×
Ad

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕೇ ಸಿಗುತ್ತದೆ : ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು

► "ಹನುಮಂತನ ಎದೆಯಲ್ಲಿ ರಾಮನಿದ್ದಂತೆ ಸಿದ್ದರಾಮಯ್ಯನವರ ಎದೆಯಲ್ಲಿ ಬಸವಣ್ಣನಿದ್ದಾನೆ" ► 'ಬಸವ ಸಂಸ್ಕೃತಿ ಅಭಿಯಾನʼದ ಸಮಾರೋಪ ಸಮಾರಂಭ

Update: 2025-10-05 17:13 IST

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಾಸೆಯಿಂದಾಗಿ ರಾಜ್ಯದಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯ ಮುದ್ರೆ ಸಿಕ್ಕಿದೆ. ಈಗ ಕೇಂದ್ರ ಸರಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕಾಗಿದೆ. ಅಲ್ಲಿಂದಲೂ ಸಹ ಲಿಂಗಾಯತ ಧರ್ಮಕ್ಕೆ ಈ ಒಪ್ಪಿಗೆಯ ಮುದ್ರೆ ಒಂದಿಲ್ಲೊಂದು ದಿನ ಸಿಕ್ಕೇ ಸಿಗುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಹೇಳಿದ್ದಾರೆ.

ಇಲ್ಲಿನ ಅರಮನೆ ಮೈದಾನದಲ್ಲಿ ರವಿವಾರ ಏರ್ಪಡಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಬೃಹತ್‌ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹನುಮಂತನ ಎದೆಯಲ್ಲಿ ರಾಮನಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದೆಯಲ್ಲಿ ಬಸವಣ್ಣನಿದ್ದಾನೆ. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಹತ್ತಾರು ಬಸವಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಯ ಕೆಲಸ ಬಾಕಿ ಉಳಿದಿದೆ. ಮುಖ್ಯಮಂತ್ರಿಗಳು ಇದೊಂದು ಕೆಲಸವನ್ನು ಮಾಡಬೇಕು. ಅಲ್ಲಿ ವಚನ ಸಾಹಿತ್ಯ ಕುರಿತು ಸಂಶೋಧನೆ ಮತ್ತು ಚಿಂತನೆಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಲಿಂಗಾಯತರು ಸಿಎಂ ಜತೆ ನಿಲ್ಲಬೇಕು : ಎಂ.ಬಿ.ಪಾಟೀಲ್‌

ಸಚಿವ ಮತ್ತು ಸಮುದಾಯದ ಮುಖಂಡ ಎಂ.ಬಿ.ಪಾಟೀಲ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಸಮುದಾಯಕ್ಕೆ ಲಿಂಗಾಯತ ನಾಯಕರಿಗಿಂತ ಹೆಚ್ಚು ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ, ಮಹಿಳಾ ವಿ.ವಿ.ಗೆ ಅಕ್ಕಮಹಾದೇವಿಯ ಹೆಸರು, ಬಸವಣ್ಣನನ್ನು ʼಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಇಂತಹ ಸಿದ್ದರಾಮಯ್ಯನವರ ಋಣ ಲಿಂಗಾಯತರ ಮೇಲಿದೆ. ಹೀಗಾಗಿ, ಲಿಂಗಾಯತ ಸಮುದಾಯವೂ ಅವರ ಜೊತೆಗೆ ನಿಲ್ಲಬೇಕಾಗಿದೆ ಎಂದಿದ್ದಾರೆ.

ಲಿಂಗಾಯತರು ಯಾರ ವಿರೋಧಿಗಳೂ ಅಲ್ಲ. ನಮ್ಮದೇನಿದ್ದರೂ ಸಕಾರಾತ್ಮಕ ಚಿಂತನೆಯಾಗಿದೆ. ಲಿಂಗಾಯತ ಧರ್ಮ ಹೆಚ್ಚುಹೆಚ್ಚು ಪ್ರಸಾರವಾಗಿ, ಬಸವ ಭಾರತವಾಗಬೇಕು. ಮುಂದಿನ ದಿನಗಳಲ್ಲಿ ವಚನ ವಿಶ್ವವಿದ್ಯಾಲಯದ ಕನಸು ನನಸಾಗಲಿದೆ. ಭೌಗೋಳಿಕವಾಗಿ ನಾವು ಹಿಂದೂಗಳೇ ಆಗಿದ್ದೇವೆ. ಆದರೆ, ಧರ್ಮದಿಂದ ಲಿಂಗಾಯತರು ಎಂದು ಅವರು ಪ್ರತಿಪಾದಿಸಿದರು.

ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ʻಲಿಂಗಾಯತರು ರಾಜ್ಯದಲ್ಲಿ ತಮ್ಮ ಜನಸಂಖ್ಯೆ ಕಡಿಮೆಯಾಗಿದೆ ಎಂದು ಆತಂಕದ ಮಾತುಗಳನ್ನಾಡುತ್ತಿದ್ದಾರೆ. ಬಸವಣ್ಣ ಹೇಳಿದಂತೆ ಲಿಂಗಾಯತರು ದಲಿತ ಸಮುದಾಯಗಳ ಜನರನ್ನು ಬರಮಾಡಿಕೊಂಡು, ಲಿಂಗಧಾರಣೆ ಮಾಡಿಸಿದ್ದರೆ, ಇಂದು ಅವರ ಸಂಖ್ಯೆ ಶೇಕಡ 17ರ ಬದಲಿಗೆ 87ರಷ್ಟಿರುತ್ತಿತ್ತು. ಈ ಕೆಲಸವನ್ನು ಯಾರೂ ಮಾಡಲಿಲ್ಲ. ಲಿಂಗಾಯತ ಎಂದರೆ ಸಂಕುಚಿತವಾದ ಜಾತಿಯಲ್ಲ; ಅದೊಂದು ಸಂಸ್ಕೃತಿ ಮತ್ತು ಸಂಸ್ಕಾರʼ ಎಂದು ಹೇಳಿದರು.

ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ʻಹಳೇ ಮೈಸೂರು ಭಾಗದಲ್ಲಿ ಬಸವಣ್ಣನವರ ಪ್ರಚಾರ ಹೆಚ್ಚಾಗಬೇಕಾಗಿದೆ. ಹೀಗಾಗಿ ಬೆಂಗಳೂರಿನ ಮೆಟ್ರೋ ರೈಲು ವ್ಯವಸ್ಥೆಗೆ ಬಸವಣ್ಣನ ಹೆಸರಿಡಬೇಕು. ಹಾಗೆಯೇ, ಕಲಬುರಗಿಯಲ್ಲಿರುವ ಕೇಂದ್ರೀಯ ವಿವಿ ಮತ್ತು ರಾಜ್ಯ ಸರಕಾರದ ವಿಶ್ವವಿದ್ಯಾಲಯ ಎರಡಕ್ಕೂ ಬಸವೇಶ್ವರರ ಹೆಸರಿಡಬೇಕು. ಜೊತೆಗೆ ಕೇಂದ್ರ ಸರಕಾರವು ಅವರನ್ನು ʻಕಾಯಕ ತತ್ವ ಪಿತಾಮಹʼ ಎಂದು ಘೋಷಿಸುವಂತೆ ಶಿಫಾರಸು ಮಾಡಬೇಕು. ಏಕೆಂದರೆ, ಮನುಷ್ಯನಿಗೆ ಎಲ್ಲಕ್ಕಿಂತ ಅನ್ನ ಮುಖ್ಯ ಎಂದು ಸಾರಿದ ಮೊದಲಿಗ ಬಸವಣ್ಣನಾಗಿದ್ದಾರೆʼ ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಸ್ವಾಮೀಜಿಗಳು, ಸಚಿವರಾದ ಕೆ.ಎಚ್‌.ಮುನಿಯಪ್ಪ, ಶರಣಪ್ರಕಾಶ್‌ ಪಾಟೀಲ್‌, ಲಕ್ಷ್ಮಿ ಹೆಬ್ಬಾಳ್ಕರ್‌, ಮುಖಂಡರಾದ ಬಿ.ಆರ್‌.ಪಾಟೀಲ್‌, ನಸೀರ್‌ ಅಹಮದ್‌, ಅಶೋಕ್‌ ಖೇಣಿ, ಸಾಹಿತಿ ಗೊ.ರು.ಚನ್ನಬಸಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ಶಿವಾನಂದ ಜಾಮದಾರ್‌ ಮುಂತಾದವರಿದ್ದರು.

ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಭೆಯಲ್ಲಿ ಕೈಗೊಂಡ 5 ಪ್ರಮುಖ ನಿರ್ಣಯ :

► ಲಿಂಗಾಯತರೆಲ್ಲರೂ ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಂತ ದೇಶ ಮೊದಲು. ರಾಷ್ಟ್ರಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸುವುದು.

► 12 ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರು ಹಾಗೂ ಬಸವಾದಿ ಶರಣರು ಸೇರಿ ಸ್ಥಾಪಿಸಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಶಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದು.

► ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳ ನಿಜಧರ್ಮ ಲಿಂಗಾಯತ ಧರ್ಮ. ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪ ಪಂಗಡಗಳನ್ನು ನಾವೆಲ್ಲರೂ ಅಪ್ಪಿಕೊಂಡು, ಅವರ ಅಭುದ್ಯಯಕ್ಕಾಗಿ ಶ್ರಮಿಸುತ್ತಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು.

► ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿತೆ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧಾರಣೆ ಮಾಡುವುದು.

► ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ-ಮರಣದವರೆಗೆ ಶರಣಸಂಸ್ಕೃತಿ ಆಚರಣೆ ಯನ್ನು ಸದಾ ಪಾಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News