ಮಹೇಶ್ ಜೋಶಿ, ಶಿವಾನಂದ ವಿರುದ್ಧ ದೂರು | ಸೂಕ್ತ ಕ್ರಮ ಕೈಗೊಳ್ಳಲು ಸಂಸ್ಕೃತಿ, ಸಹಕಾರ ಇಲಾಖೆಗೆ ಮಹಿಳಾ ಆಯೋಗ ನಿರ್ದೇಶನ
ಮಹೇಶ್ ಜೋಶಿ
ಬೆಂಗಳೂರು : ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ವಿರುದ್ಧ ಸದಸ್ಯರಾದ ಡಾ.ವಸುಂಧರಾ ಭೂಪತಿ ಅವರು ನೀಡಿದ ದೂರನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಮಹಿಳಾ ಆಯೋಗವು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸಹಕಾರ ಇಲಾಖೆಗೆ ನಿರ್ದೇಶನ ನೀಡಿದೆ.
ಬುಧವಾರ ಈ ಕುರಿತು ಮಹಿಳಾ ಆಯೋಗದ ಕಾರ್ಯದರ್ಶಿ, ಸಂಸ್ಕೃತಿ ಇಲಾಖೆಯ ನಿರ್ದೇಶಕರು ಮತ್ತು ಸಹಕಾರ ಉಪನಿಬಂಧಕರಿಗೆ ಪತ್ರ ಬರೆದಿದ್ದು, ವಸುಂಧರಾ ಭೂಪತಿ ಅವರಿಗೆ ರಕ್ಷಣೆ ಒದಗಿಸಿ, ತೆಗೆದುಕೊಂಡ ಕ್ರಮದ ಕುರಿತು ಮಹಿಳಾ ಆಯೋಗಕ್ಕೆ ವರದಿ ನೀಡಬೇಕು ಎಂದು ತಿಳಿಸಿದ್ದಾರೆ.
ವಸುಂಧರಾ ಭೂಪತಿ ಅವರು ಕಸಾಪ ಆಜೀವ ಸದಸ್ಯರಾಗಿದ್ದು, ಇತ್ತೀಚೆಗೆ ಅಧ್ಯಕ್ಷ ಮಹೇಶ ಜೋಶಿ ಹಾಗೂ ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಸರ್ವ ಸದಸ್ಯರ ಸಭೆಗೆ ವಸುಂಧರಾ ಭೂಪತಿ ಬಂದರೆ ‘ಕುತ್ತಿಗೆ ಹಿಡಿದು ದಬ್ಬುತ್ತೇವೆ’ ಎಂದು ಹೇಳಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಇದರಿಂದ ಅವರು ಮಾನಸಿಕ ಹಿಂಸೆಗೆ ಒಳಗಾಗಿರುವುದಾಗಿ, ಘನತೆಗೆ ಧಕ್ಕೆ ಉಂಟಾಗಿರುವುದಾಗಿ ತಿಳಿಸಿದ್ದು, ಸೂಕ್ತ ಕ್ರಮವಹಿಸಿ, ನ್ಯಾಯ ಮತ್ತು ರಕ್ಷಣೆ ಒದಗಿಸಿರುವ ಕುರಿತು ವರದಿಯನ್ನು ಸಲ್ಲಿಸಬೇಕು ಎಂದು ಮಹಿಳಾ ಆಯೋಗದ ಕಾರ್ಯದರ್ಶಿ ಪತ್ರದಲ್ಲಿ ತಿಳಿಸಿದ್ದಾರೆ.