ಸುಳ್ಳು ಮೊಕದ್ದಮೆ ವಾಪಸ್ ಪಡೆಯಲು ಒತ್ತಾಯ: ಬೀದಿಬದಿ ವ್ಯಾಪಾರಿಗಳಿಂದ ಮಂಗಳೂರು ಮಹಾನಗರ ಪಾಲಿಕೆ ಚಲೋ

Update: 2023-06-06 13:23 GMT

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಪಟ್ಟಣ ವ್ಯಾಪಾರ ಸಮಿತಿಯ ಸಭೆಯನ್ನು ನಡೆಸದೆ ಬೀದಿಬದಿ ವ್ಯಾಪಾರಗಳ ಮೇಲೆ ನಡೆಸಿರುವ ದಾಳಿಯನ್ನು ಪ್ರಶ್ನಿಸಿದ್ದಕ್ಕೆ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ  ಬಿ.ಕೆ. ಇಮ್ತಿಯಾಝ್ ಹಾಗೂ ಮುಖಂಡರ ಮೇಲೆ ದಾಖಲಿಸಿರುವ ಸುಳ್ಳು ಮೊಕದ್ದಮೆ ಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರ ಪಾಲಿಕೆ ಚಲೋ ನಡೆಸಲಾಯಿತು.

ಅದಕ್ಕೂ ಮೊದಲು ಕೋಡಿಯಾಲ್‌ಬೈಲ್‌ನಿಂದ ಬೀದಿಬದಿ ವ್ಯಾಪಾರಿಗಳು ಮೆರವಣಿಗೆ ನಗರ ಪಾಲಿಕೆ ಕಚೇರಿಗೆ ರ್ಯಾಲಿ ನಡೆಸಿದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಶಾಸಕ ವೇದವ್ಯಾಸ್ ಕಾಮತ್ ಸರ್ವಾಧಿಕಾರಿ ಯಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳನ್ನು ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಅಧಿಕಾರಿಗಳು ಕಾನೂನು ಬದ್ಧ ವಾಗಿ ಜನರ  ಸೇವೆ ಮಾಡಬೇಕೇ ವಿನಃ ರಾಜಕೀಯ ಮರ್ಜಿಗೆ ತಕ್ಕಂತೆ ವರ್ತಿಸಬಾರದು ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಬಿಜೆಪಿಯ ಕುಮ್ಮಕ್ಕಿನಿಂದ ನಗರದ ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕುಗಳ ಮೇಲೆ ದಾಳಿ ನಡೆಸಲಾಗುತ್ತದೆ. ಬಿಜೆಪಿ ಶ್ರೀಮಂತರ ಪರವಾಗಿದೆಯೇ ವಿನಃ ಬಡವರ ಹಿತಾಸಕ್ತಿಯನ್ನು ಕಾಪಾಡುತ್ತಿಲ್ಲ ಎಂದು ಆರೋಪಿಸಿದರು.

ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ ದೇಶದಲ್ಲಿ ಬೀದಿಬದಿ ವ್ಯಾಪಾರಕ್ಕೆ ಕಾನೂನಿನ ಮಾನ್ಯತೆ ಇದ್ದರೂ ಕೂಡ ಮಂಗಳೂರಿನಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ. ಕಳೆದ ಒಂದು ವರ್ಷಗಳಿಂದ ಪಟ್ಟಣ ವ್ಯಾಪಾರ ಸಮಿತಿಯ ಸಭೆಯನ್ನೇ ಕರೆದಿಲ್ಲ. ಅಧಿಕಾರಿಗಳು ರಾಜಕಾರಣಿಗಳ ಒತ್ತಡದಲ್ಲಿ ಕಾನೂನು ಅನುಷ್ಠಾನ ಮಾಡಲು ಹೆದರುತ್ತಿದ್ದಾರೆ. ಪಾಲಿಕೆಯ ಅಧಿಕಾರಿಗಳಿಗೆ ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಬಗ್ಗೆ ಜ್ಞಾನವೇ ಇಲ್ಲ. ಅಕ್ರಮವಾಗಿ  ಕಾರ್ಯಾಚರಣೆ ನಡೆಸಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಪ್ರಕರಣ ದಾಖಲಿಸಿ ಹೋರಾಟದಿಂದ ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಯಾದವ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಂಘದ ಅಧ್ಯಕ್ಷ  ಮುಹಮ್ಮದ್ ಮುಸ್ತಫಾ ಮಾತನಾಡಿದರು.

ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರ್, ರಝಾಕ್ ಮೊಂಟೆಪದವು, ರಫೀಕ್ ಹರೇಕಳ, ಶ್ರೀನಾಥ್ ಕಾಟಿಪಳ್ಳ, ತಯ್ಯೂಬ್ ಬೆಂಗರೆ, ನೌಷಾದ್ ಬೆಂಗರೆ,  ಸಾಮಾಜಿಕ ಕಾರ್ಯಕರ್ತೆಯರಾದ ಪ್ರಮೀಳಾ ದೇವಾಡಿಗ, ಅಸುಂತ ಡಿಸೋಜ, ಯೋಗಿತಾ ಸುವರ್ಣ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಆಸೀಫ್ ಬಾವ ಉರುಮಣೆೆ, ನೌಷಾದ್ ಉಳ್ಳಾಲ, ರಹ್ಮಾನ್ ಅಡ್ಯಾರ್, ರೂಪೇಶ್, ಗಜಾನಂದ, ಗೋಪಾಲ ಕಂಕನಾಡಿ, ಆನಂದ ಲೇಡಿಹಿಲ್, ಅನಿಲ್ ಕಂದಕ, ಶ್ರೀನಿವಾಸ್ ಕಾವೂರು, ಧನಂಜಯ ಸುರತ್ಕಲ್, ಮೇರಿ ಡಿಸೋಜ, ಮೇಬಲ್ ಡಿಸೋಜ, ಶೌಕತ್, ನವಾಝ್ ಕಣ್ಣೂರು, ಇಸ್ಮಾಯಿಲ್ ಉಳ್ಳಾಲ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರ ಪಟ್ಟು: ಆಯುಕ್ತರ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಲು ಬಂದ ಉಪಾಯುಕ್ತರಿಗೆ ಮನವಿ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅಲ್ಲದೆ ಮನವಿ ನೀಡದೆ ಉಪಾಯುಕ್ತರನ್ನು ವಾಪಸ್ ಕಳುಹಿಸಿದರು. ಆಯುಕ್ತರು ಸ್ಥಳಕ್ಕೆ ಬಂದು ಪಟ್ಟಣ ವ್ಯಾಪಾರ ಸಮಿತಿ ಸಭೆಗೆ ದಿನ ನಿಗದಿಗೊಳಿಸಬೇಕೆಂದು ಪಟ್ಟು ಹಿಡಿದ ಬೀದಿ ವ್ಯಾಪಾರಿಗಳು ಘೋಷಣೆ ಕೂಗುತ್ತಾ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೋಲಿಸರು ಪಾಲಿಕೆ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ಜಂಟಿ ಆಯುಕ್ತರ ಮೂಲಕ ಜೂ.17ಕ್ಕೆ ಪಟ್ಟಣ ವ್ಯಾಪಾರ ಸಮಿತಿ ಸಭೆ ನಡೆಸುವುದಾಗಿ ತಿಳಿಸಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

Similar News