ಬಾಬಾ ರಾಮ್‌ದೇವ್ ಮಾಲಕತ್ವದ ‘ರುಚಿಗೋಲ್ಡ್’ ಕಂಪೆನಿಯಿಂದ ಪರಿಸರ ಮಾಲಿನ್ಯ: ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆರೋಪ

► ‘ರುಚಿಗೋಲ್ಡ್’ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ

Update: 2023-06-02 11:45 GMT

ಮಂಗಳೂರು, ಜೂ.2: ನಗರ ಹೊರವಲಯದ ಜೋಕಟ್ಟೆ ಸಮೀಪವಿರುವ ಬಾಬಾ ರಾಮ್‌ದೇವ್ ಮಾಲಕತ್ವದ ‘ರುಚಿಗೋಲ್ಡ್’ ಕಂಪೆನಿಯಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಈ ಕಂಪೆನಿಯು ಪಲ್ಗುಣಿ ನದಿಗೆ ನಿರಂತರವಾಗಿ ಕೈಗಾರಿಕಾ ತ್ಯಾಜ್ಯದ ವಿಷವನ್ನು ಹರಿಸುತ್ತಿದೆ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಹಾಗಾಗಿ ತಕ್ಷಣ ‘ರುಚಿಗೋಲ್ಡ್’ಗೆ ಬೀಗ ಜಡಿಯಿರಿ. ಭ್ರಷ್ಟ ಪರಿಸರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಲ್ಗುಣಿ ನದಿ ಸಹಿತ ತುಳುನಾಡ ಪರಿಸರವನ್ನು ಉಳಿಸಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ನಾಗರಿಕ ಹೋರಾಟ ಸಮಿತಿಯ ಸತತ ದೂರು, ಪ್ರತಿಭಟನೆಗಳಿಂದಾಗಿ ಪಲ್ಗುಣಿ ನದಿ ಹಾಗೂ ತೋಕೂರು ಹಳ್ಳಕ್ಕೆ ಎಂಆರ್‌ಪಿಎಲ್, ಎಸ್‌ಇಝೆಡ್, ಅದಾನಿ ವಿಲ್ಮರ್, ರುಚಿಗೋಲ್ಡ್ ಮತ್ತಿತರ ಹಲವು ಉದ್ಯಮಗಳು ಕೈಗಾರಿಕಾ ತ್ಯಾಜ್ಯವನ್ನು ನದಿಗೆ ಬಿಡುವ ವಿಷಯ ಹಸಿರು ಪೀಠದ ಮುಂದೆ ಬರುವಂತಾಯಿತು. ಅಲ್ಲದೆ ಜಿಲ್ಲಾಡಳಿತ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಉದ್ಯಮಗಳ ಮೇಲೆ ಕಟುವಾದ ಕ್ರಮಕ್ಕಾಗಿ ನೋಟೀಸುಗಳು ಬಂದಿವೆ.

ಆದರೂ ಈ ಕೈಗಾರಿಕೆಗಳ ಮೇಲೆ ಕಠಿಣ ಕ್ರಮಗಳು ಜರುಗಿಲ್ಲ. ಬಾಬಾ ರಾಮದೇವ್ ಮಾಲಕತ್ವದ ರುಚಿಗೋಲ್ಡ್ ಕಂಪೆನಿಯಂತೂ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದು, ತೋಕೂರು ಹಳ್ಳದ ಮೂಲಕ ನೇರವಾಗಿ ಪಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಬಹಿರಂಗವಾಗಿ ಹರಿಸುತ್ತಿದೆ ಎಂದು ಆಪಾದಿಸಿದ್ದಾರೆ.

ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯವನ್ನು ದೊಡ್ಡ ಪ್ರಮಾಣದಲ್ಲಿ ತೋಕೂರು ಹಳ್ಳಕ್ಕೆ ಹರಿಸುತ್ತಿರುವುದನ್ನು ಗುರುತಿಸಿದ್ದಾರೆ. ಈ ಮಧ್ಯೆ ಶುಕ್ರವಾರ ತೋಕೋರು ಹಳ್ಳದಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯವನ್ನು ಸಂಗ್ರಹಿಸಿ ಬೇರೆಡೆಗೆ ಸಾಗಿಸಲಾಗುತ್ತಿದೆ. ಆ ಮೂಲಕ ಹಸಿರು ಪೀಠ, ಪರಿಸರ ನಿಯಮ ಹಾಗೂ ಜನತೆಯ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತುಳುನಾಡಿನ ಭವಿಷ್ಯವನ್ನೇ ಮುಳುಗಿಸುತ್ತಿರುವ ಗಂಭೀರವಾದ ಕೈಗಾರಿಕಾ ಮಾಲಿನ್ಯದ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಪಾದಿಸಿದ್ದಾರೆ.

ಆದಾಗ್ಯೂ ರುಚಿ ಗೋಲ್ಡ್ (ತಾಳೆ ಎಣ್ಣೆ ಘಟಕ)ಗೆ ಬೀಗ ಜಡಿಯಲೇ ಬೇಕು. ತುಳುನಾಡಿನ ಯುವಜನರಿಗೆ ಉದ್ಯೋಗವನ್ನೂ ನಿರಾಕರಿಸಿ, ನೆಲ ಜಲವನ್ನೂ ನಾಶ ಪಡಿಸುವ ಇಂತಹ ಉದ್ಯಮಗಳಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಈಗಾಗಲೇ ನಾವು ಸ್ಥಳ ತನಿಖೆ ನಡೆಸಿದ್ದೇವೆ. ಸೂಕ್ತ ದಾಖಲೆಗಳನ್ನೂ ಸಂಗ್ರಹಿಸಿದ್ದೇವೆ. ನೋಟಿಸ್ ಜಾರಿಯ ಪ್ರಕ್ರಿಯೆ ನಡೆಯುತ್ತಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಲಯ ಅಧಿಕಾರಿ ವಿಜಯಾ ಹೆಗಡೆ ಪ್ರತಿಕ್ರಿಯಿಸಿದ್ದಾರೆ.

Similar News