ಕೇಂದ್ರದ ಯೋಜನೆಗಳನ್ನು ತಲುಪಿಸುವಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ: ಬೊಮ್ಮಾಯಿ ಎಚ್ಚರಿಕೆ

Update: 2023-05-29 12:03 GMT

ಬೆಂಗಳೂರು, ಮೇ 29: ‘ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುವಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟವಾಗಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

ಸೋಮವಾರ ಕೇಂದ್ರ ಸರಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವ ಮಾನ್ಯ ನಾಯಕರಾದ ಮೋದಿ ನೇತೃತ್ವದ ಸರಕಾರ 9ವರ್ಷ ಪೂರ್ಣಗೊಳಿಸಿದೆ. ಒಂಭತ್ತು ವರ್ಷದಲ್ಲಿ ಸಾಕಷ್ಟು ಬದಲಾಗಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಉನ್ನತೀಕರಣ ಆಗಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ಅಧಿಕಾರ ತೆಗೆದುಕೊಂಡಾಗ ಆರ್ಥಿಕ ಪರಿಸ್ಥಿತಿ ಸರಿಯಾಗಿರಲಿಲ್ಲ. ಭಾರತದ ವಿಶ್ವಾಸಾರ್ಹತೆ ಕುಸಿತ ಕಂಡಿತ್ತು. ಇಂತಹ ಸಂದರ್ಭದಲ್ಲಿ ಮೋದಿಯವರು ತಾವು ಗುಜರಾತಿನ ಮುಖ್ಯಮಂತ್ರಿಯಾಗಿ ಪಡೆದಿದ್ದ ಅನುಭವ ಹಾಗೂ ಇಡೀ ದೇಶ ಅರಿತಿದ್ದರಿಂದ ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆಗೆ ಒತ್ತು ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯುಪಿಎ ಅವಧಿಯಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿತ್ತು. ರಾಷ್ಟ್ರದ ಸುರಕ್ಷತೆ ಮತ್ತು ಏಕತೆ ಅಖಂಡತೆಯನ್ನು ಕಾಪಾಡುವ ಕೆಲಸ ಮಾಡಿದರು. ಸಂವಿಧಾನದ ಕಲಂ-370ರ ರದ್ದು ಮಾಡುವ ಮೂಲಕ ದೇಶದ ಏಕತೆ ಕಾಪಾಡಿದರು. ಪ್ರಧಾನಿಯಾದ ಮೇಲೆ ಮೋದಿಯವರು ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಎಸ್‍ಟಿ ಜಾರಿಗೆ ತಂದರು. ಇದರಿಂದ ದೇಶ ಹಾಗೂ ರಾಜ್ಯಗಳ ಆರ್ಥಿಕ ಪ್ರಗತಿ ಹೆಚ್ಚಾಯಿತು. ಮೊದಲ ಐದು ರಾಜ್ಯಗಳಿಗೆ ಶೇ.14ರಷ್ಟು ಗ್ಯಾರೆಂಟಿ ಫಂಡ್ ಬರುವಂತೆ ಮಾಡಿದರು ಎಂದರು.

ಪ್ರಧಾನಿ ಮೋದಿ ನೀತಿ ಆಯೋಗ ಜಾರಿಗೆ ತಂದು, ರಾಜ್ಯಗಳಿಗೆ ಶೇ.40ರಷ್ಟು ಫಂಡ್ ಡೆವ್ಯಲೂಸನ್ ಮಾಡಿದರು. ಶಿಕ್ಷಣ ಪದ್ದತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಎನ್‍ಇಪಿ ಜಾರಿಗೆ ತಂದಿದ್ದಾರೆ. ಕರ್ನಾಟಕ ಎನ್‍ಇಪಿ ಜಾರಿಗೆ ತಂದಿರುವ ಮೊದಲ ರಾಜ್ಯವಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.

ಎಪ್ಪತ್ತು ವರ್ಷದಲ್ಲಿ ನಾಲ್ಕೂವರೆ ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿತ್ತು. ಒಂಬತ್ತು ವರ್ಷದಲ್ಲಿ 5ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ವಿಶೇಷ ಅನುದಾನ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ 5 ಸಾವಿರ ಕೋಟಿ ರೂ. ನೀಡಿದೆ. ಮೆಟ್ರೋ ಯೋಜನೆಗೆ 5ಸಾವಿರ ಕೋಟಿ ರೂ.ನೀಡಿದ್ದು, 4 ಮೆಡಿಕಲ್ ಕಾಲೇಜು, ಐಐಟಿ, ಕರಾವಳಿ ಅಭಿವೃದ್ಧಿಗೆ 1250ಕೋಟಿ ರೂ.ನೀಡಿದ್ದಾರೆ. ಕರಾವಳಿಯಲ್ಲಿ ಸಿಆರ್‍ಝಡ್‍ಗೆ ಅನುಮತಿ ನೀಡಿದ್ದಾರೆ. ಕಲಬುರ್ಗಿಯಲ್ಲಿ 1ಲಕ್ಷ ಉದ್ಯೋಗ ನೀಡುವ ಜವಳಿ ಪಾರ್ಕ್‍ಗೆ ಅನುಮತಿ ನೀಡಿದ್ದಾರೆ ಎಂದರು.

‘ಭಾರತ ಆರ್ಥಿಕವಾಗಿ ಸಾಕಷ್ಟು ಸಮರ್ಥವಾಗಿದ್ದು ಐದು ಟ್ರಿಲಿಯನ್ ಆರ್ಥಿಕತೆ ಮಾಡುವ ಗುರಿಗೆ ಕರ್ನಾಟಕವೂ ಕೂಡ ಒಂದು ಟ್ರಿಲಿಯನ್ ಆರ್ಥಿಕ ಶಕ್ತಿ ಮುಟ್ಟಲಿದೆ. ಪ್ರಧಾನಿ ಮೋದಿಯವರು ತಾವೇ ಆರಂಭಿಸುವ ಯೋಜನೆಗಳನ್ನು ತಾವೇ ಉದ್ಘಾಟನೆ ಮಾಡಿದ್ದಾರೆ. ಈಶಾನ್ಯ ರಾಜ್ಯಗಳ ಯೋಜನೆಗಳು, ಕಾಶ್ಮೀರ ಟನೆಲ್‍ಗಳು, ಎಚ್‍ಎಎಲ್ ವಿಮಾನ ನಿರ್ಮಾಣ ಮಾಡುವ ಕೆಲಸ ಮಾಡಿದೆ. ಹೀಗಾಗಿ ಮೋದಿ ಸರಕಾರ ದೇಶವನ್ನು ವಿಶ್ವ ಮಾನ್ಯ ಮಾಡುವ ನಿಟ್ಟಿನಲ್ಲಿ ಅವರ ಆಡಳಿತ ಮುಂದುವರೆಯಬೇಕು ಎಂದು ಹೇಳಿದರು.

Similar News