ಬಡವರನ್ನು ಸತಾಯಿಸಿದರೆ ನಾನು ಸುಮ್ಮನಿರುವುದಿಲ್ಲ: ಶಾಸಕ ಅಶೋಕ್ ರೈ

ವಿಟ್ಲ ಪಟ್ಟಣ ಪಂಚಾಯತ್‍ನಲ್ಲಿ ಅಧಿಕಾರಿಗಳ ಜೊತೆ ಸಭೆ

Update: 2023-06-04 14:32 GMT

ವಿಟ್ಲ: ಕಚೇರಿಗೆ ವಿವಿಧ ಕೆಲಸಗಳಿಗಾಗಿ ಬರುವ ಬಡವರನ್ನು ಯಾವುದೇ ಕಾರಣಕ್ಕೂ ಸತಾಯಿಸಲು ಹೋಗ ಬೇಡಿ. ಬಡವರು ಹೆಚ್ಚಾಗಿ ಇಲಾಖೆಯ ಅಥವಾ ತಾವು ಮಾಡಿಸಿಕೊಳ್ಳಲು ಬಂದ ಕೆಲಸದ ಬಗ್ಗೆ ಅರಿವು ಇಲ್ಲದವರು, ವಿದ್ಯೆ ಇಲ್ಲದವರೂ ಇದ್ದಾರೆ ಅಂತವರ ಕೆಲಸವನ್ನು ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಮಾಡಿಕೊಡಬೇಕು. ಬಡವರನ್ನು ಸತಾಯಿಸಲು ಮುಂದಾದರೆ ನಾನು ಸುಮ್ಮನೇ ಇರುವುದಿಲ್ಲ ಮತ್ತು ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ವಿಟ್ಲ ಪಟ್ಟಣ ಪಂಚಾಯತ್‍ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಕಚೇರಿ ವ್ಯವಹಾರಗಳ ಬಗ್ಗೆ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದರು.

ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಈ ಪೈಕಿ 165 ಮನೆಗಳಿಗೆ ಯೋಜನೆಯ ಕಂತು ಬರಲು ಬಾಕಿ ಇದೆ, ಈ ಪೈಕಿ 105 ಮನೆಗಳಿಗೆ ನಯಾ ಪೈಸೆ ಕಂತು ಬಂದಿಲ್ಲ. ಸರಕಾರದ ಸಹಾಯವನ್ನು ನಂಬಿ ಮನೆ ಕಟ್ಟಲು ಬಡವರು ಆಸೆಪಟ್ಟಿದ್ದರು ಆದರೆ ಅವರ ಆಸೆಗೆ ತಣ್ಣೀರೆರಚಲಾಗಿದೆ ಯಾಕೆ ಹೀಗಾಗಿದೆ ಎಂದು ಶಾಸಕರು ಅಧಿಕಾರಿಯ ಬಳಿ ಪ್ರಶ್ನಿಸಿದರು. ಕಂತು ಬಾರದೆ ಇರುವ ಎಲ್ಲಾ ಮನೆಗಳಿಗೂ ಶೀಘ್ರದಲ್ಲೇ ಹಣ ಮಂಜೂರು ಮಾಡಿಸಬೇಕು. ನಾಳೆಯೇ ಸಂಬಂಧಪಟ್ಟ ಇಲಾಖೆಗೆ ಪತ್ರ ಕಳುಹಿಸಿ ನಾನು ಸಚಿವರ ಜೊತೆ ಮಾತನಾಡಿ ತಕ್ಷಣವೇ ಎಲ್ಲಾ ಕಂತುಗಳ ಪಾವತಿಗೆ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ ಶಾಸಕರು ಈ ರೀತಿಯ ದೋಷಗಳು ಆದರೆ ಅದನ್ನು ತಕ್ಷಣವೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಬಡವರಿಗೆ ನೆರವಾಗಬೇಕು ಎಂದು ಸೂಚನೆ ನೀಡಿದರು.

ವಿಟ್ಲದ ಕೆಲವು ಕಾಲನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪಿಕಪ್ ವಾಹನದಲ್ಲಿ ಟ್ಯಾಂಕ್ ಮೂಲಕ ನೀರು ವತರಣೆ ಮಾಡುತ್ತಿದ್ದೇವೆ ಎಂದು ಶಾಸಕರಿಗೆ ತಿಳಿಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿಯೂ ಕುಡಿ ಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಹಳೆಯ ಬೋರ್ವೆಲ್‍ಗಳ ದುರಸ್ಥಿ ಮಾಡುವುದು ಬೇಡ, ಹೊಸ ಬೋರ್‍ವೆಲ್ ತೆಗೆದು ನೀರಿನ ವ್ಯವಸ್ಥೆ ಮಾಡಬೇಕು. ನೀರಿಲ್ಲ ಎಂದು ಎಲ್ಲಿಂದಲೂ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ವಿಟ್ಲ ಪಟ್ಟಣ ಪಂಚಾಯತ್‍ಗೆ ಮೊದಲ ಬಾರಿಗೆ ಅಗಮಿಸಿದ ಶಾಸಕ ಅಶೋಕ್ ರೈ ಯವರನ್ನು ಮುಖ್ಯಾಧಿಕಾರಿ ಗೋಪಾಲ್ ನಾಯ್ಕ ಸಿಬ್ಬಂದಿಗಳ ಪರವಾಗಿ ಹೂಗುಚ್ಚ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು. 

Similar News