ಪುತ್ತೂರು ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಸಿಎಂ, ಸಚಿವರು, ಹೆದ್ದಾರಿ ಅಧಿಕಾರಿಗಳನ್ನು ಶಾಸಕ ಅಶೋಕ್ ರೈ ಭೇಟಿ, ಚರ್ಚೆ

Update: 2023-06-08 15:16 GMT

ಪುತ್ತೂರು: ಪುತ್ತೂರು ಜಿಲ್ಲಾ ಕೇಂದ್ರ, ಎಸ್ಪಿ ಕಚೇರಿ ಬೇಡಿಕೆಗಳು ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದರು. ಅಲ್ಲದೆ ಮುಜರಾಯಿ, ಸಾರಿಗೆ, ಇಂಧನ ಸಚಿವರನ್ನು ಹಾಗೂ ಹೆದ್ದಾರಿ ಅಧಿಕಾರಿಗಳನ್ನು ಬೇಟಿಯಾಗಿ ಬೇಡಿಕೆ ಕುರಿತು ಮನವಿ ಸಲ್ಲಿಸಿದರು.  

ಮಾಣಿ_ಪುತ್ತೂರು ಚತುಷ್ಪಥ ರಸ್ತೆ ರೂ.300 ಕೋಟಿ ಪ್ರಸ್ತಾವನೆ

ಮಾಣಿ-ಮೈಸೂರು ರಾಷ್ಟೀಯ ಹೆದ್ದಾರಿ 257ರ ಮಾಣಿಯಿಂದ ಪುತ್ತೂರು ತನಕ ಚತುಷ್ಪಥ ರಸ್ತೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ರಾ. ಹೆದ್ದಾರಿ ವಿಭಾಗದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ರೂ.300 ಕೋಟಿ ವೆಚ್ಚದ ಪ್ರಸ್ತಾವಣೆಯನ್ನು ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ದಕ್ಷಿಣ ಭಾರತ ಪ್ರಾಂತೀಯ (ನ್ಯಾಷನಲ್ ಹೈವೇ ಸೌತ್ ಇಂಡಿಯಾ ಝೋನ್) ಅಧಿಕಾರಿ ಮಹೇಂದ್ರ ಶರ್ಮ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಾಣಿಯಿಂದ ಪುತ್ತೂರು ತನಕ ಚತುಷ್ಪಥ ಕಾಮಗಾರಿ ಆರಂಭದಲ್ಲಿ ನಡೆಸುವಂತೆ ಮತ್ತು ಕಾಮಗಾರಿಯನ್ನು ಪ್ರಸಕ್ತ ಸಾಲಿನ ವಾರ್ಷಿಕ ಯೋಜನೆಯಲ್ಲಿ ಸೇರಿಸಿಕೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಶಾಸಕರ ಮನವಿಯನ್ನು ಸ್ವೀಕರಿಸಿದ ಅಧಿಕಾರಿ ಮಹೇಂದ್ರ ಶರ್ಮ ಅವರು ತಮ್ಮ ಬೇಡಿಕೆಯನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿಯ ಬೇಡಿಕೆಯ ಬಗ್ಗೆ ವಿವರಣೆ ನೀಡುವುದಾಗಿಯೂ ಶಾಸಕರಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ದೇವಳಕ್ಕೆ ಜಾಗ ಖರೀದಿ

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಪಕ್ಕದಲ್ಲಿರುವ 30 ಸೆಂಟ್ಸ್ ಜಾಗವನ್ನು ರೂ.1.70 ಕೋಟಿ ವೆಚ್ಚದಲ್ಲಿ ಖರೀದಿ ನಡೆಸಲು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿರೊಂದಿಗೆ ಮಾತನಾಡಿದ ಪುತ್ತೂರು ಶಾಸಕರು ಮುಂದಿನ 15 ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಕಳೆದ 3 ವರ್ಷಗಳಿಂದ ದೇವಳದ ಪಕ್ಕದಲ್ಲಿರುವ ಖಾಸಗಿ ಸ್ಥಳವನ್ನು ಖರೀದಿಸಲು ಆಡಳಿತ ಮಂಡಳಿ ಪ್ರಯತ್ನ ನಡೆಸಿತ್ತು. ಆದರೆ ಮುಜರಾಯಿ ಇಲಾಖೆ ಸ್ಪಂದಿಸದ ಕಾರಣ ಜಾಗ ಖರೀದಿಗೆ ಹಿನ್ನಡೆ ಯಾಗಿತ್ತು. ಈ ಬಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಪುತ್ತೂರು ಶಾಸಕರಲ್ಲಿ ಮಾಹಿತಿ ನೀಡಿದ್ದರು. 

ಕರುವೇಲ್ ವಿದ್ಯುತ್ ಉಪಕೇಂದ್ರಕ್ಕೆ ಮನವಿ

ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನು ಭೇಟಿಯಾದ ಶಾಸಕ ಅಶೋಕ್ ಕುಮಾರ್ ರೈ ಅವರು  ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 110 ಕೆ ವಿ ಕರುವೇಲು(ನೆಕ್ಕಿಲಾಡಿ) ಉಪಕೇಂದ್ರ ಯೋಜನೆಯ ಡಿಪಿಆರ್‍ಗೆ ಅನುಮೋದನೆ ನೀಡಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಅಗ್ರಹಿಸಿ ಮನವಿ ಮಾಡಿದರು. 

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪಿನಂಗಡಿ, ಕೊಯಿಲ, ರಾಮಕುಂಜ, ಹಿರೆಬಂಡಾಡಿ, ಕಾಂಚನ ಬಜತ್ತೂರು ಪ್ರದೇಶಗಳು ಅತೀ ಹೆಚ್ಚು ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದು ಈ ಸಮಸ್ಯೆಯ ಶಾಸ್ವತ ಪರಿಹಾರಕ್ಕಾಗಿ ರೂಪಿಸಲಾದ 110 ಕೆ ವಿ ಕರುವೇಲು ವಿದ್ಯುತ್ ಉಪಕೇಂದ್ರ ಯೋಜನೆಗೆ ಕಂದಾಯ ಇಲಾಖೆಯಿಂದ ಜಾಗ ಮಂಜೂರಾಗಿರುತ್ತದೆ. ಈ ಉಪಕೇಂದ್ರ ಯೋಜನೆಯ ಡಿಪಿಆರ್ ಅನುಮೋದನೆಯನ್ನು ನೀಡಿ ತಕ್ಷಣವೇ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಶಾಸಕರಾದ ಅಶೋಕ್‍ಸಚಿವರಿಗೆ ನೀಡಿದ ಮನವಿಯಲ್ಲಿ ಸಲ್ಲಿಸಿ ಆಗ್ರಹಿಸಿದರು.

ಪುತ್ತೂರು ವಿಭಾಗಕ್ಕೆ 25 ನೂತನ ಬಸ್

ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ 25 ನೂತನ ಬಸ್, 25 ಚಾಲಕರು ಹಾಗೂ 25 ಮಂದಿ ಮೆಕಾನಿಕ್‍ಗಳು ತೀರಾ ಅಗತ್ಯವಿದ್ದು, ಈ ಬಗ್ಗೆ ಶಾಸಕ ಅಶೋಕ್ ರೈ ಅವರು ಸಾರಿಗೆ ಇಲಾಖೆಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸಚಿವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಯನ್ನು ಕೆಲ ದಿನಗಳಲ್ಲಿಯೇ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

"ಮಾಣಿಯಿಂದ ಪುತ್ತೂರು ವರೆಗಿನ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ರೂ.300 ಕೋಟಿ ವೆಚ್ಚದ ಪ್ರಸ್ತಾವನೆ ನೀಡಿದ್ದೇನೆ. ಈ ಬಗ್ಗೆ ಕೇಂದ್ರ ಸರ್ಕಾರದ ಸಚಿವರೊಂದಿಗೆ ಮಾತನಾಡುತ್ತೇನೆ.  ಪುತ್ತೂರು ಮೆಡಿಕಲ್ ಕಾಲೇಜು ನಿರ್ಮಾಣ ಕುರಿತಂತೆ ಆರ್ಥಿಕ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕೆಲ ದಿನಗಳಲ್ಲಿ ಪುತ್ತೂರಿನ ಕೆಎಸ್ಸಾರ್ಟಿಸಿಗೆ 25 ನೂತನ ಬಸ್ ಹಾಗೂ ಸಿಬ್ಬಂದಿಗಳ ವ್ಯವಸ್ಥೆ ಆಗಲಿದೆ. ಉಪ್ಪಿನಂಗಡಿ ದೇವಳದ ಜಾಗ ಖರೀದಿಗೆ ಮುಂದಿನ 15 ದಿನಗಳಲ್ಲಿ ಮುಜರಾಯಿ ಇಲಾಖೆ ಅನುಮೋದನೆ ನೀಡಲಿದೆ. ಪುತ್ತೂರಿನ ಸಮಗ್ರ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಜೊತೆಗೆ ಮಾತುಕತೆ ನಡೆಸಿದ್ದೇನೆ. ಮುಂದಿನ ಐದು ವರ್ಷಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮತ್ತು ತಮ್ಮ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ".

- ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು.

Similar News