ರಾಜ ಪರಂಪರೆಯಲ್ಲಿ ಹುಟ್ಟಿದ್ದರೂ ಜನ ಸಾಮಾನ್ಯರ ಬದುಕಿಗೆ ಜೀವನದಿಯಾದರು..

ಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ

Update: 2023-06-04 07:32 GMT

ಸಮಾಜಮುಖಿ ಸುಧಾರಣೆಗಳನ್ನು ಜಾರಿಗೆ ತಂದು ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ರೂಪಿಸಿದ ನಾಲ್ವಡಿಯವರನ್ನು ವಿದೇಶೀಯ ವಿದ್ವಾಂಸರು, ಶಿಕ್ಷಣ ತಜ್ಞರು ಹಾಗೂ ಇತಿಹಾಸಕಾರರು 'ಸಾಮಾಜಿಕ ಕಾನೂನುಗಳ ಹರಿಕಾರ' ಎಂದು ಕರೆದಿರುವುದು ಅವರ ಜನಪರ ಬದುಕಿಗೆ ಸಂದ ಗೌರವವಾಗಿದೆ.


ಯಾವುದೇ ಸಮಾಜದಲ್ಲಿ ಹುಟ್ಟಿದ ಮನುಷ್ಯರು ಆ ಸಮಾಜ, ಸಂಸ್ಕೃತಿಯಿಂದ ರೂಪುಗೊಂಡ ಮನಸ್ಥಿತಿಯವರೇ ಆಗಿರುತ್ತಾರೆ. ಹೀಗೆ ತರಬೇತಿ ಗೊಂಡವರಲ್ಲಿ ಕೆಲವರು ಸಮಾಜ-ಸಂಸ್ಕೃತಿಯ ಆಜ್ಞಾಪಾಲಕರಾಗಿರುತ್ತಾರೆ. ಮತ್ತೆ ಕೆಲವರು ತಾವು ಪಡೆದ ಶಿಕ್ಷಣದಿಂದಲೋ, ವಿವೇಕದಿಂದಲೋ, ಮನುಷ್ಯತ್ವದಿಂದಲೋ ಸಮಾಜದಲ್ಲಿನ ಒಳಿತು- ಕೆಡುಕುಗಳನ್ನು ಪ್ರಜ್ಞಾಪೂರ್ವಕವಾಗಿ ಅರ್ಥೈಸಿಕೊಂಡು ಜೀವಪರವಾಗಿ ಬದುಕುತ್ತಲೇ ಮಾನವೀಯ ಸಮಾಜವನ್ನು ಕಟ್ಟ ಬಯಸುತ್ತಾರೆ. ಜಾತಿ, ಮತಾಂಧತೆ, ಕೋಮುವಾದ, ಧರ್ಮಾಂಧತೆಯನ್ನು ಮೀರಲು ಇಚ್ಛಿಸುತ್ತಾರೆ. ಜಾತಿಗಿಂತ ಮನುಷ್ಯತ್ವ ಶ್ರೇಷ್ಠವೆಂದು ಪ್ರತಿಪಾದಿಸುತ್ತಾರೆ. ಎಲ್ಲಾ ಜಾತಿಯಲ್ಲಿರುವ ಅವಮಾನಿತರು, ಬಡವರು, ಹಸಿದವರು, ನಿರ್ಗತಿಕರು, ಮಹಿಳೆಯರ ಸಬಲೀಕರಣಕ್ಕಾಗಿ ಚಿಂತಿಸುತ್ತಾರೆ. ಈ ಹಾದಿಯಲ್ಲಿ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಚಿರಸ್ಥಾಯಿ.

ಜಾತಿ ಶ್ರೇಣೀಕೃತ ಭಾರತದಲ್ಲಿ ಶಿಕ್ಷಣದಿಂದ ಮಾತ್ರ ಎಲ್ಲಾ ಬದಲಾವಣೆಗಳನ್ನು ಜಾರಿಗೆ ತರಲು ಸಾಧ್ಯ ಎಂಬುದನ್ನು ನಾಲ್ವಡಿಯವರು ಅರಿತುಕೊಂಡಿದ್ದರು. ಅದಕ್ಕಾಗಿ ದೇಶದಲ್ಲೇ ಪ್ರಥಮವಾಗಿ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಮೊದಲ ಘಟಿಕೋತ್ಸವದಲ್ಲಿ ಮಾತನಾಡುತ್ತಾ; ''ಶಿಕ್ಷಣವು ಕೆಲವೇ ಅದೃಷ್ಟಶಾಲಿಗಳಿಗೆ ಮಾತ್ರವಲ್ಲ, ಈ ವಿಶ್ವವಿದ್ಯಾನಿಲಯ ಇರುವುದು ಈ ದೇಶದ ಅಕ್ಷರ ವಂಚಿತ ಸಮುದಾಯಗಳಿಗೆ'' ಎಂದ ಮಾತು ಆ ಕಾಲಕ್ಕೆ ಮಾದರಿ ದೊರೆಯೊಬ್ಬ ನುಡಿಯಲೇಬೇಕಾದ ನುಡಿಯಾಗಿತ್ತು. ಅದಕ್ಕಾಗಿ ಮೈಸೂರಿನಲ್ಲಿ ಪಂಚಮ ಬೋರ್ಡಿಂಗ್ ಹೋಂ ಸಂಸ್ಥೆ, ಬುಡಕಟ್ಟು, ಅರಣ್ಯವಾಸಿಗಳಿಗೆ ಶಾಲೆ, ಅಸ್ಪಶ್ಯರಿಗಾಗಿ ಹುಸ್ಕೂರು ಹಾಗೂ ನರಸೀಪುರದಲ್ಲಿನ ಶಾಲೆ, 1902 ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯ ಶಾಲೆ, 1903 ಮೈಸೂರಿನಲ್ಲಿ ತಾಂತ್ರಿಕ ಶಾಲೆ, 1911 ಎಸೆಸೆಲ್ಸಿ ಪರೀಕ್ಷೆಗಳ ಪ್ರಾರಂಭ, 1913 ಕಡ್ಡಾಯ ಶಿಕ್ಷಣ ಕಾಯ್ದೆ, ಇದರ ಪ್ರಕಾರ 7ರಿಂದ 12 ವರ್ಷ ವಯಸ್ಸಿನ ಮಕ್ಕಳನ್ನು ಕೂಲಿ ಕೆಲಸಕ್ಕೆ ನೇಮಕ ಮಾಡುವುದನ್ನು ನಿಷೇಧಿಸಿ, ಮಕ್ಕಳನ್ನೂ ಕಡ್ಡಾಯವಾಗಿ ಶಾಲೆಗೆ ಸೇರಿಸುವ ಕಾನೂನು, ದೇಶದ ಪ್ರಥಮ ಮೆಡಿಕಲ್ ಸ್ಕೂಲ್, ಇದೇ 1924ರಲ್ಲಿ ಮೆಡಿಕಲ್ ಕಾಲೇಜ್ ಆಗಿ ಪರಿವರ್ತನೆಗೊಂಡಿತು. 1918 ಶಾಲಾ ಪ್ರವೇಶದಲ್ಲಿ ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡಿ ಪಂಚಮರ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ತೆರೆದು, ಶುಲ್ಕರಹಿತ ಪ್ರವೇಶ ನೀಡಿದರು. ಮೊದಲ ಬಾರಿಗೆ ವಯಸ್ಕರ ಶಿಕ್ಷಣ ಆಂದೋಲನ, ಅದಕ್ಕಾಗಿ 7,000 ಸಾಕ್ಷರತಾ ಕೇಂದ್ರಗಳನ್ನು ತೆರದರು. ಹೀಗೆ ಇವರ ಆಡಳಿತಾವಧಿಯಲ್ಲಿ ಸುಮಾರು 800 ಶಾಲೆಗಳು ಸ್ಥಾಪನೆಗೊಂಡವು. ಕುರುಡು, ಮೂಗ ಮಕ್ಕಳಿಗೆ ಶಾಲೆಗಳನ್ನು ತೆರೆಯುವ ಮೂಲಕ ಕಣ್ಣಿಲ್ಲದವರಿಗೆ ದಿಕ್ಕಾಗಿ, ಬಾಯಿಲ್ಲದವರಿಗೆ ಧ್ವನಿಯಾದರು.

ಸರಕಾರಿ ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾನೂನಿನ ಮೂಲಕವೇ ಜಾರಿಗೊಳಿಸಿದರು. 1902ರಲ್ಲಿ ಸೇವಾ ಇಲಾಖೆಗಳ ಉದ್ಯೋಗದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಸಮುದಾಯಗಳಿಗೆ ಪ್ರಾತಿನಿದ್ಯತೆ ಇಲ್ಲದನ್ನು ಕಂಡು ಶಿರಸ್ತೆದಾರ್ ಮತ್ತು ಅಮಲ್ದಾರರ ಹುದ್ದೆಗಳ ನೇಮಕಾತಿಯಲ್ಲಿ ಬ್ರಾಹ್ಮಣೇತರರ ನೇಮಕಾತಿಗೆ ಕಡಿಮೆ ಅರ್ಹತೆಗಳನ್ನು ನಿಗದಿಮಾಡಿದರು. ಅದಕ್ಕಾಗಿ ಮಿಲ್ಲರ್ ಕಮಿಷನ್ ನೇಮಿಸಿ, ಎಲ್ಲಾ ಸಮುದಾಯಗಳಿಗೂ ಸರಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರಕುವಂತೆ ಮಾಡಿದರು. ಈ ಸಂದರ್ಭದಲ್ಲಿ ದಿವಾನರಾದ ವಿಶ್ವೇಶ್ವರಯ್ಯ ಅವರು ಜಾತಿ ಆಧಾರದ ಮೇಲೆ ಮೀಸಲಾತಿ ನೀಡಿದರೆ ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ ಎಂದು ವಾದಿಸಿದರು. ಈ ಕಾರಣಕ್ಕಾಗಿ ತಮ್ಮ ದಿವಾನ ಹುದ್ದೆಗೆ ರಾಜೀನಾಮೆ ನೀಡಿದರು. ನಾಲ್ವಡಿಯವರು ಧೃತಿಗೆಡದೆ 1917ರಲ್ಲಿ ಪ್ರಜಾಮಿತ್ರ ಮಂಡಲಿಯನ್ನು ಸ್ಥಾಪಿಸಿ ದಮನಿತ ಸಮುದಾಯಗಳಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಒದಗಿಸಿದರು. 1921ರಲ್ಲಿ ಪ್ರಥಮ ಬಾರಿಗೆ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶೇ.75ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ನಾಲ್ವಡಿಯವರು ಹಿಂದುಳಿದ, ಅಸ್ಪಶ್ಯ ಸಮುದಾಯಗಳಲ್ಲೇ ದಕ್ಷತೆಯನ್ನು ಬೆಳೆಸಿ, ಸಮರ್ಥವಾಗಿ ಆಡಳಿತವನ್ನು ರೂಪಿಸಬಹುದು ಎಂಬುದನ್ನು ಕ್ರಿಯೆಯ ಮೂಲಕ ತೋರಿಸಿಕೊಟ್ಟರು. ಭಾರತದ ಸಂಪ್ರದಾಯವಾದಿಗಳು ವಿಧಿಸಿದ ಧಾರ್ಮಿಕ ಮೌಢ್ಯಗಳಿಗೆ ಬಲಿಯಾಗುತ್ತಿದ್ದ ಮಹಿಳೆಯರನ್ನು ವಿಮೋಚನೆಗೊಳಿಸುವ ಸಲುವಾಗಿ; ದೇವದಾಸಿ, ಬಸವಿ, ಗೆಜ್ಜೆಪೂಜೆ, ವೇಶ್ಯಾವೃತ್ತಿ ರದ್ದತಿ ಕಾನೂನುಗಳನ್ನು ಜಾರಿಗೆ ತಂದರು.

ಮಹಿಳೆಯರು ಸಹ ಗೌರವಯುತವಾದ ಬದುಕು ಕಟ್ಟಿಕೊಳ್ಳಬೇಕು ಎಂಬುದಕ್ಕಾಗಿ; ವಿಧವಾ ವಿವಾಹ, ಮಹಿಳೆಯರಿಗೆ ಕಡ್ಡಾಯ ಶಿಕ್ಷಣ, ಮಹಿಳಾ ಶಿಕ್ಷಣ ಶಾಲೆಗಳು, ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ, ಮಹಿಳೆಯರಿಗೆ ಮತದಾನದ ಹಕ್ಕನ್ನು ಕಲ್ಪಿಸುವ ಮುಖೇನ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದರು. ಅಸ್ಪಶ್ಯ, ಹಿಂದುಳಿದ ಜಾತಿಗಳು ಆರ್ಥಿಕವಾಗಿ ಸುಧಾರಣೆಗೊಂಡಾಗ ಮಾತ್ರ ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು; 1905ರಲ್ಲಿ ಸಹಕಾರಿ ಸೊಸೈಟಿಗಳ ಕಾಯ್ದೆ ಜಾರಿಗೊಳಿಸಿ ಸಾಲಸೌಲಭ್ಯಗಳನ್ನು ನೀಡಿದರು. ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಭೂ ಅಭಿವೃದ್ಧಿ ಬ್ಯಾಂಕ್ ಹೀಗೆ ಅನೇಕ ಸಹಕಾರಿ ಬ್ಯಾಂಕುಗಳು ಬಡವರ ಏಳ್ಗೆಗಾಗಿ ಪ್ರಾರಂಭಗೊಂಡವು. ಈ ರೈತರನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿ ಭೂಮಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದನ್ನು ಕಂಡು 1928ರಲ್ಲಿ ಕೃಷಿ ಸಾಲ ಮನ್ನಾ ಕಾಯ್ದೆ ಜಾರಿಗೆ ತಂದರು. ಈ ಕಾನೂನಿನಿಂದ ನಿರ್ಗತಿಕರ ಭೂಮಿಯ ಒಡೆತನ ಉಳಿಯುವಂತೆ ಮಾಡಿದರು. ಬಡರೈತರ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಕನ್ನಂಬಾಡಿ ಕಟ್ಟೆ, ಮಾರೀಕಣಿವೆ ಅಣೆಕಟ್ಟು, ಅಂಜನಾಪುರ ಜಲಾಶಯ, ಭೀಮನಹಳ್ಳಿ ಜಲಾಶಯ, ಮಾರ್ಕೋನಹಳ್ಳಿ ಜಲಾಶಯ, ಗೋಪಾಲಪುರದ ಜಲಾಶಯ, ನೆಲ್ಲೀಗೆರೆ ಜಲಾಶಯ ಮುಂತಾದವುಗಳಿಗೆ ಅಣೆಕಟ್ಟನ್ನು ಕಟ್ಟಿಸಿದರು. ಕನ್ನಂಬಾಡಿ ಅಣೆಕಟ್ಟೆಯ ನಿರ್ಮಾಣ ವೆಚ್ಚ ಅಂದಾಜು 2 ಕೋಟಿ 73ಲಕ್ಷ ರೂ.ಗಳಷ್ಟು. ಹಣದ ಕೊರತೆ ಎದುರಾದಾಗ ತಮ್ಮ ತಾಯಿಯವರ ಸಲಹೆಯಂತೆ ತಮ್ಮ ಖಾಸಗಿ ಭಂಡಾರದಿಂದ 4 ಮೂಟೆ ರತ್ನಾಭರಣಗಳನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಿದ ಉದಾಹರಣೆ ಇದೆ. ಹೀಗೆ ರಾಜ ಪರಂಪರೆಯಲ್ಲಿ ಹುಟ್ಟಿದ ನಾಲ್ವಡಿಯವರು ಜನರ ಬದುಕಿಗೆ ಜೀವನದಿಯಾದ ಸಾಕಷ್ಟು ಕಥನಗಳಿವೆ.

ಕೈಗಾರಿಕಾ ಅಭಿವೃದ್ಧಿಯಲ್ಲಿ ನಾಡಿನ ಪ್ರಗತಿ ಕಾಣಲು ಸಾಧ್ಯ ಎಂದು ಭದ್ರಾವತಿಯಲ್ಲಿ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ, ಮೈಸೂರಿನಲ್ಲಿ ಸಿಮೆಂಟ್ ಕಾರ್ಖಾನೆ, 1934ರಲ್ಲಿ ಮಂಡ್ಯದಲ್ಲಿ ಸಕ್ಕರೆ ಕಂಪೆನಿ, 1936ರಲ್ಲಿ ಮೈಸೂರು ಪೇಪರ್ ಮಿಲ್ಸ್, ಮಂಗಳೂರಿನ ಹೆಂಚು ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರ ಹೀಗೆ ಹಲವಾರು ಕಾರ್ಖಾನೆಗಳ ಹುಟ್ಟಿಗೆ ಕಾರಣರಾದರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸುವ ಮೂಲಕ ನಾಡು-ನುಡಿಗೆ ಉಸಿರಾದರು. ಸಮಾಜಮುಖಿ ಸುಧಾರಣೆಗಳನ್ನು ಜಾರಿಗೆ ತಂದು ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ರೂಪಿಸಿದ ನಾಲ್ವಡಿಯವರನ್ನು ವಿದೇಶಿಯ ವಿದ್ವಾಂಸರು, ಶಿಕ್ಷಣ ತಜ್ಞರು ಹಾಗೂ ಇತಿಹಾಸಕಾರರು 'ಸಾಮಾಜಿಕ ಕಾನೂನುಗಳ ಹರಿಕಾರ' ಎಂದು ಕರೆದಿರುವುದು ಅವರ ಜನಪರ ಬದುಕಿಗೆ ಸಂದ ಗೌರವವಾಗಿದೆ. ಇವರ ಎಲ್ಲಾ ಸಾಧನೆಗಳನ್ನು ಗಮನಿಸಿದ ಇಂಗ್ಲೆಂಡ್‌ನ 'ಗ್ರಾಫಿಕ್' ಎಂಬ ಪತ್ರಿಕೆ 1906ನೆಯ ಮಾರ್ಚ್ 10ರ ಸಂಚಿಕೆಯಲ್ಲಿ; ''ಮಾದರಿ ಸಂಸ್ಥಾನ ಎಂಬ ಹೆಮ್ಮೆಯ ಹೆಸರಿಗೆ ಮತ್ಯಾವ ಭಾರತೀಯ ಸಂಸ್ಥಾನಕ್ಕೂ ಅರ್ಹತೆ ಇಲ್ಲ'' ಎಂದು ಪ್ರಶಂಸಿದೆ. ಮಹಾತ್ಮಾ ಗಾಂಧೀಜಿಯವರು ನಾಲ್ವಡಿಯವರನ್ನು 'ರಾಜರ್ಷಿ' ಎಂದು ಕರೆದದ್ದು ಅರ್ಥಪೂರ್ಣವಾಗಿದೆ.

Similar News