗಾಗಿ ಯುದ್ಧ ಬೇಡವೆಂದು ಅರಿಯುತ್ತಾರೆ. ಇದರೊಂದಿಗೆ ಕಪ್ಪಕಾಣಿಕೆ ಕೊಡಲಾಗದಿದ್ದರೆ ನಿಮ್ಮ ಮಗ ಚಿಕ್ಕಭೈರೇಗೌಡರನ್ನು ಒತ್ತೆಯಾಳಾಗಿ ಇಡಿ ಎಂದು ವಿಜಯನಗರದ ಅರಸರು ಹೇಳುತ್ತಾರೆ. ಆಗ ಚಿಕ್ಕಭೈರೇಗೌಡರು ವಿಜಯನಗರದ ಅರಸರಿಗೆ ಹೆದರಬೇಕಾಗಿಲ್ಲ, ಕಪ್ಪಕಾಣಿಕೆ ಕೊಡುವುದು ಬೇಡ, ಯುದ್ಧ ಮಾಡೋಣವೆಂದು ಹೇಳಿದಾಗ ಕೆಂಪೇಗೌಡರು ‘‘ವಿಜಯನಗರದ ೧,೨೦೦ ಸೈನಿಕರನ್ನು ಹೊಡೆದು ಓಡಿಸಬಹುದು. ಮುಂದೆ ೧೨ ಸಾವಿರ ಸೈನಿಕರನ್ನು ಕಳಿಸಿದರೆ ಎದುರಿಸಲು ಆಗುವುದೆ? ಇಡೀ ನಮ್ಮ ಬೆಂಗಳೂರು ಪ್ರಾಂತ ರಕ್ತಮಯವಾಗುತ್ತದೆ. ಪ್ರಜೆಗಳು ಹಾಳಾಗುತ್ತಾರೆ. ಅವರ ಇಚ್ಛೆಯಂತೆ ಒತ್ತೆಯಾಳುಗಳಾಗಿ ಹೋಗುವುದು ಸೂಕ್ತ’’ ಎಂಬ ಸಲಹೆ ನೀಡುತ್ತಾರೆ. ನಂತರ ಕೆಂಪೇಗೌಡರು ತಮ್ಮ ಪತ್ನಿ ಸಮೇತ ಒತ್ತೆಯಾಳುಗಳಾಗಿ ಹೊರಡುತ್ತಾರೆ. ಆರು ವರ್ಷಗಳ ನಂತರ ವಾಪಸ್ ಬರುತ್ತಾರೆ. ಹೀಗೆ ನಾಟಕ ಮುಂದುವರಿಯುತ್ತದೆ. ಕೆಂಪೇಗೌಡರಾಗಿ ಶ್ರೀಕಂಠೇಗೌಡ ಹುಲಿವಾನ, ಹಿರಿಯ ವೀರಣ್ಣನಾಗಿ ಕಾಳೇನಹಳ್ಳಿ ಕೆಂಚೇಗೌಡ, ಚಿಕ್ಕಭೈರೇಗೌಡನಾಗಿ ಶಶಾಂಕ್, ಸಾಹುಕಾರ ದೇವಯ್ಯನಾಗಿ ಶಿವರಾಮು ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಆದರೆ ಪ್ರಮುಖ ಕಲಾವಿದರ ಗೈರು, ತಾಲೀಮಿನ ಕೊರತೆಯಿಂದ ನಾಟಕ ಅಷ್ಟಾಗಿ ಯಶಸ್ಸಾಗಲಿಲ್ಲ.

ಎರಡನೆಯ ನಾಟಕವಾಗಿ ಪ್ರದರ್ಶನಗೊಂಡ ‘ಚಾವುಂಡರಾಯ’ ಗಮನ ಸೆಳೆಯಿತು. ನಾಟಕ ಶುರುವಾಗುವುದೇ ಕವಿ ರನ್ನನ ಪ್ರವೇಶದಿಂದ.

ತಾನೊಬ್ಬ ಕವಿ. ‘‘ಕವಿಯಂದ್ರ ಕಾವ್ಯ ಬರೆದು ಪ್ರಶಸ್ತಿ ಪಡೆದು ಕವಿರತ್ನ, ಕವಿಚಕ್ರವರ್ತಿ ಅಂತ ಬಿರುದು ಪಡೆದು ಹೆಸರು ಮಾಡಾಕ ಹೊಂಟಾಂವ. ಆದ್ರ ಏನು ಬರೆಯಬೇಕು ಅಂತ ತೋಚವಲ್ದು. ಅದಕ್ಕ ಸೈನ್ಯಕ್ಕೆ ಸೇರಿ ಅನುಭವ ಪಡೆಯಾಕ ಬಂದೀನಿ’’ ಎಂದು ಪರಿಚಯಿಸಿಕೊಳ್ಳುವ ಮೂಲಕ ನಾಟಕ ಕಳೆ ಕಟ್ಟುತ್ತದೆ.

‘‘ವಾಸ್ತವ ಎಲ್ಲರೂ ಕಾಣುವ ಸತ್ಯ. ಆದರೆ ಕಾಲ್ಪನಿಕತೆ ಮಾತ್ರ ನಾವು ಕಾಣುವ ಆದರ್ಶ’’ ಎಂದು ರನ್ನ ಹೇಳುವ ಇಂಥ ಮಾತುಗಳು ನಾಟಕದ ಉದ್ದಕ್ಕೂ ಇವೆ. ಚಾವುಂಡರಾಯನಾಗಿ ಪವನ್, ರನ್ನನಾಗಿ ಪ್ರವೀಣ್ ಕರಡೇರ್, ರಾಚಮಲ್ಲ ಮತ್ತು ಗೊಮ್ಮಟನಾಗಿ ರಾಹುಲ್ ಶ್ರೀನಿವಾಸ್, ಪಾಂಚಾಲದೇವನಾಗಿ ಶರತ್, ರಕ್ಕಸಗಂಗಾನಾಗಿ ಶಮಂತ್, ಗೋವಿಂದರಸನಾಗಿ ಬಿ.ಜಿ.ಶ್ರೀಕಾಂತ್, ಮಾರಸಿಂಹನಾಗಿ ಆನಂದ್, ಮಾವುತ ಕುಟುಂಬದ ಪಾತ್ರಧಾರಿಗಳಾಗಿ ನಾಗರಾಜ ಶಿಂಪಿ, ಫೈರೋಝ್, ವೇದಾನಕ್ಷತ್ರ, ಮಧುರಾಚಯ್ಯನಾಗಿ ಮಂಜು ಸಿದ್ಧಯ್ಯ, ಅಜಿತನಾಥನಾಗಿ ಕಿರಣ್, ನೇಮಿನಾಥನಾಗಿ ಸುಮುಖ, ಅಜಿತಾದೇವಿಯಾಗಿ ದೀಪು, ಕಾಳಲಾದೇವಿಯಾಗಿ ರಂಜಿತಾ, ನಾಗವರ್ಮನಾಗಿ ಸಂತೋಷ್ ರಾಮನಗರ ಅಭಿನಂದನಾರ್ಹರು. ಈ ನಾಟಕದ ವಿನ್ಯಾಸ ಎಚ್.ಕೆ.ದ್ವಾರಕನಾಥ್, ವಸ್ತ್ರವಿನ್ಯಾಸ ಎನ್.ಮಂಗಳಾ ಅವರದು. ಅರುಣ್ ಮೂರ್ತಿ ಅವರ ಬೆಳಕು, ದಿಗ್ವಿಜಯ್ ಹಾಗೂ ಶ್ರೀಧರ ಹೆಗ್ಗೋಡು ಅವರ ಸಂಗೀತ, ಸಾಲಿಯಾನ ಉಮೇಶ ನಾರಾಯಣ ಅವರ ಸಹನಿರ್ದೇಶನ ಹಾಗೂ ಹುಲುಗಪ್ಪ ಕಟ್ಟಿಮನಿ ಅವರ ನಿರ್ದೇಶನದ ಈ ನಾಟಕವನ್ನು ಬೆಂಗಳೂರಿನ ಸಮಾಜಮುಖಿ ತಂಡ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿತು. ಸಮಾಜಮುಖಿ ತಂಡದ ಸಂಚಾಲಕರಾದ ಶಶಿಧರ ಭಾರಿಘಾಟ್ ಹಾಗೂ ಬಿ.ಆರ್.ಗೋಪಿನಾಥ್ ಅವರ ಶ್ರಮ ಸಾರ್ಥಕ.

ಮೂರನೆಯ ನಾಟಕವಾಗಿ ಮೈಸೂರಿನ ನಿರಂತರ ತಂಡವು ‘ವಾರಸುದಾರಾ’ ನಾಟಕ ಪ್ರಸ್ತುತಪಡಿಸಿತು. ಮೊಗಲ್ ವಂಶಸ್ಥರಾದ ಶಹಜಹಾನ್, ಔರಂಗಝೇಬ್ ಹಾಗೂ ದಾರಾ ಶಿಖೊಹ್. ಈ ಮೂವರಲ್ಲಿ ದಾರಾ ಮಾತ್ರ ಅಧ್ಯಾತ್ಮದತ್ತ ಒಲವುಳ್ಳವನು. ರೂಮಿಯ ಕಾವ್ಯ ಓದಿಕೊಂಡು, ತತ್ವಜ್ಞಾನಿಯಂತೆ ಮಾತನಾಡುವವನು. ಆದರೆ ಔರಂಗಝೇಬ್ ಹಾಗಲ್ಲ. ‘‘ಬಾದಶಹಾ ಯಾರು ಎನ್ನುವುದನ್ನು ಯುದ್ಧ ತೀರ್ಮಾನಿಸಲಿದೆ. ಯುದ್ಧಭೂಮಿಯಲ್ಲಿ ಯಾರು ಕಡೆಯವರೆಗೂ ನಿಲ್ಲುತ್ತಾನೆಯೋ ಅವನೇ ಬಾದಶಹಾ. ಉಳಿದವರೆಲ್ಲಾ ಬೆತ್ತಲೆ ಶವ, ಕೇವಲ ಬೆತ್ತಲೆ ಶವ’’ ಎನ್ನುವ ಮೂಲಕ ತಾನು ಏನು ಎಂಬುದನ್ನು ಸಾಬೀತುಪಡಿಸುತ್ತಾನೆ.

ಹೀಗೆಯೇ ಶಹಜಹಾನ್ ತನ್ನ ಸಂಬಂಧಿಕರನ್ನು ಕೊಂದು ಅಧಿಕಾರದ ಗದ್ದುಗೆ ಏರಿದವನು. ನಂತರ ಔರಂಗಝೇಬನಿಗೆ ಬಲಿಯಾಗುವವನು. ಅವನ ಮಾತು ಗಮನಿಸಿ- ಯಾವುದೇ ಸೈನಿಕ ಸಾಯುತ್ತೇನೆಂದು ಯುದ್ಧಕ್ಕೆ ಹೊರಡುವುದಿಲ್ಲ. ತಾನು ಗೆದ್ದು ಸೋತ ಶತ್ರುವನ್ನು ದೋಚಿ ಶ್ರೀಮಂತನಾಗಲು ಹೊರಡುತ್ತಾನೆ. ಹಣಬಲ, ಸಂಖ್ಯಾಬಲ, ಯುಕ್ತಿಬಲ, ಅದೃಷ್ಟಬಲವಿರುವ ಸೈನ್ಯ ಗೆಲ್ಲುತ್ತದೆ. ಸೋತ ಸೈನ್ಯದ ಸೈನಿಕ ಸಾಯುತ್ತಾನೆ ಇಲ್ಲವೆ ಓಡಿಹೋಗುತ್ತಾನೆ ಎನ್ನುವ ಮೂಲಕ ಯುದ್ಧದ ಸ್ಥಿತಿಗತಿಯನ್ನು ಅನಾವರಣಗೊಳಿಸುತ್ತಾನೆ. ಕೊನೆಗೆ ಔರಂಗಝೇಬ್‌ನನ್ನು ಶಹಜಹಾನ್ ಕೇಳುವ ಮಾತು ಮಾರ್ಮಿಕ- ‘‘ಯಾವುದು ರಾಜಧರ್ಮ? ಯುದ್ಧಕೈದಿಗಳನ್ನು ಕೊಲ್ಲುವುದು ರಾಜಧರ್ಮವೇ? ಮೋಸದಿಂದ ಒಡಹುಟ್ಟಿದವರನ್ನು, ಸಾಧುಸಂತರನ್ನು ಕೊಲ್ಲುವುದು ರಾಜಧರ್ಮವೇ? ನಿನ್ನ ಧರ್ಮದಲ್ಲಿ ಕರುಣೆ ಹಾಗೂ ನ್ಯಾಯಗಳಿಗೆ ಜಾಗವಿಲ್ಲವೇ?’’ ಎಂದಾಗ ಔರಂಗಝೇಬ್- ‘‘ರಾಜನಾದ ಮೇಲೆ ಬದುಕುಳಿಯುವುದೇ ರಾಜಧರ್ಮ. ನಮಗಾಗಿ ಅಲ್ಲವಾದರೂ ರಾಜ್ಯದ ಜನರ ನೆಮ್ಮದಿಗೆ ಯಾರು ಭಂಗ ತರುತ್ತಾರೋ ಅವರನ್ನು ನಿವಾರಿಸಿ ಹಾಕುವುದೇ ರಾಜಧರ್ಮ’’ ಎಂದು ಉತ್ತರಿಸುತ್ತಾನೆ.

ಹೀಗೆ ಕೊನೆಗೊಳ್ಳುವ ಈ ನಾಟಕ ಯುದ್ಧದೊಂದಿಗೆ ಧರ್ಮ ಸಹಿಷ್ಣುತೆ, ವಾರಸುದಾರಿಕೆಗೆ ಹೋರಾಟ ನಡೆಯುವುದನ್ನು ಗಮನಿಸಬಹುದು. ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಪ್ರಸಾದ್ ಕುಂದೂರು ಅವರದು ಬಿ.ಕೆ. ಕಿರಣಕುಮಾರ್ ಅವರ ಸಂಗೀತ ಸೊಗಸಾಗಿತ್ತು. ಜೀವನಕುಮಾರ್ ಹೆಗ್ಗೋಡು ಬೆಳಕು ಅಚ್ಚುಕಟ್ಟಾಗಿತ್ತು.

ಸೈಯ್ಯದ್ ಸರ್ಮದ್ ಪಾತ್ರದಲ್ಲಿ ಸುಗುಣ, ಬಾದಶಹಾ ಶಹಜಹಾನ್‌ನಾಗಿ ಆಕರ್ಷಕುಮಾರ್, ದಾರಾ ಶಿಕೊಹ್ ಪಾತ್ರದಲ್ಲಿ ದೇವಿಪ್ರಸಾದ್, ಔರಂಗಝೇಬ್‌ನಾಗಿ ಪ್ರಶಾಂತ್, ಜಹನಾರ ಬೇಗಂ ಆಗಿ ಯಶಸ್ವಿನಿ, ಮುರಾದ್ ಮತ್ತು ರಾಜಜೈಸಿಂಗ್‌ನಾಗಿ ಸಂಜೀತ್, ಅಭಯ್ ಚಾಂದ್ ಹಾಗೂ ಹಕೀಂನಾಗಿ ಪವನ್, ಖಲೀಲುಲ್ಲಾ ಖಾನ್‌ನಾಗಿ ಕೌಶಿಕ್ ಕುಕ್ರಲ್ಲಿ, ಜೀವನ್ ಮಲ್ಲಿಕ್‌ನಾಗಿ ಕರಣ್, ನಾದಿರಾ ಬೇಗಂಳಾಗಿ ಚಂದನಾ, ಸುಲೇಮಾನ್ ಶಿಕೊಹ್‌ನಾಗಿ ಚಿರಾಗ್, ಬಹಾದೂರ್ ಖಾನ್‌ನಾಗಿ ಸಂತೋಷ್, ಮೀರ್ ಜುಮ್ಲಾನಾಗಿ ಎಂ.ಆರ್.ಆಕರ್ಷ, ಕಿನ್ನರಿ ಐತಬಾರ್ ಖಾನ್‌ಳಾಗಿ ರಾಣಿ ವಿಶ್ವನಾಥ್, ಕಿನ್ನರಿಯಾಗಿ ಹರ್ಷಿತಾ ಹಾಗೂ ಶಿಲ್ಪಾ, ಸಖಿಯಾಗಿ ನಾಗಶ್ರೀ, ಸೈನಿಕರಾಗಿ ಉದಯ್, ಕೌಶಿಕ್, ಸುಹಾಸ್, ಕೆಂಪರಾಜು ಹಾಗೂ ರಾಘವೇಂದ್ರ.

ಗಮನಾರ್ಹ ಎಂದರೆ, ಈ ಮೂರೂ ನಾಟಕಗಳು ಐತಿಹಾಸಿಕವಾದವು. ಈ ಕುರಿತೇ ಹೆಚ್ಚು ನಾಟಕಗಳನ್ನು ರಚಿಸಿರುವ ಜಯರಾಮ್ ರಾಯಪುರ ಅವರು ‘ನಮ್ಮ ಕರ್ನಾಟಕ ಇತಿಹಾಸ ಶ್ರೀಮಂತವಾದುದು. ಇದನ್ನು ದಾಖಲಿಸಲು ಆಳವಾದ ಅಧ್ಯಯನ ಮಾಡಿ, ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಲುವಾಗಿ ಜೊತೆಗೆ ಇತಿಹಾಸದ ಮರುವ್ಯಾಖ್ಯಾನಕ್ಕಾಗಿ ನಾಟಕಗಳನ್ನು ರಚಿಸಿದೆ’ ಎನ್ನುತ್ತಾರೆ.

ಅವರ ಈ ನಾಟಕಗಳು ಐತಿಹಾಸಿಕವಾದರೂ ಸಮಕಾಲೀನವಾಗುವ ಸತ್ವವನ್ನು ಪಡೆದಿವೆ.

Similar News

ಜಗದಗಲ
ಜಗ ದಗಲ