ಇನ್ನು ಮುಂದೆ ಬಿಜೆಪಿ ನಾಯಕರಿಗೂ ಕರೆಂಟ್ ಫ್ರೀ..: ಸಚಿವ ದಿನೇಶ್ ಗುಂಡೂರಾವ್ ಲೇವಡಿ

Update: 2023-06-02 16:40 GMT

ಬೆಂಗಳೂರು, ಜೂ. 2: ‘ಚುನಾವಣೆಗೂ ಮೊದಲು ನಾವು ನೀಡಿದ್ದ ಐದು ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ನಮ್ಮ ಮಾತು ಉಳಿಸಿಕೊಂಡಿದ್ದೇವೆ. ಹಿಂದಿನ ಡಬಲ್ ಇಂಜಿನ್ ಸರಕಾರದ ನೀತಿಗಳಿಂದ ಬದುಕು ಹೈರಾಣಾಗಿದ್ದ ಜನರಿಗೆ ಈ 5 ಗ್ಯಾರಂಟಿಗಳು ಜೀವಾಮೃತವಿದ್ದಂತೆ. ಈ ಗ್ಯಾರಂಟಿಗಳು ನಾಡಿನ ಜನತೆಗೆ ಚೈತನ್ಯ ತುಂಬಲಿವೆ. ಮಾತು ಉಳಿಸಿಕೊಂಡ ತೃಪ್ತಿ ನಮ್ಮದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಐದು ಗ್ಯಾರಂಟಿಗಳ ಅನುಷ್ಠಾನ ಅಸಾಧ್ಯ ಎಂಬ ಅಭಿಪ್ರಾಯವಿತ್ತು. ಆದರೆ ಎಲ್ಲೂ ಆರ್ಥಿಕ ಶಿಸ್ತಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿ ಈ ಗ್ಯಾರಂಟಿಗಳ ಅನುಷ್ಠಾನಕ್ಕೆ ಅನುಮೋದನೆ ನೀಡಿರುವುದು ನಮ್ಮ ಸರ್ಕಾರದ ಹೆಚ್ಚುಗಾಕೆ. ಜನರ ತೆರಿಗೆ ಹಣ ಜನರ ಅಭಿವೃದ್ಧಿಗೆ ವ್ಯಯಿಸಬೇಕು ಎನ್ನುವ ಬದ್ಧತೆಯೊಂದಿಗೆ ಈ ಗ್ಯಾರಂಟಿಗಳು ಜನರಿಗೆ ತಲುಪಲಿವೆ’ ಎಂದು ಘೋಷಿಸಿದ್ದಾರೆ.

‘ಬಿಜೆಪಿಯವರು ನಮ್ಮ 5 ಗ್ಯಾರಂಟಿಗಳ ಬಗ್ಗೆ ಬೀದಿ ಬೀದಿಯಲ್ಲಿ ಅಪಪ್ರಚಾರ ನಡೆಸಿದ್ದರು. ಜನರಿಗೆ ಪ್ರಚೋದನೆ ನೀಡಿದ್ದರು. ಮತದಾರರಿಗಿಂತಲೂ ಬಿಜೆಪಿಯವರೇ ಗ್ಯಾರಂಟಿಗಾಗಿ ದುಂಬಾಲು ಬಿದ್ದಿದರು. ಈಗ ಈ 5 ಗ್ಯಾರಂಟಿಗಳು ಬಿಜೆಪಿಯವರಿಗೂ ಸಿಗಲಿವೆ. ಇನ್ನು ಮುಂದೆ ಬಿಜೆಪಿ ನಾಯಕರಿಗೂ ಕರೆಂಟ್ ಫ್ರೀ, ಅವರ ಮನೆಯೊಡತಿಗೆ 2 ಸಾವಿರ ರೂ., ಉಚಿತ ಬಸ್ ಪ್ರಯಾಣ ಸಿಗಲಿದೆ’ ಎಂದು ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

Similar News