ದ.ಕ. ಜಿಲ್ಲೆಯಾದ್ಯಂತ ಶಾಲೆಗಳು ಶುಭಾರಂಭ

Update: 2023-05-31 14:47 GMT

ಮಂಗಳೂರು, ಮೇ 31: ಎರಡು ತಿಂಗಳ ಬೇಸಿಗೆ ರಜೆ ಬಳಿಕ ದ.ಕ. ಜಿಲ್ಲೆಯಾದ್ಯಂತ ಶಾಲೆಗಳು ಬುಧವಾರ ಅಧಿಕೃತವಾಗಿ ಆರಂಭಗೊಂಡಿದೆ.

ಸೋಮವಾರವೇ  ಅಧ್ಯಾಪಕರು ಶಾಲೆಗಳಿಗೆ ಆಗಮಿಸಿ, ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ತಯಾರಿ ನಡೆಸಿದ್ದರು.  ಆಯಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ.

ಬೇಸಿಗೆಯ ಉರಿ ಬಿಸಿಲು ಒಂದಡೆಯಾದರೆ ಇನ್ನೊಂದಡೆ ಕುಡಿಯುವ ನೀರಿನ ಸಮಸ್ಯೆ ಇದ್ದರೂ, ಮಕ್ಕಳಿಗೆ ತೊಂದರೆಯಾಗದಂತೆ ಗ್ರಾಮ ಪಂಚಾಯತ್‌ಗಳು ಟ್ಯಾಂಕರ್ ಮೂಲಕ  ಶಾಲೆಗಳಿಗೆ ನೀರು ಪೂರೈಕೆ ಮಾಡು ವಂತೆ ಜಿಲ್ಲಾಡಳಿತ ಸೂಚಿಸಿದ್ದು, ಆ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ಗಳು ಗಮನ ಹರಿಸಿದೆ.

ದಕ್ಷಿಣ ಕನ್ನಡದಲ್ಲಿ 603 ಹೈಸ್ಕೂಲ್ 1188 ಪ್ರಾಥಮಿಕ  ಶಾಲೆಗಳು ಆರಂಭಗೊಂಡಿದ್ದು,  ಸರಕಾರಿ ಹಾಗೂ ಖಾಸಗಿ ಸೇರಿಂದಂತೆ ಜಿಲ್ಲೆಯಲ್ಲಿರುವ 1,791ಶಾಲೆಗಳಲ್ಲಿ ಸುಮಾರು 3 ಲಕ್ಷ ವಿದಾರ್ಥಿಗಳು ಹಾಜರಾಗಿದ್ದಾರೆ.

ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಹಬ್ಬದ ವಾತಾವರಣವಿದೆ. ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಪಠ್ಯ ಪುಸ್ತಕಗಳು ಮತ್ತು ಶಾಲಾ ಸಮವಸ್ತ್ರಗಳ ಜೊತೆಗೆ ಮಧ್ಯಾಹ್ನದ ಬಿಸಿಯೂಟವನ್ನು ಸಹ ಒದಗಿಸುವ ನಿಟ್ಟಿನಲ್ಲಿ ಮೊದಲೇ ತಯಾರಿ ನಡಸಲಾಗಿತ್ತು.

ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಸಡಗರದ ಪ್ರಾರಂಭೋತ್ಸವ

ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆ ( ಕನ್ನಡ ಮಾಧ್ಯಮ ) ಯ ಶಾಲಾ ಪ್ರಾರಂಭೋತ್ಸವವು ಬುಧವಾರ ವಿಶಿಷ್ಟ ರೀತಿಯಲ್ಲಿ ಜರಗಿತು.

ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಹಾಗೂ ಉಚಿತ ವಾಹನ ಸೌಲಭ್ಯವನ್ನು ನೀಡಲಾಗುತ್ತದೆ.  ಶಿಕ್ಷಣ ಇಲಾಖೆಯ ಹೊಸ ಮಾರ್ಗಸೂಚಿಯಂತೆ  ಈ ಶೈಕ್ಷಣಿಕ ವರ್ಷವನ್ನು ನಿರಂತರ ಚಟುವಟಿಕೆ ಸಹಿತಾ ಗುಣತ್ಮಾಕ ಶೈಕ್ಷಣಿಕ ವರ್ಷವನ್ನಾಗಿ ಮಾಡುವುದು ಜೊತೆಗೆ ವಿದ್ಯಾರ್ಥಿಗಳ ಏಳಿಗಾಗಿ ನಿರಂತರ ಶ್ರಮಿಸುವುದಾಗಿ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಬರೆಯುವ ಹಾಗೂ ಓದುವ ಪುಸ್ತಕಗಳನ್ನು ವಿತರಿಸಲಾ ಯಿತು. ಜೊತೆಗೆ ಕಳೆದ ಸಾಲಿನ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ನೆನಪಿಸಿ ಅಭಿನಂದನೆ ಸಲ್ಲಿಸಲಾಯಿತು.  ವಿಶ್ವಪರಿಸರ ದಿನ, ಬಾಲಕಾರ್ಮಿಕರ ವಿರೋಧಿ ದಿನ, ವಿಶ್ವ ಪ್ರಕೃತಿ ಸಂರಕ್ಷಣಾ ದಿನ, ಸ್ವಾತಂತ್ರ್ಯ ದಿನ, ರಾಷ್ಟ್ರೀಯ ಕ್ರೀಡಾ ದಿನ ಮುಂತಾದ ವಿಶಿಷ್ಠ ದಿನಗಳನ್ನು ಕಡ್ಡಾಯವಾಗಿ ಆಚರಣೆ ಮಾಡುವಂತೆ ಸರಕಾರ ಸೂಚನೆ ನೀಡಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಶಾಲೆಯ ಸಂಚಾಲಕ ಶ್ಯಾಮ್ ಸುಂದರ್ ಕಾಮತ್, ಶೈಕ್ಷಣಿಕ ಮಾರ್ಗದರ್ಶಕರಾದ ಲಲಿತಾ.ಜಿ. ಮಲ್ಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಸದಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಗೀತಾ ಶಿಕ್ಷಕಿ ರಾಜೇಶ್ವರಿ ಕುಲಾಲ್ ಪ್ರಾರ್ಥನೆಗೈದರು. ಕನ್ನಡ ಅಧ್ಯಪಕ ಪ್ರಶಾಂತ್ ಕುಮಾರ್ ರೈ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ನೋರ್ಬಟ್ ಎಫ್ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.  ಅಶೋಕ್ ಎಸ್. ಲಮಣಿ. ವಂದಿಸಿದರು.

ವಿದ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.  ಶಾಲೆಯ ಮುಖ್ಯ ಶಿಕ್ಷಕಿ ತ್ರಿವೆಣಿ ಸ್ವಾಗತಿಸಿ ಪ್ರಸ್ತಾವನೆಗೈದರು.

Similar News