ದ.ಕ. ಜಿಲ್ಲಾ ಮಟ್ಟದ ಜನಪರ ಸಂಘಟನೆಗಳು, ಎಡಪಕ್ಷಗಳ ಜಂಟಿ ನಿಯೋಗದಿಂದ ಸ್ಥಳ ಪರಿಶೀಲನೆ

►ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ ನಿಂದ ಫಲ್ಗುಣಿಗೆ ಮಾರಕ ಕೈಗಾರಿಕಾ ತ್ಯಾಜ್ಯ ► ಪತಂಜಲಿ ಫುಡ್ಸ್ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗೆ ತರಾಟೆ

Update: 2023-06-07 17:33 GMT

ಸುರತ್ಕಲ್, ಜೂ.7: ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬಾಬಾ ರಾಮ್ ದೇವ್ ಮಾಲಕತ್ವದ ಪತಂಜಲಿ ಫುಡ್ಸ್ (ರುಚಿ ಸೋಯಾ) ತುಳುನಾಡಿನ ಜೀವನದಿ ಫಲ್ಗುಣಿಗೆ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುವ ಕೊಳವೆಗಳು ಪತ್ತೆಯಾದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳು ಹಾಗೂ ಎಡಪಕ್ಷಗಳ ಜಂಟಿ ನಿಯೋಗವು ಬುಧವಾರ ಭೇಟಿ ನೀಡಿ ಆಗಿರುವ ಹಾನಿಯನ್ನು ವೀಕ್ಷಿಸಿತು.

ನಿಯೋಗವು ಮಾಲಿನ್ಯ ಪತ್ತೆಯಾದ ಪತಂಜಲಿ ಫುಡ್ಸ್ ಮುಂಭಾಗ ತಲುಪಿದಾಗ ಕಂಪೆನಿಯ ಕಾರ್ಮಿಕರು ಜೆಸಿಬಿ ಹಾಗೂ ಟಿಪ್ಪರ್  ಬಳಸಿ ತೋಕೂರು ನಾಲದಲ್ಲಿ ಹರಿಯದೆ ಶೇಖರಣೆ ಗೊಂಡಿರುವ, ದಶಕಗಳಿಂದ ಮಣ್ಣಿನ ಆಳಕ್ಕೆ ಇಳಿದು ಜಿಡ್ಡು ಗಟ್ಟಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕೆಲಸದಲ್ಲಿ ತೊಡಗಿದ್ದರು. ಸತತ ಆರು ದಿನಗಳಿಂದ ತೆರವು ಕಾರ್ಯಾಚರಣೆ ನಡೆಯುತ್ತಿದ್ದರೂ ಮಾಲಿನ್ಯ ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತಿತ್ತು ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಕಂಪೆನಿಯ ಅಧಿಕಾರಿಗಳು ಮುಖಂಡರೊಂದಿಗೆ ಮಾತನಾಡಿ, ತಿಂಗಳ ಹಿಂದೆ ಅಡುಗೆ ತೈಲದ ಮೂಲ ದ್ರವ್ಯ ಹೊಂದಿದ್ದ ಟ್ಯಾಂಕರ್ ಒಂದು ಕಂಪೆನಿಯ ಒಳಗಡೆ ಮಗುಚಿ ಬಿದ್ದು 30 ಟನ್ ದ್ರವ್ಯ ತೋಕೂರು ಹಳ್ಳಕ್ಕೆ ಹರಿದಿದೆ ಎಂಬುದು ಕಂಪೆನಿಯ ಸಮಜಾಯಿಷಿ ನೀಡಿತು. 

ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಿಯೋಗ, ಒಂದು ಟ್ಯಾಂಕರ್ ಮಗುಚಿ ಬಿದ್ದರೆ, ಆರು ದಿನಗಳ ಕಾಲ ಟಿಪ್ಪರ್, ಟ್ಯಾಂಕರ್, ಜೆಸಿಬಿ ಬಳಸಿ ಹಗಲು ರಾತ್ರಿ ತೆರವುಗೊಳಿಸುತ್ತಿದ್ದರೂ ಕಾರ್ಯಾಚರಣೆ ಯಾಕೆ ಪೂರ್ಣ ಗೊಳ್ಳುತ್ತಿಲ್ಲ? ತಿಂಗಳ ಹಿಂದೆ ಟ್ಯಾಂಕರ್ ಮಗುಚಿ ತೋಕೂರು ಹಳ್ಳಕ್ಕೆ ಹರಿದಿದ್ದರೂ ನಾಲ್ಕು ವಾರ ತೈಲ ತೆರವಿಗೆ ಕಾರ್ಯಾಚರಣೆ ನಡೆಸದಿರುವುದು ಯಾಕೆ ? ಸಮಿತಿ ದೂರು ಸಲ್ಲಿಸಿ, ಪರಿಸರ ಅಧಿಕಾರಿಗಳು ಮಹಜರು ನಡೆಸಿದ ನಂತರ (ಈಗ ಆರು ದಿನಗಳಿಂದ) ತೆರವುಗೊಳಿಸಲು ಕಾರಣ ಏನು ?  ಕೈಗಾರಿಕಾ ತ್ಯಾಜ್ಯ ಹರಿಸುವ ಕುರಿತು ವರ್ಷಗಳಿಂದ ಪ್ರತಿಭಟಿಸುತ್ತಿದ್ದೇವೆ, ಮಾಲಿನ್ಯ ಪತ್ತೆಯಾದ ಸ್ಥಳದಲ್ಲಿಯೂ ತ್ಯಾಜ್ಯ ನೆಲದ ಆಳಕ್ಕೆ ಇಳಿದಿದೆ, ವೈಟ್ ಸಿಮೆಂಟ್ ರೀತಿ ಗಟ್ಟಿಯಾಗಿ ಪರಿವರ್ತನೆ ಹೊಂದಿದೆ, ಟ್ಯಾಂಕರ್ ಮಗುಚಿರುವುದಾದರೆ ಇದು ಹೇಗೆ ಸಾಧ್ಯ ? ಎಂಬ ಪ್ರಶ್ನೆಗಳನ್ನು ಸಂಸ್ಥೆಯ ಅಧಿಕಾರಿಗಳಿಗೆ ಪ್ರಶ್ನಿಸಿತು. ಈ ವೇಳೆ ಅಧಿಕಾರಿಗಳು ತಬ್ಬಿಬ್ಬಾದ ಘಟನೆಯೂ ನಡೆಯಿತು. 

ಬಳಿಕ ನಿಯೋಗವು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ರವಿ ಅವರನ್ನು ಭೇಟಿ ಮಾಡಿತು.‌ ಈ ವೇಳೆ ನಿಯೋಗದ ಜೊತೆ ಮಾತನಾಡಿದ ಅಧಿಕಾರಿ ರವಿ, ಪರಿಸರ ನಿಯಮಗಳ ಗಂಭೀರ ಉಲ್ಲಂಘನೆಗಾಗಿ ಪತಂಜಲಿ ಫುಡ್ಸ್ ಮುಚ್ಚಲು ಅನುಮತಿ ನೀಡುವಂತೆ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜ್ಯ ಅಧಿಕಾರಿಗೆ ಪತ್ರ ಬರೆಯಲಾಗಿದೆ, ಕ್ರಿಮಿನಲ್ ಮೊಕದ್ದಮೆ ಹೂಡಲೂ ಅನುಮತಿ ಕೇಳಲಾಗಿದೆ. ಮೇಲಾಧಿಕಾರಿಯ ಆದೇಶವನ್ನು ಕಾಯುತ್ತಿದ್ದೇವೆ ಎಂದು ತಿಳಿಸಿದರು. 

ಇದೇ ಸಂದರ್ಭ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ‌ ನಿಯೋಗ, ತೋಕೂರು ಹಳ್ಳದಲ್ಲಿ ಶೇಖರಣೆ ಗೊಂಡಿರುವ ತ್ಯಾಜ್ಯವನ್ನು ತೆರುವುಗೊಳಿಸಲು ಕಂಪೆನಿಗೆ ಅವಕಾಶ ನೀಡಿರುವುದು ಯಾಕೆ ? ಸಂಗ್ರಹಿಸಿ ಕಂಪೆನಿಯ ಒಳಭಾಗಕ್ಕೆ ಕೊಂಡೊಯ್ದಿರುವ ತ್ಯಾಜ್ಯವನ್ನು ಕಂಪೆನಿ ಏನು ಮಾಡುತ್ತದೆ ? ಇದರಿಂದ ಸಾಕ್ಷಿ ನಾಶ ಆಗುವುದಿಲ್ಲವೇ ? ಎಂದು ಪ್ರಶ್ನಿಸಿತು‌. ನಿಯೋಗದ ಪ್ರಶ್ನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ರವಿ ಅವರು ಕಂಪೆನಿಯ ಒಳಭಾಗಕ್ಕೆ ಹೋಗಿ ಎಲ್ಲವನ್ನೂ ಪರಿಶೀಲಿಸುವ ಎಂದು ನಿಯೋಗಕ್ಕೆ ಭರವಸೆ ನೀಡಿದರು.

ನಿಯೋಗದಲ್ಲಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ರಾಜ್ಯ ರೈತ ಸಂಘದ ಸನ್ನಿ ಡಿ ಸೋಜ, ಆದಿತ್ಯ ಕಲ್ಲಾಜೆ, ಪ್ರಾಂತ ರೈತ ಸಂಘದ ನಾಯಕ ಕೃಷ್ಣಪ್ಪ ಸಾಲ್ಯಾನ್, ದಲಿತ ಸಂಘರ್ಷ ಸಮಿತಿಯ ಎಂ.ದೇವದಾಸ್, ರಘು ಎಕ್ಕಾರು, ಕಾರ್ಮಿಕ ಸಂಘಟನೆ ಸಿಐಟಿಯು ನ ಸುನಿಲ್ ಕುಮಾರ್ ಬಜಾಲ್, ಎಐಟಿಯುಸಿ ಕರುಣಾಕರ ಮಾರಿಪಳ್ಳ, ತಿಮ್ಮಪ್ಪ ಕಾವೂರು, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ ಬಂಟ್ವಾಳ್, ಡಿವೈಎಫ್ಐ ಜಿಲ್ಲಾ ನಾಯಕರಾದ ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ಆಶಾ ಬೋಳೂರು, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಜೋಕಟ್ಟೆ ಗ್ರಾ.ಪಂ. ಸದಸ್ಯರಾದ ಅಬೂಬಕ್ಕರ್ ಬಾವಾ, ಕೆವಿನ್ ಫೆರಾವೊ, ಪ್ರೆಸಿಲ್ಲಾ ಫೆರಾವೊ, ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ತಯ್ಯುಬ್ ಬೆಂಗ್ರೆ, ಸಾಮಾಜಿಕ ಕಾರ್ಯಕರ್ತರಾದ ಅಸುಂತಾ ಡಿ ಸೋಜ, ಪ್ರಮೀಳಾ ದೇವಾಡಿಗ, ಪ್ರಮೀಳಾ ಶಕ್ತಿನಗರ, ಸಿಲ್ವಿಯಾ, ಇಕ್ಬಾಲ್ ಜೋಕಟ್ಟೆ, ನಝೀರ್ ಜೋಕಟ್ಟೆ, ಹನೀಫ್, ಮುನಾಝ್ ಮತ್ತಿತರರು ಇದ್ದರು.

"ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳುವುದಲ್ಲ. ಮಾಧ್ಯಮಗಹಳಲ್ಲಿ ಬರುವ ಜನರ ಸಮಸ್ಯೆಗಳ ಪ್ರದೇಶ ಗಳಿಗೆ ಸ್ವತಹಾ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಇದು ಜಿಲ್ಲೆಯಲ್ಲಿ ದೊಡ್ಡ ಸಮಸ್ಯೆಯಾಗಿ ನಿರ್ಮಾಣವಾಗಿದೆ. ಹಾಗಾಗಿ ಜನರ ಆರೋಗ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡುತ್ತಿರುವ ಈ ಸಮಸ್ಯೆಯನ್ನು ದ.ಕ. ಜಿಲ್ಲಾಧಿಕಾರಿಯವರು ಕಚೇರಿಯಲ್ಲೇ ಕುಳಿತುಕೊಳ್ಳದೆ, ಜನರ ಸಮಸ್ಯೆ, ಜನರ ಬದುಕಿನ ಸಮಸ್ಯೆಯಾಗಿ ಪರಿಣಮಿಸಿರುವ ಈ ಸಮಸ್ಯೆ ಶೀಘ್ರ ಪರಿಹರಿಸಬೇಕು".

-ಕೆ. ಯಾದವ ಶೆಟ್ಟಿ,  ಜಿಲ್ಲಾಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ

"ಬಾಬಾ ರಾಮ್‌ದೇವ್‌ ಅವರ ರುಚಿಗೋಲ್ಡ್‌ ನ ತ್ಯಾಜ್ಯವನ್ನು ಸಮೀಪ ಫಲ್ಗುಣಿ ನದಿಗೆ ಬಿಡಲಾಗುತ್ತಿದೆ. ಇದರಿಂದ ಇಲ್ಲಿನ ಜನರ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಾಮ್‌ದೇವ್‌ ಯೋಗ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಬೇಕೆನ್ನುವ ಇವರೇ ಇಲ್ಲಿ ತನ್ನ ಕೈಗಾರಿಕೆಯ ತ್ಯಾವನ್ನು ಚರಂಡಿಗೆ ಬಿಡುವ ಮೂಲಕ ನದಿಗೆ ಹರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಹಣ ಮಾಡುವ ದಂಧೆಯಾಗಿರುವುದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಶಾಶ್ವತ ಪರಿಹಾರ ನೀಡಬೇಕಿದೆ. ಇಲ್ಲವಾದರೆ, ಸ್ಥಳಿಯರು ಹಾಕಿಕೊಳ್ಳುವ ಎಲ್ಲಾ ರೀತಿಯ ಹೋರಾಟಗಳಿಗೆ ದಲಿತ ಸಂಘರ್ಷ ಸಮಿತಿ ಜೊತೆಯಾಗಿ ಹೋರಾಟಕ್ಕೆ ಬೆಂಬಲ ನೀಡಲಿದೆ".
-ಎಂ. ರಾಮದಾಸ್‌, ರಾಜ್ಯ ಸಂಘಟನಾ ಸಂಚಾಲಕ, ದಲಿತ ಸಂಘರ್ಷ ಸಮಿತಿ

"ಜಾಗತಿಕರಣದ ಪರಿಣಾಮವಾಗಿ ದೇಶದಲ್ಲಿ 40 ಲಕ್ಷ ಎಣ್ಣೆಯ ಸಣ್ಣ ಕೈಗಾರಿಕೆಗಳು ಮುಚ್ಚಲ್ಪಟ್ಟಿದೆ. ದೇಶದಲ್ಲಿ ಆಮದು ಮಾಡಿಕೊಳ್ಳುವ ಪದಾರ್ಥಗಳ ಪೈಕಿ ಪೆಟ್ರೋಲಿಯಂ ಪ್ರಥಮ ಸ್ಥಾನದಲ್ಲಿದ್ದರೆ, ಅಡುಗೆ ಎಣ್ಣೆ ಎರಡನೇ ಸ್ಥಾನದಲ್ಲಿದೆ. ಬಂಡವಾಳ ಶಾಹಿತ್ವದ ಪರಿಣಾಮ. ಕಳೆದ ಐದು ವರ್ಷಗಳಲ್ಲಿ ಈ ಸಂಸ್ಥೆ ಆಮದು ಮಾಡಿಕೊಂಡಿ ರುವ ಎಣ್ಣೆ ಮತ್ತು ಇಲ್ಲಿಂದ ರಫ್ತಾಗಿರುವ ಎಣ್ಣೆಯ ಲೆಕ್ಕಾಚಾರವನ್ನು ಪಡೆದು ಪರಿಶೀಲಿಸಿದರೆ, ಇಲ್ಲಿ ಈ ವರೆಗೆ ನಡೆದಿರುವ ಇವರು ಕಲೆಬೆರಕೆ ಮಾಡಿರುವುದು ತಿಳಿದು ಬರುತ್ತದೆ. ಈ ಕುರಿತೂ ಜಿಲ್ಲಾಧಿಕಾರಿಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಇದಕ್ಕಾಗಿ ರೈತರು, ಗ್ರಾಹಕರನ್ನು ಸೇರಿಸಿಕೊಂಡು ಒಂದು ಸಮಿತಿ ರಚಿಸಿ ತನಿಖೆಗೆ ಒಳಪಡಿಸಬೇಕು".

-ಸನ್ನಿ ಡಿಸೋಜ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸದಸ್ಯ

Similar News