ದೇವನಹಳ್ಳಿ | ಯಾವುದೇ ಷರತ್ತುಗಳಿಲ್ಲದೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹ
ದೇವನಹಳ್ಳಿ : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲಾಗುವುದು, ರೈತರ ಇಚ್ಛೆಯಂತೆ ಕೃಷಿ ಭೂಮಿಯನ್ನಾಗಿ ಮುಂದುವರೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿರುವುದರಿಂದ ಯಾವುದೇ ಷರತ್ತುಗಳಿಲ್ಲದೆ ಭೂಸ್ವಾಧೀನವನ್ನು ಕೂಡಲೇ ರದ್ದುಪಡಿಸಬೇಕು ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಮಂಗಳವಾರ 1,339 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶಿಫಾರಾಸ್ಸಿನ ಪತ್ರದ ಬಗ್ಗೆ ರೈತರು ಚರ್ಚಿಸಿ, ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸುವ ಮತ್ತು ಪಹಣಿಯಲ್ಲಿ ದಾಖಲಿಸುವ ನಿಯಮಗಳನ್ನು ರೂಪಿಸಲು ಸಮಿತಿ ರಚಿಸಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಭೂಸ್ವಾಧೀನ ವಿರೋಧಿ ಸಮಿತಿಯು ವಿರೋಧಿಸುತ್ತದೆ ಮತ್ತು ಖಂಡಿಸುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಹೋರಾಟಗಾರ್ತಿ ಪ್ರಭಾ ಬೆಳವಂಗಲ ಮಾತನಾಡಿ, ಇದು ರೈತರ ಹಿತರಕ್ಷಣೆಯಲ್ಲ, ಬದಲಿಗೆ ಭೂಮಿ ನೀಡದ ರೈತರ ಮೇಲೆ ಸೇಡು ತೀರಿಸಿಕೊಳ್ಳುವ ತಂತ್ರವಾಗಿದೆ. ‘ಶಾಶ್ವತ ವಿಶೇಷ ಕೃಷಿ ವಲಯ'ದ ಹೆಸರಿನಲ್ಲಿ ರೈತರ ಕೃಷಿ ಭೂಮಿಯ ಮೌಲ್ಯವನ್ನು ಕುಗ್ಗಿಸಿ, ಅವರ ಮೇಲೆ ಒತ್ತಡ ಹೇರಿ ಭೂಮಿಯನ್ನು ಕಸಿಯುವ ಹುನ್ನಾರ ಎಂದು ಟೀಕಿಸಿದರು.
ಹೋರಾಟಗಾರ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, ಸರಕಾರ ಯಾವುದೇ ರೀತಿಯ ನಿರ್ಬಂಧಗಳನ್ನು ಹೇರದೆ, 13 ಗ್ರಾಮಗಳ 1,777 ಎಕರೆ ಭೂಮಿಯನ್ನು ಪ್ರಸ್ತುತ ಇರುವಂತೆ ಕೃಷಿ ವಲಯವನ್ನಾಗಿ ಮುಂದುವರಿಸಿ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವ ಅಧಿಕೃತ ಆದೇಶವನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.
ಹೋರಾಟದಲ್ಲಿ ಸಮಿತಿಯ ಮುಖಂಡ ನಲ್ಲಪನಹಳ್ಳಿ ನಂಜಪ್ಪ, ರೈತರಾದ ವೆಂಕಟಮ್ಮ, ಅಶ್ಥತಪ್ಪ, ತಿಮ್ಮರಾಯಪ್ಪ, ಗೋಪಿನಾಥ್, ವೆಂಕಟರಮಣಪ್ಪ, ದೇವರಾಜು, ಲೋಕೇಶ್, ನಂಜೇಗೌಡ, ಮುನಿರಾಜು, ಮುನಿಶ್ಯಾಮಪ್ಪ ಮುಕುಂದ, ಶ್ರೀನಿವಾಸ್, ಪ್ರಮೋದ್, ಗೋಪಾಲಗೌಡ, ಕೃಷ್ಣಪ್ಪ, ನಾರಾಯಣಮ್ಮ, ಲಕ್ಷ್ಮಮ್ಮ, ಮಂಜುನಾಥ್, ವೆಂಕಟೇಶ್, ಮುನಿವೆಂಕಟಮ್ಮ, ಪಿಳ್ಳಪ್ಪ, ಕೃಷ್ಣಪ್ಪ, ಸೇರಿದಂತೆ 13ಹಳ್ಳಿಗಳ ರೈತ ಮುಖಂಡರು ಭಾಗವಹಿಸಿದ್ದರು.