ರಾಜ್ಯದ ಪ್ರಮುಖ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಗುರಿ: ಸಚಿವ ಈಶ್ವರ ಖಂಡ್ರೆ

Update: 2023-06-08 13:46 GMT

ಬೆಂಗಳೂರು, ಜೂ. 8: ‘ರಾಜ್ಯದ ಐದು ಪ್ರಮುಖ ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲು ಗುರಿ ಹೊಂದಲಾಗಿದೆ’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ತಮ್ಮ ಅಧಿಕೃತ ಕಚೇರಿಯ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಇಂದು ಭೂಗ್ರಹದ ಮುಂದೆ ದೊಡ್ಡ ಸವಾಲಿದೆ. ಪ್ಲಾಸ್ಟಿಕ್ ಸಮಸ್ಯೆ ತೀವ್ರವಾಗಿದೆ. ಕುಡಿಯುವ ನೀರು, ಪ್ರಾಣವಾಯು ಗಾಳಿಯೂ ಕಲುಷಿತವಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಐದು ಪ್ರಮುಖ ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲು ತೀರ್ಮಾನಿಸಲಾಗಿದೆ’ ಎಂದರು.

ಜೊತೆಗೆ ಈ ವರ್ಷ ಅರಣ್ಯ ಇಲಾಖೆಯ ವತಿಯಿಂದ ಮತ್ತು ಸಾರ್ವಜನಿಕರ ನೆರವಿನಿಂದ 5 ಕೋಟಿ ಸಸಿಗಳನ್ನು ನೆಟ್ಟು, ಪೋಷಿಸುವ ಸಂಕಲ್ಪ ಮಾಡಲಾಗಿದೆ ಎಂದ ಅವರು,ಇಂದು ಅರಣ್ಯ, ಪರಿಸರ ಇಲಾಖೆಯಲ್ಲಿ ಹಲವಾರು ಸವಾಲುಗಳಿವೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಇಲಾಖೆಯಲ್ಲಿ ಕಣ್ಣಿಗೆ ಕಾಣುವಂತಹ ಮಹತ್ವದ ಬದಲಾವಣೆ ಮಾಡಲು ಶ್ರಮಿಸುವುದಾಗಿ ಅವರು ಹೇಳಿದರು.

ವಿಧಾನಸೌಧದ ಕಟ್ಟಡದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂಬ ಲೇಖವಿದೆ. ಅದರಂತೆ ಜನಪರವಾದ, ಜನಸ್ನೇಹಿಯಾಗಿ ಇಲಾಖೆಯ ಕೆಲಸವನ್ನು ದೇವರ ಕೆಲಸ ಎಂಬಂತೆ ನಿಸ್ಪೃಹತೆಯಿಂದ ಮಾಡಲಾಗುವುದು. ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ 1 ರಾಜ್ಯ ಮಾಡಲು ಶ್ರಮಿಸಲಾಗುವುದು ಎಂದು ಅವರು ನುಡಿದರು.

Similar News