ಬಾಬಾಸಾಹೇಬರ ಸಾಂಗತ್ಯದಲ್ಲಿ ಸವಿತಾ ಅಂಬೇಡ್ಕರ್

Update: 2023-06-30 10:48 GMT

ಭಾರತದ ರಾಜಕೀಯ ಚರಿತ್ರೆಗೆ ಭದ್ರಬುನಾದಿ ಹಾಕಿ ಅದಕ್ಕೊಂದು ಸುಭದ್ರವಾದ ಸಂವಿಧಾನವನ್ನು ಕೊಟ್ಟು ಇಡೀ ಸಮಾಜವನ್ನು ತಾಯಿಯಂತೆ ಪೊರೆದ ಬಿ.ಆರ್. ಅಂಬೇಡ್ಕರ್ ಅವರ ಬದುಕಿನ ಪಯಣದ ಕಥನ ತುಂಬಾ ಚಾರಿತ್ರಿಕವಾದುದು. ಇಂದು ವಿಶ್ವವೇ ಕೊಂಡಾಡುತ್ತಿರುವ ಬಾಬಾಸಾಹೇಬರನ್ನು ಎಲ್ಲರೂ ಅರಿಯುತ್ತಿದ್ದಾರೆ. ಅಂಬೇಡ್ಕರ್ ತಮ್ಮ ಜೀವಿತ ಅವಧಿಯಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಜನರ ಮನದಾಳದಲ್ಲಿ ಶಾಶ್ವತವಾಗಿ ಉಳಿದಿವೆ.

ಅಂಬೇಡ್ಕರ್ ಜೀವನದ ಏಳು ಬೀಳುಗಳು ಬಹುಕಾಲದಿಂದ ಚರ್ಚೆಯಾಗುತ್ತಲೇ ಇವೆ.ರಾಜಕೀಯವಾಗಿಯೂ ಹೆಚ್ಚು ಮಹತ್ವಪಡೆದುಕೊಂಡಿವೆ. ಆದರೂ ಆತ್ಮಕತೆಗಳ ರೂಪದಲ್ಲಿ ಚರ್ಚೆಯಾಗಿ ಅದಕ್ಕೊಂದು ವಿಶಿಷ್ಟ ರೂಪ ನೀಡಿದ ಕೃತಿಗಳು ಕಡಿಮೆಯೇ ಎಂದು ಹೇಳಬಹುದು. ಮರಾಠಿ ದಲಿತ ಆತ್ಮಕತೆಗಳಿಗೆ ವಿಶಿಷ್ಟ ಸ್ಥಾನವಿದೆ. ಸಾಕಷ್ಟು ಆತ್ಮಕತೆಗಳು ಬಂದಿರುವ ಭಾಷೆ ಎಂದರೆ ಅದು ಮರಾಠಿಯಲ್ಲಿ ಮಾತ್ರ. ಸಂಖ್ಯಾದೃಷ್ಟಿಯಲ್ಲಿಯೂ ಮತ್ತು ಶೈಲಿ ತಂತ್ರದಿಂದಲೂ ಅಲ್ಲಿಯ ಆತ್ಮಕತೆಗಳಿಗೆ ಸಾಂಸ್ಕೃತಿಕವಾಗಿ ಮಹತ್ವವಿದೆ. ನೈಜವಾಗಿ ಕಟ್ಟುವ ಮತ್ತು ಹಾಗೆಯೇ ಬದುಕಿದ ಮರಾಠಿ ದಲಿತ ಲೇಖಕರು ಬರೆದ ಆತ್ಮಕತೆಗಳನ್ನು ಕನ್ನಡದ ದಲಿತ ಆತ್ಮಕತೆಯೊಂದಿಗೆ ಸಮೀಕರಿಸಿ ಚರ್ಚೆಗಳು ಅಲ್ಲಲ್ಲಿ ನಡೆದಿವೆ.

ಬೌದ್ಧಿಕವಾಗಿ ಅಂಬೇಡ್ಕರ್ ಏರಿದ ಎತ್ತರ ಇಂದಿಗೂ ಪಾಶ್ಚಾತ್ಯ ದೇಶಗಳಲ್ಲಿ ಅವರನ್ನು ಸ್ಮರಣೆ ಮಾಡಿಕೊಳ್ಳುವ ಪರಿ ಅನನ್ಯವಾದುದು. ಹಾಗಾಗಿಯೇ ಅಂಬೇಡ್ಕರ್ ಭಾರತದಾಚೆಗೆ ತನ್ನ ಬೌದ್ಧಿಕ ಬೆಳಕಿನಿಂದ ಗುರುತಾಗಿ ಬೆಳೆದವರು. ಅತ್ಯಂತ ಎತ್ತರವಾದ ಸಾಧನೆ ಮಾಡಿದವರ ಖಾಸಗಿ ಬದುಕುಗಳ ಬಗೆಗೆ ಓದುಗರಲ್ಲಿ ಸಾಮಾನ್ಯವಾಗಿ ಕುತೂಹಲ ಇದ್ದೇ ಇರುತ್ತದೆ.

ದೇಶವನ್ನೇ ತನ್ನ ಬದುಕು ಎಂದು ತಿಳಿದು ದೇಹದ ಆಯಾಸವನ್ನು, ಅನಾರೋಗ್ಯವನ್ನು ಲೆಕ್ಕಿಸದೆ ದೇಶದ ಹಿತಚಿಂತನೆಗಾಗಿ ದುಡಿದ ಅಂಬೇಡ್ಕರ್ ಅವರ ಬದುಕಿನ ವೈಯಕ್ತಿಕ ವಿವರಗಳು ಬೇರೆಯವರು ಹೇಳುವುದಕ್ಕಿಂತ, ಬರೆಯುವುದಕ್ಕಿಂತ ಸಂಗಾತಿಯಾಗಿ ಡಾ. ಸವಿತಾ ಅಂಬೇಡ್ಕರ್ ಬರೆದಿರುವುದು ಹೆಚ್ಚು ಸ್ಪಷ್ಟತೆ ಮತ್ತು ನಿಖರವಾಗಿವೆ. ಬಾಬಾ ಸಾಹೇಬರಿಗೆ ಎರಡನೇ ಪತ್ನಿಯಾಗಿ ಬಂದ ವೈದ್ಯೆಯೂ, ಪುಸ್ತಕ ಪ್ರೇಮಿಯೂ ಆದ (ಡಾ.ಶಾರದಾ ಕಬೀರ್) ಡಾ.ಸವಿತಾ ಅಂಬೇಡ್ಕರ್ ಸಂಸಾರದ ಬಂಡಿಯ ಹೊಣೆಹೊತ್ತು ಸಾಗಿದ ಕತೆಯ ಕಥಾನಕವಿದು. ದೊಡ್ಡ ಸಾಧಕರ ಹೆಂಡತಿಯರು ಅನುಭವಿಸಿದ ತಾಕಲಾಟಗಳು, ಸಂಕಟಗಳು, ಹೇಳಲಾಗದ ವಿವರಗಳು, ಬರೆಯಲಾರದ ಸಂಗತಿಗಳು ಇದ್ದೇ ಇರುತ್ತವೆ. ಆತ್ಮಕತೆಗಳ ಜಾಡು ಸತ್ಯ, ಮಿಥ್ಯೆಗಳ ನಡುವೆ ನೆನಪಿನ ಪ್ರಭಾವಳಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ಕೆಲವು ಹೇಳಲಿಕ್ಕಾಗದ ಕಣ್ಣೀರ ಕಥನಗಳು ಸವಿತಾ ಅಂಬೇಡ್ಕರ್ ಬರೆದ ‘ಡಾ. ಅಂಬೇಡ್ಕರ್ ಸಹವಾಸದಲ್ಲಿ’ಯೂ ದಾಖಲಾಗಿವೆ. ಈ ಕೃತಿಯನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದವರು ಅನಿಲ ಹೊಸಮನಿ

ಅಂಬೇಡ್ಕರ್ ಅವರನ್ನು ಕುರಿತು ವಿಶ್ವವಿದ್ಯಾನಿಲಯಗಳು ಭಿನ್ನ ಬಗೆಯಲ್ಲಿ ಚಿಂತಿಸುತ್ತಿವೆ. ಸಂಶೋಧನಾ ವಲಯವೂ ತನ್ನ ಹುಡುಕಾಟದಲ್ಲಿ ತೊಡಗುತ್ತಾ ಬಂದಿವೆ. ಭಾರತದ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಅಂಬೇಡ್ಕರ್ರವರ ಬಯಲ ಬದುಕಿಗಿಂತ ಅಂತರಂಗದ ಕಿಟಕಿಯಲ್ಲಿ ಕಾಣುವ ಭಾವನೆಯ ಬುತ್ತಿಯ ವಿವರಗಳು ಕಲಕುತ್ತವೆ. 
ಈ ಕೃತಿ ಸವಿತಾ ಅವರ ಆತ್ಮಕತೆಯಾದರೂ ಇದರ ತುಂಬಾ ಅಂಬೇಡ್ಕರ್ ಅವರೇ ತುಂಬಿದ್ದಾರೆ. ಅವರಿಂದ ಬಾಬಾಸಾಹೇಬರ ಆತ್ಮ ಚರಿತ್ರೆಯನ್ನು ಬಹು ಆಯಾಮದಲ್ಲಿ ನಿರ್ಭಿಡೆಯಿಂದ ಬರೆಸಿಕೊಂಡಿರುವ ಈ ಕೃತಿ ಹೊಚ್ಚ ಹೊಸದೆನಿಸುತ್ತದೆ. ಕೆಲವು ಸಾರ್ವಜನಿಕವಾಗಿ ಚರ್ಚೆ ಆಗಿದ್ದರೂ ಇನ್ನು ಕೆಲವು ವಿವರಗಳು ತೀರಾ ವೈಯಕ್ತಿಕವಾಗಿ ಘಾಸಿ ಉಂಟು ಮಾಡಿದ್ದ ವಿವರಗಳು ಮತ್ತು ಅದಕ್ಕೆ ವಿಶ್ಲೇಷಣೆ, ಸಮರ್ಥನೆ ಕೊಡುತ್ತಾ ತನ್ನ ಮೇಲಿದ್ದ ಆಪಾದನೆಯನ್ನು ಬಿಡಿಸಿಕೊಂಡು ನಿರಾಳವಾಗುವ ಹೆಣ್ಣೊಬ್ಬಳ ಅಂತರಂಗದ ತುಡಿತ ಸ್ಪಷ್ಟವಾಗುತ್ತದೆ.

ಕೃತಿ: ಡಾ. ಅಂಬೇಡ್ಕರ್ ಸಹವಾಸದಲ್ಲಿ
(ಆತ್ಮ ಕಥನ)
ಲೇಖಕರು:
ಡಾ. ಸವಿತಾ ಭೀಮರಾವ್ ಅಂಬೇಡ್ಕರ್
ಕನ್ನಡಕ್ಕೆ: ಅನಿಲ ಹೊಸಮನಿ
ಬೆಲೆ: 330 ರೂ.
ಪ್ರಕಾಶನ: ಲಡಾಯಿ ಪ್ರಕಾಶನ ಗದಗ
ಮೊ: 9480286844

Similar News