1 ಆರ್.ಆರ್.ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್: ಇಂಧನ ಸಚಿವ ಕೆ.ಜೆ.ಜಾರ್ಜ್

Update: 2023-06-05 16:05 GMT

ಬೆಂಗಳೂರು, ಜೂ. 5: ರಾಜ್ಯ ಸರಕಾರದ ಗೃಹ ಜ್ಯೋತಿ ಯೋಜನೆಯಡಿ ಒಂದು ಆರ್.ಆರ್.ಸಂಖ್ಯೆಗೆ ಮಾತ್ರ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಡಿಗೆದಾರರು ಮತ್ತು ಮಾಲಕರು ಎಂದು ನಾವು ಯಾವುದೆ ತಾರತಮ್ಯ ಮಾಡುತ್ತಿಲ್ಲ. ಸ್ಥಾವರ ಎಂದರೆ ಒಂದು ಆರ್.ಆರ್.ನಂಬರ್ ಎಂದು ಅರ್ಥ ಎಂದು ಹೇಳಿದರು.

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಆರ್.ಆರ್.ನಂಬರ್ ಹೊಂದಿದ್ದರೆ, ಒಂದು ಆರ್.ಆರ್.ಸಂಖ್ಯೆಗೆ ಮಾತ್ರ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು. ನಾವು ಯಾರಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಗೊತ್ತಾಗಬೇಕು. ಹೀಗಾಗಿ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಕೇಳಿದ್ದೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 2.15 ಕೋಟಿ ಆರ್.ಆರ್.ನಂಬರ್‍ಗಳಿವೆ. ಈ ಯೋಜನೆ ಜಾರಿಗೆ 13 ಸಾವಿರ ಕೋಟಿ ರೂ.ಗಳು ಬೇಕು. ವಿದ್ಯುತ್  ದರ ಏರಿಕೆ ಮಾಡಿರುವುದು ಹಿಂದಿನ ಬಿಜೆಪಿ ಸರಕಾರ. ಹಳೆ ಬಾಕಿ ಎಲ್ಲವೂ ಅವರ ಕಾಲದ್ದು. ನಾವು ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ ಏರಿಕೆ ಮಾಡಿಲ್ಲ ಎಂದು ಜಾರ್ಜ್ ಹೇಳಿದರು.

Similar News