ವಿಟ್ಲ ಪಡ್ನೂರು: ರಸ್ತೆ ಕಾಮಗಾರಿ ಸ್ಥಗಿತಗೊಳಿಸಿದ ಆರೋಪ; ಸಾರ್ವಜನಿಕರಿಂದ ಪ್ರತಿಭಟನೆ

Update: 2023-06-09 16:11 GMT

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ -ಪಳ್ಳಿಗದ್ದೆ -ಪಂಜಿಗದ್ದೆ ಸಂಪರ್ಕ ರಸ್ತೆಯನ್ನು ದುರಸ್ತಿ ನೆಪದಲ್ಲಿ ಸುಮಾರು ಮೂರು ತಿಂಗಳುಗಳ ಹಿಂದೆ ಅಗೆದು ಜಲ್ಲಿ ಹಾಕಿ ದಿಢೀರನೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ತಕ್ಷಣವೇ ಕಾಮಗಾರಿ ಮುಂದುವರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಇಲ್ಲಿ ರಸ್ತೆ ಅಗೆದು ಹಾಕಿದ್ದರಿಂದ ವಾಹನ ಸಂಚಾರಯೋಗ್ಯವಿದ್ದ ರಸ್ತೆಯನ್ನು  ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಮಾಡಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. 

ಇದರಿಂದ ಸಾರ್ವಜನಿಕರು ಸಂಕಷ್ಟ ಪಡುವಂತಾಗಿದ್ದು, ರಸ್ತೆ ಅಗೆದು ಹಾಕಿದ ಪರಿಣಾಮ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಡಯಾಲಿಸಿಸ್ ಮಾಡುವ ರೋಗಿಗಳು, ಶಾಲಾ ಮಕ್ಕಳು ಹಾಗೂ ಈ ರಸ್ತೆ ಮೂಲಕ ಹಾದು ಹೋಗುವಂತಹ ಇನ್ನಿತರ ವಾಹನ ಚಾಲಕರೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೆ ಅಗೆದುಹಾಕಿದ ಕಾರಣ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಮೊದಲನೇ ಮಳೆಗೆ ರಸ್ತೆಗೆ ಹಾಕಿದ ಜಲ್ಲಿ ಮತ್ತು ಮಣ್ಣು ಹತ್ತಿರ ವಾಸವಿರುವ ಮನೆಯಂಗಳಕ್ಕೆ ಬರುವಂತಾಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಮಳೆನೀರು ಹರಿದು ಜಲ್ಲಿ ಮಣ್ಣು ಕೊಚ್ಚಿಹೋಗುವ ಸಾಧ್ಯತೆ ಇದೆ. ಈ ಮೊದಲು ಸಾರ್ವಜನಿಕರಾದ ನಾವು ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಈ ರಸ್ತೆ ಇರುವ ಭಾಗದಲ್ಲಿ ಮತದಾನ ಕೇಂದ್ರ ಇರುವ ಕಾರಣ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದು  ಕಾಮಗಾರಿ ಪುನರಾರಂಭ ಮಾಡುವುದಾಗಿ ತಿಳಿಸಿದ್ದರು. ಆದರೆ ಕಾಮಗಾರಿ ಪುನರಾರಂಭ ಮಾಡದ ಕಾರಣ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ದರು. ಬಳಿಕ ಗ್ರಾಮ ಪಂ. ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. 

ಸ್ಥಳೀಯರಾದ ಅಬ್ದುಲ್ ಕುಂಞಿ, ಅಝರುದ್ದೀನ್, ನಾಸಿರ್, ಶರೀಫ್, ಮಜೀದ್,ಸಂದೇಶ್ ಶೆಟ್ಟಿ, ಅಶ್ರಫ್, ಇಲ್ಯಾಸ್, ಯಹ್ಯಾ,ಇರ್ಷಾದ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

Similar News