ಲೋಕಸಭೆ ಟಿಕೆಟ್ ವಿಚಾರ | ಸದಾನಂದಗೌಡರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಎಂದ ಪ್ರಹ್ಲಾದ್ ಜೋಶಿ

Update: 2023-06-08 04:20 GMT

ಬೆಂಗಳೂರು: 13 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಗಳ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಬಗ್ಗೆ ಸದಾನಂದಗೌಡರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ದೆಹಲಿಯಲ್ಲಿ ಬುಧವಾರ ಸದಾನಂದಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಜೋಶಿ, ''ಹಿರಿಯ ರಾಜಕಾರಣಗಳಲ್ಲಿ ಒಬ್ಬರಾಗಿರುವ ಸದಾನಂದಗೌಡರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರಂಥ ಹಿರಿಯ ನಾಯಕರು ಆತಂಕಪಡಬೇಕಿಲ್ಲ. ಪಕ್ಷ ಸದಾ ಗೌಡರ ಜೊತೆಗಿದೆ'' ಎಂದು ಸ್ಪಷ್ಟಪಡಿಸಿದರು. 

''ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಪಕ್ಷ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಚುನಾವಣೆ ಸಮೀಪಿಸಿದಾಗ ಅಭ್ಯರ್ಥಿಗಳನ್ನು ನಿರ್ಧರಿಸಲಾಗುತ್ತದೆ. ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ನಿರ್ಧರಿಸುತ್ತಾರೆಯೇ ಹೊರತು ಮಾಧ್ಯಮಗಳಲ್ಲ'' ಎಂದು ತಿಳಿಸಿದರು.

'ರಾಜ್ಯದ 13 ಮಂದಿ ಬಿಜೆಪಿ ಪಕ್ಷದ ಸಂಸದರು ಯಾವುದೇ ಕೆಲಸ ಮಾಡಿಲ್ಲ, ಅಯೋಗ್ಯರು ಎಂದು ಮಾನಹಾನಿ ಆಗುವ ರೀತಿ ವರದಿಗಳ ಕುರಿತು ರಾಜ್ಯದ ಬಿಜೆಪಿ ನಾಯಕರು ಮೌನವಾಗಿ ಇರುವುದು ಏಕೆ?' ಎಂದು ಇತ್ತೀಚೆಗೆ ಸದಾನಂದಗೌಡರು ಹೇಳಿಕೆ ನೀಡಿದ್ದರು.

Similar News