ಮಂಗಳೂರು: ಎಂಆರ್ ಪಿಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಸದಿದ್ದರೆ ಪ್ರತಿಭಟನೆ; ಯುವ ಕಾಂಗ್ರೆಸ್

ಸಂಸದರು ಮೊದಲು ಸ್ಥಳೀಯರಿಗೆ ಅವಕಾಶ ನೀಡದ ಎಂಆರ್ ಪಿಎಲ್ ನೇಮಕಾತಿ ಪ್ರಕ್ರಿಯೆ ಸ್ಥಗಿತ ಗೊಳಿಸಲಿ

Update: 2023-06-09 07:13 GMT

ಮಂಗಳೂರು, ಜೂ.9; ಕೇಂದ್ರ ಸರಕಾರದ ಸ್ವಾಮ್ಯದ ಒಎನ್ ಜಿಸಿ ಯ ಅಂಗ ಸಂಸ್ಥೆ ಯಾದ ಎಂಆರ್ ಪಿಎಲ್ 2023ರಲ್ಲಿ ಸುಮಾರು 50 ಹುದ್ದೆಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆದರೆ ಅದರಲ್ಲಿ ಸ್ಥಳೀಯರಿಗೆ ನಿಗದಿತವಾಗಿ ಎಷ್ಟು ಹುದ್ದೆ ಮೀಸಲಿಡುವ ಯಾವ ಭರವಸೆ ನೀಡಲಿಲ್ಲ. ಇದರಿಂದ ಈ ಬಾರಿಯೂ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆ ಯಾಗಿದೆ.ಈ ರೀತಿಯ ನೇಮಕಾತಿಯ ಪ್ರಕ್ರಿಯೆಯನ್ನು ಇಲ್ಲಿನ ಸಂಸದರು ಕೇಂದ್ರ ಪೆಟ್ರೋಲಿಯಂ ಸಚಿವರ ಜೊತೆ ಚರ್ಚಿಸಿ ತಡೆಹಿಡಿಯಬೇಕಾಗಿದೆ ಎಂದು ದ.ಕ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 2021-22ರಲ್ಲಿ ಎಂಆರ್ ಪಿಎಲ್ 234 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸಿದ ಬಳಿಕ ದ.ಕ ಜಿಲ್ಲೆಯ ಇಬ್ಬರಿಗೆ ಮತ್ತು ರಾಜ್ಯದ 8 ಜನರಿಗೆ ನೇಮಕಾತಿ ನಡೆಯಿತು. ಉಳಿದಂತೆ ಯಾವ ಸ್ಥಳೀಯ ನಿರುದ್ಯೋಗಿ ಗಳಿಗೂ ಉದ್ಯೋಗ ದೊರೆತಿಲ್ಲ. ಈ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಕಾಂಗ್ರೆಸ್ ಸೇರಿದಂತೆ ಸಮಾನ ಮನಸ್ಕರ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ಸಂಸದರೂ ,ಶಾಸಕರು ‘ಎಂಆರ್ ಪಿ ಎಲ್  ಜೊತೆ ಸಮಾಲೋಚನೆ ನಡೆಸಲಾಗಿದೆ. ಸಂಸ್ಥೆ ಉದ್ಯೋಗ ನೀಡುವ ಭರವಸೆ ನೀಡಿದೆ’ ಎಂದು ತಿಳಿಸಿದ್ದರು. ಆದರೆ ಆ ಭರವಸೆ ಈಡೇರಿಲ್ಲ. ಈ ಬಾರಿ ಮತ್ತೆ ಎಂಆರ್ ಪಿಎಲ್ 50 ಹುದ್ದೆಗೆ ನೇಮಕಾತಿ ಅರ್ಜಿ ಆಹ್ವಾನಿಸಿದೆ.ಈ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಎಂ ಆರ್ ಪಿ ಎಲ್ ಅಧಿಕಾರಿಗಳ ಜೊತೆ ಸ್ಥಳೀಯರಿಗೆ  ಉದ್ಯೋಗ ನೀಡಲು ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಆದರೆ ಕಂಪೆನಿ ಎಲ್ಲಿಯೂ ಇಷ್ಟು ಹುದ್ದೆ ಸ್ಥಳೀಯರಿಗೆ ನಿಯಮಾನುಸಾರ ನೀಡುವ ಬಗ್ಗೆ ಇದುವರೆಗೆ ಪ್ರಕಟಣೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಎಂಆರ್ ಪಿಎಲ್ ಆಹ್ವಾನಿಸಿರುವ 50ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು  ಕೇಂದ್ರ ಪೆಟ್ರೋಲಿಯಂ ಸಚಿವರ ಮೂಲಕ ತಕ್ಷಣ ತಡೆಹಿಡಿ ಯಬೇಕಾಗಿದೆ.ಸ್ಥಳೀಯ ರಿಗೆ ಉದ್ಯೋಗ ನೀಡುವ ನಿರ್ಧಾರ ತೆಗೆದುಕೊಳ್ಳುವವರೆಗೆ ಈ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.

ಈ ಬಾರಿ ಹಿಂದಿನಂತೆ ಸ್ಥಳೀಯರನ್ನು ಕಡೆಗಣಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಎಂಆರ್ ಪಿ ಎಲ್ ತೊಡಗಿದರೆ ಯುವ ಕಾಂಗ್ರೆಸ್ ಸಮಾನ ಮನಸ್ಕ ಸಂಘಟನೆ ಗಳ ಜೊತೆ ಸೇರಿ ಸ್ಥಳೀಯ ಯುವ ನಿರುದ್ಯೋಗಿಗಳಿಗೆ ಉದ್ಯೋಗದ ಹಕ್ಕಿಗಾಗಿ ಹೋರಾಟ ನಡೆಸುವುದಾಗಿ ಲುಕ್ಮಾನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ದೀಕ್ಷಿತ್ ಅತ್ತಾವರ್, ಇಸ್ಮಾಯಿಲ್ ಬಿ.ಎಸ್, ಸಂಜನಾ ಚಲವಾದಿ, ಕೆಪಿವೈಸಿ ಸಂಯೋಜಕ ರಾದ ಸೌಹಾನ್ ಎಸ್.ಕೆ, ಜಿಲ್ಲಾ ಕಾರ್ಯ ದರ್ಶಿ ಮಹೇಶ್ ಕೊಂಚಾಡಿ, ಡಿಸಿಸಿ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.

Similar News