ಬಜ್ಪೆ: ಕಾಂಟ್ರಾಕ್ಟರ್, ಬಿಜೆಪಿ ಕಾರ್ಯಕರ್ತನಿಂದ ಗ್ರಾ.ಪಂ.ಸದಸ್ಯಗೆ ಗಂಭೀರ ಹಲ್ಲೆ; ಪ್ರಕರಣ ದಾಖಲು

Update: 2023-06-03 17:00 GMT

ಬಜ್ಪೆ, ಜೂ. 3: ಇಲ್ಲಿನ ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಕಾಂಟ್ರಾಕ್ಟರ್ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತನೋರ್ವ ಕಬ್ಬಣದ ರಾಡ್ ನಿಂದ ಗಂಭೀರ ಹಲ್ಲೆ ನಡೆಸಿರುವ ಘಟನೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರ್ ಬಾಗ್ ಎಂಬಲ್ಲಿ ನಡೆದಿದೆ.

ಹಲ್ಲೆಗೆ ಒಳಗಾದವರನ್ನು ಪಡುಪೆರಾರ ಗ್ರಾಮ ಪಂಚಾಯತ್ ನ ಕೊರಕಂಬ್ಳ ವಾರ್ಡ್ ಸದಸ್ಯ ನೂರ್ ಅಹ್ಮದ್ ಎಂದು ತಿಳಿದುಬಂದಿದ್ದು, ಅದೇ ಪರಿಸರದ ಬಿಜೆಪಿ ಕಾರ್ಯಕರ್ತರ ಎನ್ನಲಾದ ರಾಜೇಶ್ ಮತ್ತು ಕಾಂಟ್ರಾಕ್ಟರ್ ರಾಘವೇಂದ್ರ ಆಚಾರ್ ಎಂಬವರು ಹಲ್ಲೆ ನಡೆಸಿದ ಆರೋಪಿಗಳು ಎಂದು ತಿಳಿದುಬಂದಿದೆ.

ಪಡುಪೆರಾರ ಗ್ರಾಮ ಪಂಚಾಯತ್ ನ ಕೊರಕಂಬ್ಳ ವಾರ್ಡ್ ನಲ್ಲಿ ಪರವಾನಿಗೆ ಇಲ್ಲದೆ ಮನೆ ನಿರ್ಮಿಸಿರುವ ಕುರಿತು ಇಂದು ಗ್ರಾಮ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಪಡುಪೆರಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಅವರೊಂದಿಗೆ ಹಲ್ಲೆಗೊಳಗಾದ ಗ್ರಾಮ ಪಂಚಾಯತ್ ಸದಸ್ಯ ನೂರ್ ಅಹ್ಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರವಾನಿಗೆ ಪಡೆದುಕೊಳ್ಳುವಂತೆ ಮನೆಯವರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಈ ವೇಳೆ ಏಕಾಏಕಿ ದಾಳಿ ಮಾಡಿದ ಮನೆಯ ಗುತ್ತಿಗೆ ವಹಿಸಿರುವ ರಾಘವೇಂದ್ರ ಆಚಾರ್ ಮತ್ತು ಸ್ಥಳೀಯ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತನೆನ್ನಲಾದ ರಾಜೇಶ್ ಸಾಲಿಯಾನ್ ಕಬ್ಬಿಣದ ರಾಡಿನಿಂದ ನೂರ್ ಅಹ್ಮದ್ ಅವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ನೂರು ಅಹ್ಮದ್ ತಲೆಗೆ ಗಂಭೀರ ಗಾಯವಾಗಿದ್ದು, ಕೈ, ಕಾಲು ಮತ್ತು  ಕಣ್ಣಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪಡುಬಿನರಾ ಗ್ರಾಮ ಪಂಚಾಯತ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ರಾಜೇಶ್ ಸಾಲಿಯಾನ್ ವಿರುದ್ಧ ನೂರ್ ಅಹ್ಮದ್ ಗೆಲುವು ಸಾಧಿಸಿದ್ದರು. ಈ ವೈಷಮ್ಯದಿಂದಾಗಿ ಗ್ರಾಮ ಪಂಚಾಯತ್ ನಿಂದ ಪರವಾನಿಗೆ ಪಡೆಯದಿರುವ ಮನೆಗೆ ಯಾವುದೇ ರೀತಿಯ ಸಂಬಂಧ ಇಲ್ಲದಿರುವ ರಾಜೇಶ್ ಸಾಲಿಯಾನ್ ನನಗೆ ಹಲ್ಲೆ ನಡೆಸಿದ್ದಾನೆ ಎಂದು ನೂರು ಅಹ್ಮದ್ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಿಂದ ಗಂಭೀರ ಹಲ್ಲೆಗೊಳಗಾಗಿರುವ ನೂರ್ ಅಹ್ಮದ್ ಅವರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ನೂರ್ ಅಹ್ಮದ್, ಕಾಂಟ್ರಾಕ್ಟರ್ ರಾಘವೇಂದ್ರ ಆಚಾರ್ಯ ಮತ್ತು ರಾಜೇಶ್ ಸಾಲ್ಯಾನ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಜ್ಪೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ

Similar News