2026ರ ಜೂನ್ ವೇಳೆಗೆ ವಿಮಾನ ನಿಲ್ದಾಣಕ್ಕೆ ಮೆಟ್ರೋ ನಿಲ್ದಾಣ ಸಂಪರ್ಕ ಮಾರ್ಗ ಪೂರ್ಣ: ಡಿ.ಕೆ. ಶಿವಕುಮಾರ್

ನಮ್ಮ ಮೆಟ್ರೋ ಪರಿಶೀಲನಾ ಸಭೆ ನಡೆಸಿದ ಡಿಸಿಎಂ

Update: 2023-06-06 15:00 GMT

ಬೆಂಗಳೂರು, ಜೂ.6: ರಾತ್ರಿ ವೇಳೆ ನಮ್ಮ ಮೆಟ್ರೋ ಕಾಮಗಾರಿಗಳು ನಡೆಯುತ್ತಿವೆ. ಆದರೆ ಹಗಲಲ್ಲಿ ಸಿಮೆಂಟ್ ಸಹಿತ ಇತರೆ ಸಾಮಗ್ರಿ ತಲುಪಿಸಲು ಆಗುತ್ತಿಲ್ಲ. ಈ ವಿಚಾರವಾಗಿ ಪೊಲೀಸರ ಜತೆ ಸಭೆ ನಡೆಸಿ, ಸಹಕಾರ ಕೇಳಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಬಿಎಂಆರ್‍ಸಿಎಲ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪರಿಶೀಲನಾ ಸಭೆಯ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮದ ಅಧಿಕಾರಿಗಳ ಸಭೆ ಮಾಡಿ, ಕಾರ್ಯವೈಖರಿ ಪರಿಶೀಲನೆ ಮಾಡಿದ್ದೇನೆ. ಮೆಟ್ರೋ ಕಾರ್ಯನಿರ್ವಹಣೆ, ಮುಂದಿನ ಕಾರ್ಯಯೋಜನೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು ಗಳಿಸುತ್ತಿರುವ 48 ಕೋಟಿ ರೂ. ಆದಾಯದಲ್ಲಿ 42 ಕೋಟಿ ರೂ.ನಷ್ಟು ಹಣ ಕಾರ್ಯನಿರ್ವಹಣೆಗೆ ಖರ್ಚಾಗುತ್ತಿದೆ. ಬಂಡವಾಳ ಹೂಡಿಕೆ ಹೊರತಾಗಿ ಸಂಸ್ಥೆಯು ಕೇವಲ 6 ಕೋಟಿ ರೂ. ಲಾಭದಲ್ಲಿದೆ. ದೆಹಲಿ ಮೆಟ್ರೋ ರೈಲು ನಂತರ ನಮ್ಮದು ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಆಗಿದ್ದು, ವಿಶ್ವದರ್ಜೆ ಮಟ್ಟದ ಸೇವೆ ನೀಡುತ್ತಿದೆ ಎಂದರು. 

ಪ್ರಯಾಣಿಕರ ಹೊರತಾಗಿ ಇತರೆ ಮೂಲಗಳಿಂದ ಆದಾಯ ಗಳಿಸುವ ಕುರಿತು ನಾನು ಕೆಲವು ಸಲಹೆ ನೀಡಿದ್ದೇನೆ. ಜಾಹೀರಾತು ಬಗ್ಗೆ ಇರುವ ನಿಬರ್ಂಧವನ್ನು ಸರಿಪಡಿಸುವುದರ ಜತೆಗೆ ಸಬ್ಸಿಡಿಯಲ್ಲಿ ಸಿಗುತ್ತಿರುವ ವಿದ್ಯುತ್ ಅನ್ನು ಗ್ರೂಪ್ ಕ್ಯಾಪಿಟಿವ್ ಮೂಲಕ ಮತ್ತಷ್ಟು ಕಡಿಮೆ ದರಕ್ಕೆ ಪಡೆಯುವ ಸಲಹೆ ನೀಡಿದ್ದೇನೆ ಎಂದರು.

2ನೆ ಹಂತದ ಯೋಜನೆ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರು ಒಪ್ಪಿಗೆ ನೀಡಬೇಕಿದೆ. 3ಎ ಹಂತದ ಯೋಜನೆಯಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಸಮೀಕ್ಷೆ ನಡೆಯುತ್ತಿದೆ. ಮುಂದೆ ಇದನ್ನು ಎಲ್ಲೆಲ್ಲಿ ವಿಸ್ತರಣೆ ಮಾಡಬಹುದು ಎಂದು ಸಮೀಕ್ಷೆ ಮಾಡಲು ಸೂಚಿಸಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರಂ ಮೆಟ್ರೋ ಜುಲೈ ವೇಳೆಗೆ, ಕೆಂಗೇರಿ-ಚಲಘಟ್ಟ ಹಾಗೂ ನಾಗಸಂದ್ರ-ಮಾದವಾರ ಅಕ್ಟೋಬರ್ ವೇಳೆಗೆ ಸಿದ್ಧವಾಗಬಹುದು. ಇನ್ನು ನೂತನ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ ರಸ್ತೆ ಮಾರ್ಗ ಅಕ್ಟೋಬರ್ ನವೆಂಬರ್ ವೇಳೆಗೆ ಪೂರ್ಣವಾಗಲಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೋ ನಿಲ್ದಾಣ ಸಂಪರ್ಕ ಮಾರ್ಗ 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಸಿಲ್ಕ್ ಬೋರ್ಡ್ ನಿಂದ ಕೆ.ಆರ್. ಪುರಂವರೆಗಿನ ಮಾರ್ಗವೂ ಇದೇ ಸಮಯದಲ್ಲಿ ಪೂರ್ಣಗೊಳ್ಳಲಿದೆ. 

- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

Similar News