ಬಡವರ, ಸಾಮಾಜಿಕ ನ್ಯಾಯದ ವಿರುದ್ಧ ಬಿಜೆಪಿ ಪ್ರತಿಭಟನೆ: ಐವನ್ ಡಿಸೋಜ

Update: 2023-06-05 14:54 GMT

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆಗೆ  ಕರೆ   ನೀಡಿರುವುದು  ಕರ್ನಾಟಕದ ಮತದಾರರ ಮತ್ತು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ  ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ಹೇಳಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಈಗಿನ ಪ್ರತಿಭಟನೆಯು ಬಡವರ ಮತ್ತು ಜನಸಾಮಾನ್ಯರ ವಿರುದ್ಧ ಅಗಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ್ದ ಮಹಿಳೆಯರಿಗೆ ಸರಕಾರ ಬಸ್‌ನಲ್ಲಿ ಉಚಿತ ಪ್ರಯಾಣ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಸೇರಿದಂತೆ ಐದು ಯೋಜನೆಗಳನ್ನು ಮತದಾರರು ಮತದಾನ ಮಾಡಿದ ಗುರುತು ಬೆರಳಿನಿಂದ ಅಳಿಸಿ ಹೋಗುವ ಮೊದಲೇ ನೂತನ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡುವ ಮೂಲಕ ದಿಟ್ಟ ಹೆಜ್ಜೆ ಇರಿಸಿದೆ. ನುಡಿದಂತೆ ನಡೆದಿದೆ ಎಂದು ಹೇಳಿದರು.

ನಾಲ್ಕು ವರ್ಷಗಳ ಕಾಲ ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ  ಹಿಂದೂ,ಮುಸ್ಲಿಂ, ಕ್ರೈಸ್ತ, ಪುಸ್ತಕ ಪರಿಷ್ಕರಣೆ, ಸಾವರ್ಕರ್, ಟಿಪ್ಪು, ಗೋಹತ್ಯೆ ನಿಷೇಧ,ಫೈಯರಿಂಗ್,ಅನೈತಿಕ ಪೊಲೀಸ್ ಗಿರಿ, ಸಿಎ ಎನ್‌ಅರ್‌ಸಿ ವಿಚಾರಗಳ ಬಗ್ಗೆ  ಮಾತ್ರ ಚರ್ಚೆ ಆಗಿತ್ತು.ಜನರ ಅಗತ್ಯಗಳಿಗೆ ಆದ್ಯತೆ ನೀಡಿರಲಿಲ್ಲ.   ಆದರೆ ಈಗ ಕಾಂಗ್ರೆಸ್ ಆಡಳಿತದಲ್ಲಿ ಜನರಿಗೆ ಅಗತ್ಯದ ರೇಶನ್ ಕಾರ್ಡ್, ವಿದ್ಯುತ್, ಆರೋಗ್ಯ, ಮಹಿಳಾ ಸಬಲೀಕರಣ,ಉದ್ಯೋಗ, ಶಿಕ್ಷಣ ಇವುಗಳ ಬಗ್ಗೆ ಚರ್ಚೆ ಆಗುತ್ತಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸ. ಬಿಜೆಪಿ ಆಡಳಿತದಲ್ಲಿ ಜನರಿಗೆ ಅಗತ್ಯವಿಲ್ಲದ, ಜನಜೀವನಕ್ಕೆ ಸಂಬಂಧವಿಲ್ಲದ ಅನಗತ್ಯ  ವಿಚಾರಗಳ ಬಗ್ಗೆ ಚರ್ಚೆ ಮಾಡಿ  ಜನರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಈ ಅವಧಿಯಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಬಡವರು  ಇನ್ನಷ್ಟು ಕೆಳಕ್ಕೆ ತಳ್ಳಲ್ಪಟ್ಟು ಕಷ್ಟ ಅನುಭವಿಸಿದ್ದಾರೆ.

ಪ್ರಧಾನಿ ಮೋದಿ ಅವರು ರಾಜಸ್ಥಾನಕ್ಕೆ ಹೋಗಿ ಕಾಂಗ್ರೆಸ್‌ನ ಯೋಜನೆಗಳನ್ನು ಬೋಗಸ್ ಎಂದು ವ್ಯಂಗ್ಯ ವಾಡಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ ಎಂಬ ಕಾರಣಕ್ಕಾಗಿ ಅಲ್ಲಿನ ಸರಕಾರ ಜಾರಿಗೆ ತಂದಿರುವ ಜನಪರ  ಯೋಜನೆಗಳ ಬಗ್ಗೆ   ಪ್ರಧಾನಿಯವರು ಈ ರೀತಿ ಮಾತನಾಡಬಾರದಿತ್ತು.ಅವರು  ಅಭಿವೃದ್ಧಿ ವಿರುದ್ಧ ಮಾತನಾಡುವುದಿದ್ದರೆ ದೇಶದ ಪ್ರಧಾನಿಯಾಗಿ ಅವರ ಬದ್ಧತೆ ಏನು ಪ್ರಶ್ನಿಸಬೇಕಾಗುತ್ತದೆ ಎಂದರು.

ಚುನಾವಣೆ ಫಲಿತಾಂಶ  ಪ್ರಕಟಗೊಂಡು  ಇಪ್ಪತ್ತು ದಿನವಾಗಿದ್ದರೂ ರಾಜ್ಯ ವಿಧಾನ ಸಭೆಯ  ವಿಪಕ್ಷ ನಾಯಕನ ಆಯ್ಕೆಯನ್ನು ಮಾಡುವ ಯೋಗ್ಯತೆ ಬಿಜೆಪಿಗೆ ಇಲ್ಲದಾಗಿದೆ. ರಾಜ್ಯದಲ್ಲಿ ಬಿಜೆಪಿ ನೆಲೆಕಳೆದುಕೊಂಂಡು ನಿಷ್ಕ್ರೀಯ ವಾಗಿದೆ.  ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ನೋಡಿ ಬಿಜೆಪಿಗೆ ಹೊಟ್ಟೆಉರಿ ಶುರುವಾಗಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು  ಬಿಜೆಪಿ ನಾಯಕರು ಈಗ ಪ್ರತಿಭಟನೆಗೆ ಮುಂದಾಗಿದ್ದಾರೆ. ಜನರನ್ನು ಮೋಸಗೊಳಿಸಲು ಪ್ರತಿಭಟನೆ ಮಾಡುವುದು ಬೇಡ ಎಂದು ಹೇಳಿದ  ಐವನ್ ಜನಪರ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರದ ಜೊತೆ ಕೈಜೋಡಿಸಿ ಎಂದು ಬಿಜೆಪಿ ನಾಯಕರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ  ಕಾಂಗ್ರೆಸ್ ಪಕ್ಷದ ಧುರೀಣರಾದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೊಡಿಜಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ಕೆಪಿಸಿಸಿ ಸಂಯೋಜಕ ವಿವೇಕ್ ರಾಜ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಶುಭೋದಯ ಆಳ್ವ, ಭಾಸ್ಕರ್ ರಾವ್, ವಿಕಾಸ್ ಶೆಟ್ಟಿ, ಸಿರಾಜ್, ಇಮ್ರಾನ್ ಎ.ಆರ್  ಉಪಸ್ಥಿತರಿದ್ದರು.

Similar News