ಖಾತೆ ಬದಲಾವಣೆಗೆ 2 ಲಕ್ಷ ರೂ. ಲಂಚ: ಪಿಡಿಒ ಬಂಧನ

Update: 2023-06-08 17:15 GMT

ಬೆಂಗಳೂರು, ಜೂ.8: ಸ್ಥಿರಾಸ್ತಿಯ ಖಾತೆ ಬದಲಾವಣೆ ಮಾಡುವುದಕ್ಕಾಗಿ 2 ಲಕ್ಷ ಲಂಚ ಪಡೆದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಅಗಲಕುಪ್ಪೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಎನ್.ನರಸಿಂಹಮೂರ್ತಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 

ಗುರುವಾರ ಬೆಳಗ್ಗೆ ನೆಲಮಂಗಲದ ಸುಭಾಷನಗರದಲ್ಲಿ ರಸ್ತೆಯಲ್ಲೇ ನಿಂತು ಲಂಚದ ಹಣವನ್ನು ಪಡೆಯುತ್ತಿದ್ದಾಗ ಆರೋಪಿ ಪಿಡಿಒನನ್ನು ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ಗ್ರಾಮಾಂತರ ಘಟಕದ ಡಿವೈಎಸ್‍ಪಿ ರೇಣುಪ್ರಸಾದ್ ನೇತೃತ್ವದ ತಂಡ ಬಂಧಿಸಿತು. ಬಳಿಕ ಆರೋಪಿಯ ಮನೆಯ ಮೇಲೂ ದಾಳಿ ಮಾಡಿದ್ದು, 13.50 ಲಕ್ಷ ನಗದು ಪತ್ತೆಯಾಗಿದೆ. ಆ ಹಣವನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. 

ತಮ್ಮ ಪಾಲಿಗೆ ಬಂದಿದ್ದ ಎರಡು ಎಕರೆ ಜಮೀನಿನ ಖಾತೆಯ ವರ್ಗಾವಣೆಗೆ ಕೋರಿ ಬೆಂಗಳೂರಿನ ನಿವಾಸಿ ಶಿವಣ್ಣ ಎಂಬುವವರು ವರ್ಷದ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ಪಿಡಿಒ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ, ಪಿಡಿಒ 10 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.  
 

Similar News