ಗ್ರಾಮೀಣ ಭಾಗದಲ್ಲಿ ಪ್ರತಿದಿನ 300 ಟನ್ ಘನತ್ಯಾಜ್ಯ ವೈಜ್ಞಾನಿಕ ವಿಲೇಗೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

''ಪರಿಸರ ಸಂರಕ್ಷಣೆಗೆ ಗ್ರಾಮ ಪಂಚಾಯತ್ ಗೆ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು''

Update: 2023-06-05 17:36 GMT

ಬೆಂಗಳೂರು, ಜೂ. 5: ‘ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸುವುದು. ಎಂಆರ್‍ಎಫ್‍ಗಳ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಿಂದ ಪಂಚಾಯತಿಗಳಿಗೆ ಆದಾಯ ಮೂಲ ಸೃಷ್ಟಿಸಿ, ಪರಿಸರ ಸಂರಕ್ಷಣೆಗೆ ಆರ್ಥಿಕ  ಪ್ರೋತ್ಸಾಹ ನೀಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸೋಮವಾರ ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಕಟಣೆ ನೀಡಿರುವ ಅವರು, ‘ಈ ಬಾರಿ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಇಲಾಖೆಯು ಸರ್ವ ಸನ್ನದ್ಧವಾಗಿದೆ. ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಸುಭದ್ರ ಸಮಾಜ, ಉತ್ತಮ ಶಿಕ್ಷಣದ ಜೊತೆಗೆ ಅತ್ಯಾವಶ್ಯಕವಾಗಿ ವಾಸಯೋಗ್ಯ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಲು ಇಲಾಖೆ ಹಾಗೂ ರಾಜ್ಯ ಸರಕಾರ ಬದ್ಧವಾಗಿದೆ’ ಎಂದು ಘೋಷಿಸಿದ್ದಾರೆ.

‘ವಿಶ್ವ ಪರಿಸರ ದಿನದ' ಘೋಷವಾಕ್ಯ ‘ಪ್ಲಾಸ್ಟಿಕ್ ಮಾಲಿನ್ಯ ಸೋಲಿಸಿ’ ಅನುಗುಣವಾಗಿ, ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಪ್ರತಿ ಹಳ್ಳಿಯಲ್ಲಿ ಸುಸ್ಥಿರ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸ್ಥಾಪಿಸಲಿದ್ದೇವೆ. ಪ್ಲಾಸ್ಟಿಕ್ ಒಳಗೊಂಡ ಘನತ್ಯಾಜ್ಯ ವಿಲೇವಾರಿಯನ್ನು ಹಳ್ಳಿ ಮಟ್ಟದಿಂದಲೇ ಆರಂಭಿಸಲು ಪ್ರತಿ ಗ್ರಾ.ಪಂ.ಮಟ್ಟದ ಒಕ್ಕೂಟಗಳೊಂದಿಗೆ ಒಡಂಬಡಿಕೆಗೆ ರಾಜ್ಯದ 5,951 ಗ್ರಾ.ಪಂ.ಗಳಿಗೆ ಸೂಚಿಸಲಾಗಿದೆ. ಈ ಮೂಲಕ ರಾಜ್ಯದೆಲ್ಲೆಡೆ ಗ್ರಾಮೀಣ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸಲು ಇಲಾಖೆ ದಿಟ್ಟ ಹೆಜ್ಜೆ ಇರಿಸಿದೆ. ಈ ಕ್ರಮವು ಸ್ಥಳೀಯವಾಗಿ ಮಹಿಳಾ ಉದ್ಯೋಗವನ್ನೂ ಹೆಚ್ಚಿಸಲಿದೆ’ ಎಂದು ಅವರು ತಿಳಿಸಿದ್ದಾರೆ.

‘ಪ್ಲಾಸ್ಟಿಕ್ ಬಳಕೆಯನ್ನು ಕೊನೆಗಾಣಿಸಲು ಮೊದಲ ಹಂತವಾಗಿ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಪ್ರಮುಖ ಅಂಶ. ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ, ಪ್ಲಾಸ್ಟಿಕ್ ಬೇರ್ಪಡಿಸಿ ಸುಸ್ಥಿರ ಗ್ರಾಮೀಣ ಪರಿಸರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ಈ ಸಾಲಿನಲ್ಲಿ ಪ್ರತಿದಿನ ಹತ್ತು ಟನ್‍ಗಿಂತಲೂ ಹೆಚ್ಚು ಘನತ್ಯಾಜ್ಯ ವಿಲೇವಾರಿ ಮಾಡಬಲ್ಲ ಎಂಆರ್‍ಎಫ್‍ಗಳ ಸಂಖ್ಯೆಯನ್ನು ಪ್ರಸ್ತುತ 11ರಿಂದ ಜಿಲ್ಲೆಗೆ ಒಂದರಂತೆ 30ಕ್ಕೆ ಏರಿಕೆ ಮಾಡಲಿದೆ. ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ದದ ಈ ಹೋರಾಟದಲ್ಲಿ ಇದು ದೊಡ್ಡ ಬಲ ತುಂಬಲಿದೆ ಎಂದು ಹೇಳಿದ್ದಾರೆ.

ಈ ಮೂಲಕ ವರ್ಷದ ಕೊನೆಗೆ ಇಲಾಖೆಯ ವತಿಯಿಂದ ಪ್ರತಿದಿನ 300 ಟನ್ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ಈ ಘಟಕಗಳ ಸ್ವಾವಲಂಬಿ ನಿರ್ವಹಣೆಗೆ ಅದರಿಂದ ಆರ್ಥಿಕ ಆದಾಯದ ಮೂಲವನ್ನೂ ಕಂಡುಕೊಳ್ಳಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸುವ ಸಲುವಾಗಿ ‘ಹಸಿರು' ಶಿಷ್ಟಾಚಾರ ಕಾರ್ಯಕ್ರಮವನ್ನು ಪ್ರಾರಂಭಿಕ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಇಲಾಖೆ ವ್ಯಾಪ್ತಿಯಲ್ಲಿ ಸಂಸ್ಥೆಗಳಲ್ಲಿ ಆರಂಭಿಸಲಾಗುವುದು. ಇದು ಕೇವಲ ಪ್ರಾರಂಭವಷ್ಟೇ, ಇನ್ಮುಂದೆ ಇಲಾಖೆಯಿಂದ ತೆಗೆದುಕೊಳ್ಳುವ ಬಹುತೇಕ ಕ್ರಮಗಳು, ಯೋಜನೆಗಳು ಗ್ರಾಮೀಣ ಮೂಲಸೌಕರ್ಯ ಸೃಷ್ಟಿಯ ಜೊತೆಗೆ ಪರಿಸರ ಸಂರಕ್ಷಣೆ ಮನದಲ್ಲಿಟ್ಟುಕೊಂಡೆ ರೂಪಿಸಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Similar News