ದೇವರಾಜ ಅರಸು ಕೆಲಸ ಮುಂದುವರಿಸುವೆ: ಸಿಎಂ ಸಿದ್ದರಾಮಯ್ಯ

Update: 2023-06-06 12:41 GMT

ಬೆಂಗಳೂರು, ಜೂ.6:ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ನಾಡು ಕಂಡ ಮುತ್ಸದಿ ರಾಜಕಾರಣಿಯಾಗಿದ್ದು, ಅವರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ನಮ್ಮ ಸರಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 41 ನೆ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಅವರು ಮುಖ್ಯ ಮಂತ್ರಿಯಾಗಿ ಹಾಗೂ ಅವರ ಜೀವಿತ ಕಾಲದಲ್ಲಿ ಮಾಡಿದ ಕೆಲಸ ನಮಗೆ ಸ್ಪೂರ್ತಿ ಎಂದರು.

ಸಾಮಾಜಿಕ ನ್ಯಾಯದ ಹರಿಕಾರ. ಅನೇಕ ಸಾಮಾಜಿಕ, ಕ್ರಾಂತಿಕಾರಿ ತೀರ್ಮಾನಗಳನ್ನು ಕೈಗೊಂಡಿದ್ದರು. ಭೂ ಸುಧಾರಣಾ ಕಾಯ್ದೆ, ಜೀತಪದ್ಧತಿ ಮುಕ್ತಿ, ಮಲಹೊರುವ ಪದ್ಧತಿಯನ್ನು ನಿಲ್ಲಿಸಿದ್ದು, ರೈತರ ಸಾಲ ವಿಮೋಚನಾ ಕಾಯ್ದೆ, ಹಾವನೂರು ಆಯೋಗ ರಚಿಸಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ, ಧ್ವನಿಯಿಲ್ಲದ ಜನರ ದನಿಯಾದರು ಎಂದು ಅವರು ಬಣ್ಣಿಸಿದರು.

ಅನೇಕ ಜನರನ್ನು ಶಾಸಕರನ್ನಾಗಿಸಿ ಅವರಿಗೆ ಪ್ರಾತಿನಿಧ್ಯ ನೀಡುವ ಕೆಲಸ ಮಾಡಿದರು. ರಾಜಕೀಯ ವ್ಯವಸ್ಥೆಯಲ್ಲಿಯೂ ಸಾಮಾಜಿಕ ನ್ಯಾಯ ತರಲು ಶ್ರಮಿಸಿದರು. ಅಧಿಕಾರ ಎಲ್ಲರಿಗೂ ದೊರೆಯಬೇಕೆಂಬ ನಂಬಿಕೆ ಉಳ್ಳವರಾಗಿದ್ದರು. ಉಳುವುವವನೆ ಭೂಮಿ ಒಡೆಯ ಎಂಬ ಕ್ರಾಂತಿಕಾರಿ ತೀರ್ಮಾನಗಳನ್ನು ಮಾಡಿದವರು. ಅವರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದರು.

Similar News