ಆರ್.ಜಾಲಪ್ಪ ವ್ಯಕ್ತಿತ್ವ ನೇರ-ನಿಷ್ಠುರ ಮತ್ತು ಹೃದಯವಂತಿಕೆಯಿಂದ ಕೂಡಿತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ
ದೊಡ್ಡಬಳ್ಳಾಪುರ, ಅ19: ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ವ್ಯಕ್ತಿತ್ವ ನೇರ-ನಿಷ್ಠುರ ಮತ್ತು ಹೃದಯವಂತಿಕೆಯಿಂದ ಕೂಡಿತ್ತು. ಜಾಲಪ್ಪನವರಿಗೆ ಸಮಯ ಪ್ರಜ್ಞೆ ಇತ್ತು. ಒಬ್ಬ ದಕ್ಷ ಆಡಳಿತಗಾರರಾಗಿದ್ದ ಅವರು ನಿರ್ವಹಿಸಿದ ಎಲ್ಲ ಖಾತೆಗಳಲ್ಲೂ ತಮ್ಮದೆ ಆದ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದು ಮಾತ್ರವಲ್ಲ, ರೈತರಿಗೆ, ಕೃಷಿಗೆ ಅತ್ಯಂತ ಮಹತ್ವ ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ರವಿವಾರ ದೊಡ್ಡಬಳ್ಳಾಪುರದಲ್ಲಿ ಆರ್.ಎಲ್.ಜಾಲಪ್ಪ ಜನ್ಮ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾಲಪ್ಪ ಅಕಾಡಮಿ, ಜಾಲಪ್ಪ ಕಾನೂನು ಮಹಾವಿದ್ಯಾಲಯ, ಶತಮಾನೋತ್ಸವ ಭವನಗಳನ್ನು ಉದ್ಘಾಟಿಸಿ ಹಾಗೂ ದೇವರಾಜ ಅರಸು ವಸತಿ ಶಾಲೆ ನೂತನ ಕಟ್ಟಡಗಳ ಶಿಲಾನ್ಯಾಸ ನೆರವೇರಿಸಿ ‘ಹೃದಯವಂತ ಆರ್.ಎಲ್.ಜಾಲಪ್ಪ ಜೀವನ ಪಥ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾನು ಮೊದಲ ಬಾರಿ ಸಚಿವನಾಗಲು ರಾಚಯ್ಯನವರಷ್ಟೇ ಜಾಲಪ್ಪ ಅವರೂ ಕಾರಣ. ಜಾಲಪ್ಪನವರಿಗೆ ಹಿಂದುಳಿದವರ ಏಳಿಗೆಯ ವಿಚಾರದಲ್ಲಿ ದೂರದೃಷ್ಟಿ ಇತ್ತು. ಹೀಗಾಗಿ ಆಗಲೆ ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಮೊದಲಿಗೆ 150 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಈಗ 40 ಸಾವಿರದಷ್ಟು ವಿದ್ಯಾರ್ಥಿಗಳು ನಾನಾ ವಿಭಾಗಗಳಲ್ಲಿ ಓದುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ಬಹಳ ಸ್ವಾಭಿಮಾನಿ ಆಗಿದ್ದ ಜಾಲಪ್ಪನವರು ನನ್ನ ರಾಜಕೀಯ ಏಳಿಗೆಗೆ ಕಾರಣಕರ್ತರು. ನನ್ನನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ಜಾಲಪ್ಪನವರು ದೇವೇಗೌಡರ ಎದುರು ಹಠ ಹಿಡಿದು ಆಗ್ರಹ ಪೂರ್ವಕವಾಗಿ ಒತ್ತಾಯಿಸಿದ್ದರು. ನನ್ನ ಹಾಗೂ ಜೆ.ಎಚ್.ಪಟೇಲ್ ನಡುವೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ನಡೆಯುತ್ತಿದ್ದಾಗ, ನನ್ನ ಪರವಾಗಿ ಗಟ್ಟಿಯಾಗಿ ನಿಂತು ದೇವೇಗೌಡರಿಗೆ ನನ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಜಾಲಪ್ಪ ಒತ್ತಾಯಿಸಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡರು.
ನಾನು ಮೊದಲ ಬಾರಿ ಹಣಕಾಸು ಸಚಿವನಾಗುವಾಗಲೂ ಜಾಲಪ್ಪನವರ ಪ್ರಯತ್ನ ಇದೆ. ನಾನು ಕಂದಾಯ ಸಚಿವನಾಗಬೇಕು ಎಂದುಕೊಂಡಿದ್ದೆ. ಆದರೆ, ನಾನು ಹಣಕಾಸು ಸಚಿವ ಆಗಲೇಬೇಕು ಎಂದು ಸೂಚಿಸಿದರು. ಅವರ ಕಾರಣದಿಂದ ನಾನು ಇಂದು ಹದಿನಾರು ಬಜೆಟ್ ಗಳನ್ನು ಮಂಡಿಸುವಂತಾಯಿತು. ಇಂದು ನಾನು ರಾಜಕೀಯವಾಗಿ ಈ ಮಟ್ಟದ ಏಳಿಗೆ ಆಗಿದ್ದರೆ ಅದರಲ್ಲಿ ಜಾಲಪ್ಪನವರ ಪಾತ್ರ ದೊಡ್ಡದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅತ್ಯಂತ ಹೃದಯವಂತರಾಗಿದ್ದ ಜಾಲಪ್ಪನವರು ಆತಿಥ್ಯದಲ್ಲೂ ಎತ್ತಿದ ಕೈ. ತುಪ್ಪದ ದೋಸೆ ಮಾಡಿ ಸ್ವತಃ ಬಡಿಸಿದ್ದರು. ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ರಾಜಕೀಯ ಜೀವನವನ್ನು ಮುಡಿಪಾಗಿ ಇಟ್ಟಿದ್ದರು. ಅತ್ಯಂತ ಧೈರ್ಯವಂತರಾಗಿದ್ದ ಜಾಲಪ್ಪ ಅವರು ಸತ್ಯ ಹೇಳುವಾಗ ಮುಲಾಜಿಲ್ಲದೆ ಎದೆಗಾರಿಕೆ ಪ್ರದರ್ಶಿಸುತ್ತಿದ್ದರು ಎಂದು ಸ್ಮರಿಸಿ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.